Karnataka Budget 2023: ಸರ್ಕಾರಕ್ಕೆ ಬಡಗಲಪುರ ನಾಗೇಂದ್ರ ಇಟ್ಟ ಬೇಡಿಕೆಗಳಿವು
ಮೈಸೂರು, ಫೆಬ್ರವರಿ, 10: ಬಜೆಟ್ ಮಂಡನೆಗೂ ಮುನ್ನ ರೈತ ಮುಖಂಡರನ್ನು ಆಹ್ವಾನಿಸಿ ಚರ್ಚೆ ನಡೆಸುವುದು ವಾಡಿಕೆಯಾಗಿದೆ. ಕಳೆದ ವರ್ಷ ಬಜೆಟ್ ಸಭೆಗೆ ಆಹ್ವಾನಿಸಿದ್ದರು. ಆದರೆ, ಸಭೆ ನಡೆಸಲಿಲ್ಲ. ಚಳವಳಿಗಾರರನ್ನು ಎದುರಿಸಲಾಗದೆ. ಬಜೆಟ್ ಸಭೆಗೆ ರೈತರನ್ನು ಕೂಡ ಕರೆದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮೈಸೂರಿನಲ್ಲಿ ಅಸಮಾಧಾನ ಹೊರಹಾಕಿದರು.
ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಲು ಮನವಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್ ಮಂಡನೆಗೂ ಮುನ್ನ ರೈತ ಮುಖಂಡರನ್ನು ಆಹ್ವಾನಿಸಿ ಚರ್ಚೆ ನಡೆಸುವುದು ವಾಡಿಕೆಯಾಗಿದೆ. ಈ ವರ್ಷ ಸಭೆಗೆ ಕರೆಯದೇ ಬರೆದು ಕಳುಹಿಸುವಂತೆ ಹೇಳಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು. ಹಾಗೆಯೇ ರೈತ ಹೋರಾಟಗಾರ ಕೆ.ಎಸ್.ಪುಟ್ಟಣಯ್ಯ ಅಧ್ಯಯನ ಪೀಠ ಮೈಸೂರು ವಿವಿ ಅಥವಾ ಮಂಡ್ಯ ವಿವಿಯಲ್ಲಿ ಹಾಗೂ ಶಿವಮೊಗ್ಗ ವಿವಿಯಲ್ಲಿ ಎನ್.ಡಿ.ಸುಂದರೇಶನ್ ಅಧ್ಯಯನ ಪೀಠ ಆರಂಭಿಸಬೇಕು. ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಿ ಗುಣಾತ್ಮಕ ಶಿಕ್ಷಣವನ್ನು ನೀಡಲು ಹೆಚ್ಚು ಒತ್ತು ಕೊಡಬೇಕು. ದುಡಿಯುವ ವರ್ಗಕ್ಕೆ ಉಚಿತ ಚಿಕಿತ್ಸೆ ನೀಡಬೇಕು. ಹಾಗೆಯೇ ಯುವಕರು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಉತ್ತೇಜಿಸುವ ಕಾರ್ಯಕ್ರಮ ರೂಪಿಸಬೇಕು ಎಂದು ಮನವಿ ಮಾಡಿದರು.
ನರೇಗಾ ಕೂಲಿ ದಿನಗಳನ್ನ 600ಕ್ಕೆ ಹೆಚ್ಚಿಸಿ
ನರೇಗಾ ಕೂಲಿ ದಿನಗಳನ್ನು 200ಕ್ಕೆ ಹೆಚ್ಚಿಸುವುದರ ಬದಲು, 600ಕ್ಕೆ ಏರಿಕೆ ಮಾಡಬೇಕು. ಗೃಹ ವಿದ್ಯುತ್ ಬಾಕಿಯನ್ನು ಮನ್ನಾ ಮಾಡಬೇಕು. 5 ಲಕ್ಷ ರೂಗಳವರೆಗೆ ಕೃಷಿ ಬೆಳೆ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ನೀಡಬೇಕು. ತುಂತುರು ನೀರಾವರಿಗೆ ಶೇಕಡಾ 100ರಷ್ಟು ಸಹಾಯಧನ, ಮಹಿಳಾ ರೈತರಿಗೆ 10 ಲಕ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಬೇಕು ಎಂದು ಮನವಿ ಮಾಡಿದರು.

10 ಸಾವಿರ ರೂ. ಸಹಾಯ ಧನ ನೀಡಿ
ಭೂಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಹಾಗೂ ಸಂರಕ್ಷಣಾ ಕಾಯ್ದೆ ವಾಪಸ್ ಪಡೆಯಬೇಕು. ಆಂಧ್ರ ಸರ್ಕಾರದ ಮಾದರಿಯಲ್ಲಿ ಮುಂಗಾರಿನಲ್ಲಿ ಹೆಕ್ಟೇರ್ಯೊಂದಕ್ಕೆ 10 ಸಾವಿರ ರೂಪಾಯಿ ಸಹಾಯ ಧನ ನೀಡಬೇಕು. ನಾಟಿ ಹಸು ಸಾಕಣೆಗೆ ಗುಜರಾತ್ ಸರ್ಕಾರದ ಮಾದರಿಯಲ್ಲಿ 400 ರೂಪಾಯಿ ನೀಡಬೇಕು ಎಂದು ಒತ್ತಾಯಿಸಿದರು.
ಫೆ. 13ರಂದು ಎಂ.ಡಿ.ಎನ್ ನೆನಪಿನ ದಿನಾಚರಣೆ
ಚಾಮರಾಜನಗರದಲ್ಲಿ ಫೆಬ್ರವರಿ 13ರಂದು ಪ್ರೊ.ಎಂ.ಡಿ.ನಂಜುಂಡಸ್ವಾಮಿ ನೆನಪಿನ ದಿನಾಚರಣೆ ಹಾಗೂ ರೈತ ಯುವ ಘಟಕ ಚಾಲನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಫೆಬ್ರವರಿ 16ರಂದು ಬೆಂಗಳೂರು ಚಲೋದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ಡಾ.ದರ್ಶನ್ ಪಾಲ್, ಮೇದಾ ಪಾಟ್ಕರ್ ಅವರನ್ನು ಆಹ್ವಾನಿಸಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಮಹಿಳಾ ಹೋರಾಟಗಾರ್ತಿ ನೇತ್ರಾವತಿ, ಎ. ಮಹೇಶ್ ಪ್ರಭು, ಫರ್ನಾಂಡಿಸ್, ಪ್ರೇಮ್ ಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.












Click it and Unblock the Notifications