ಒಣಗುವ ಬೆಳೆಗಳಿಗೆ ಕಾಯಕಲ್ಪ ಕಲ್ಪಿಸಿದ ಕೃಷಿ ಭಾಗ್ಯ
ಕಲಬುರಗಿ, ನವೆಂಬರ್ 05 : ಬರದ ಛಾಯೆಯ ಇಂದಿನ ದಿನಗಳಲ್ಲಿ ಬಹುತೇಕ ರೈತರು ತೊಗರಿ ಬೆಳೆದಿದ್ದು, ಹೂವು ಅರಳುತ್ತಿವೆ. ಮಳೆ ಬರಲಿ ಎಂದು ರೈತರು ಕಾದು ಕೂತಿದ್ದಾರೆ. ರೈತ ಮಹಿಳೆ ಅಡಿವೆಮ್ಮ ಯಲ್ಲಪ್ಪ ಸುಬೇದಾರ್ ಅವರು ಒಣಗುವ ಸ್ಥಿತಿಯಲ್ಲಿರುವ ತಮ್ಮ ಹೊಲದಲ್ಲಿರುವ ಬಿಳಿಜೋಳದ ಬೆಳೆಗೆ ನೀರು ಉಣಬಡಿಸುತ್ತಿದ್ದಾರೆ.
ಅಡಿವೆಮ್ಮ ಯಲ್ಲಪ್ಪ ಸುಬೇದಾರ್ ಜೇವರ್ಗಿ ತಾಲೂಕಿನ ಕೋನಹಿಪ್ಪರಗಾ ಗ್ರಾಮದವರು. ಬರಗಾಲದ ಸಂದರ್ಭದಲ್ಲಿಯೂ ಅಡಿವೆಮ್ಮ ಅವರು ಹೊಲಗಳಿಗೆ ನೀರು ಹಾಯಿಸಲು ಕಾರಣವಾಗಿರುವುದು ಕೃಷಿ ಭಾಗ್ಯ ಯೋಜನೆ. [ರೈತರಿಗಾಗಿ ಸಿದ್ದರಾಮಯ್ಯ ಸರ್ಕಾರದ ಕೊಡುಗೆ ಕೃಷಿ ಭಾಗ್ಯ]

ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಿಸಲು 2014-15ನೇ ಸಾಲಿನಲ್ಲಿ ಲಾಟರಿ ಮೂಲಕ ಅಡಿಮೆಮ್ಮ ಅವರನ್ನು ಆಯ್ಕೆ ಮಾಡಲಾಗಿತ್ತು. ಯೋಜನೆಯ ಪ್ರಯೋಜನ ಪಡೆದ ಅವರು, 2.6 ಎಕರೆ ಕೃಷಿ ಭೂಮಿಯಲ್ಲಿ ಸಬ್ಸಿಡಿ ಪ್ರಯೋಜನ ಪಡೆದುಕೊಂಡು 12x12 ಮೀಟರ್ ಅಗಲ ಮತ್ತು 10 ಅಡಿ ಆಳದ ಕೃಷಿ ಹೊಂಡ ನಿರ್ಮಿಸಿಕೊಂಡರು. [ಕೊಡಗಿನ ಕಿತ್ತಳೆ ಬೆಳೆದ ಸುರೇಶ್ ಸುಬ್ಬಯ್ಯ ಸಾಧನೆ ಕಥೆ]
ಮಳೆಯಿಂದ ಶೇಖರಣೆಯಾಗುವ ನೀರನ್ನು ಮೇಲೆತ್ತಲು 8 ಎಚ್.ಪಿ. ಡಿಸೇಲ್ ಮೋಟರ್, 700 ಅಡಿಯ ಪೈಪ್ ಮತ್ತು ಸ್ಪ್ರಿಂಕ್ಲರ್ ಅಳವಡಿಸಿಕೊಂಡಿದ್ದಾರೆ. ಮಳೆಯಿಂದ ಶೇಖರಣೆಯಾಗಿರುವ ನೀರನ್ನು ಇದೀಗ ಜೋಳದ ಬೆಳೆಗಳಿಗೆ ಹರಿಸುತ್ತಿದ್ದಾರೆ. [ಕೊಪ್ಪಳ ರೈತರ ಬಾಯಲ್ಲಿ ಪಪ್ಪಾಯಿ ಜಪ!]
ಸ್ಪ್ರಿಂಕ್ಲರ್ ಸುಮಾರು 30 ಚದುರ ಅಡಿವರೆಗಿನ ಪ್ರದೇಶಕ್ಕೆ ನೀರು ಹರಿಸಲಾಗುತ್ತದೆ. ಉಳಿದ ಭಾಗಕ್ಕೆ ನೀರುಣಿಸಲು ಅದನ್ನು ಸ್ಥಳಾಂತರ ಮಾಡಿಕೊಂಡು ಸಂಪೂರ್ಣ ಹೊಲಕ್ಕೆ ನೀರು ಒದಗಿಸುತ್ತಾರೆ. ಬರ ಅವರಿಸಿರುವ ಇಂದಿನ ದಿನಗಳಲ್ಲಿ ಊರಿನ ಇತರೆ ಬೆಳೆಗಳಿಗೆ ಔಷಧಿ ಸಿಂಪಡಣೆ ಮಾಡಲು ಮತ್ತು ದನ-ಕರುಗಳಿಗೆ ನೀರು ಪೂರೈಸಲು ಈ ಕೃಷಿ ಹೊಂಡದ ನೀರು ಆಧಾರವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಉಳಿದ ರೈತರೂ ಹೀಗೆ ಮಾಡಬಹುದು : ತಮ್ಮ ಜಮೀನಿನಲ್ಲಿ ಹತ್ತಿ ಮತ್ತು ಜೋಳ ಬೆಳೆದಿರುವ ಅಡಿವೆಮ್ಮ ಅವರು, 'ಸರ್ಕಾರದ ಕೃಷಿ ಭಾಗ್ಯ ಯೋಜನೆ ಉತ್ತಮವಾಗಿದೆ. ಸರ್ಕಾರ ನೀಡುವ ಸಹಾಯಧನ ಮತ್ತು ಸ್ವಂತದ ಒಂದಿಷ್ಟು ಹಣ ಖರ್ಚು ಮಾಡಿ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದೇನೆ. ನಮಗೇನ್ ನೌಕರಿ ಚಾಕರಿಯಿಲ್ರೀ. ಭೂತಾಯಿ ಮ್ಯಾಲ್ ನಂಬಿಕೆ ಇಟ್ಟು ಇದ್ನೆಲ್ಲ ಮಾಡಿದ್ದೀವಿ' ಎಂದು ಹೇಳುತ್ತಾರೆ.
ಕೃಷಿಹೊಂಡದ ನೀರನ್ನು ಡೀಸೆಲ್ ಪಂಪಸೆಟ್ನಿಂದ ಬೆಳೆಗಳಿಗೆ ಹರಿಸಲು ಹೆಚ್ಚು ಖರ್ಚಾಗುತ್ತದೆ. ಈ ಯೋಜನೆಯಲ್ಲಿ ಸೋಲಾರ್ ಪಂಪಸೆಟ್ ಅಳವಡಿಸಿದರೆ ರೈತರಿಗೆ ಮತ್ತಷ್ಟು ಅನುಕೂಲವಾಗುತ್ತದೆ. ಉಳಿದ ರೈತರು ಕೃಷಿಹೊಂಡ ನಿರ್ಮಿಸಿಕೊಂಡರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು. [ಮಾಹಿತಿ : ಗುಲ್ಬರ್ಗ ವಾರ್ತೆ]












Click it and Unblock the Notifications