ರಾಯಚೂರು: ಐಸಿಸಿ ಸಭೆಯತ್ತ ಅನ್ನದಾತರ ಚಿತ್ತ; 2ನೇ ಬೆಳೆಯ ಭವಿಷ್ಯ ನಿರ್ಧಾರ
ರಾಯಚೂರು, ನವೆಂಬರ್ 22: ಮುಂಗಾರು ಉತ್ತಮವಾಗಿ ಸುರಿದಿದ್ದರಿಂದ ಮೊದಲ ಬೆಳೆಗೆ ನೀರು ಪಡೆದಿದ್ದ ರೈತರಿಗೆ ಈಗ ಎರಡನೇ ಬೆಳೆಗೆ ನೀರಿನ ಚಿಂತೆ ಶುರುವಾಗಿದೆ. ನವೆಂಬರ್ 23ರಂದು ಬೆಂಗಳೂರಿನ ವಿಕಾಸಸೌಧ ಸಭಾಂಗಣದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆ(ಐಸಿಸಿ ಸಭೆ) ಜರುಗಲಿದ್ದು, ಕೃಷ್ಣಾ ಒಡಲಿನ ರೈತರ ಚಿತ್ತ ಸಭೆಯತ್ತ ನೆಟ್ಟಿದೆ.
ನಾರಾಯಣಪುರ ಬಲದಂಡೆ ನಾಲೆ ತಾಲೂಕಿನ ರೈತರ ಜೀವನಾಡಿ. ಪ್ರತಿವರ್ಷ ನವೆಂಬರ್ ಕೊನೆ ವಾರದಲ್ಲಿ ನೀರು ಬಂದ್ ಮಾಡಿ ಡಿಸೆಂಬರ್ನಲ್ಲಿ ಎರಡನೇ ಬೆಳೆಗೆ ನೀರು ಬಿಡಲಾಗುತ್ತಿದೆ. ನೀರಿನ ಕೊರತೆಯಿದೆ ಎಂದು ವಾರಬಂಧಿ ಹಾಕಲಾಗುತ್ತಿದ್ದು, ಇದು ರೈತರ ನಿದ್ದೆಗೆಡೆಸಿದೆ. ಹತ್ತಿ, ತೊಗರಿ, ಮೆಣಸಿನಕಾಯಿ, ಶೇಂಗಾ, ಜೋಳ, ಕಡಲೆ, ಸಜ್ಜೆ, ಸೂರ್ಯಕಾಂತಿ ರೈತರಿಗೆ ವಾರಬಂಧಿ ಅಷ್ಟಾಗಿ ಪೆಟ್ಟು ನೀಡಲ್ಲ. ಆದರೆ ಭತ್ತ ನಾಟಿ ಮಾಡಿದ ಟೇಲೆಂಡ್ ಭಾಗದ ರೈತರಿಗೆ ವಾರಬಂಧಿ ಮಗ್ಗಲ ಮುಳ್ಳಾಗಿ ಕಾಡುತ್ತಿದೆ. 7 ದಿನ ನೀರು ಬಂದ್ ಆದರೂ ಭತ್ತ ಸೇರಿ ವಾಣಿಜ್ಯ ಬೆಳೆ ಬೆಳೆದ ರೈತರಿಗೆ ಹೊಡೆತ ನೀಡಲಿದೆ.
ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದಲ್ಲಿ ನೀರಿದ್ದರೂ ರೈತರು ಕಿರಿಕಿರಿ ಮಾಡಬಹುದು ಎಂದು 8-10 ದಿನ ನೀರು ಕಡಿಮೆ ಬಿಡುವ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಭತ್ತದ ಬೆಳೆಗೆ ಕನಿಷ್ಠ 90-95ದಿನ ಸಮಯಬೇಕು. 64-68 ದಿನ ಸಾಕು ಎನ್ನುತ್ತಾರೆ ಅಧಿಕಾರಿಗಳು. ಮುಂಗಾರು ಬೆಳೆ ನಾಟಿ ವಿಳಂಬ, ರಾಶಿ ಯಂತ್ರಗಳ ಕೊರತೆಯಿಂದ ನಾಟಿ ಕೂಡ ವಿಳಂಬವಾಗಲಿದೆ. ಕಳೆದ ವರ್ಷ ಡಿಸೆಂಬರ್ ಮೊದಲ ವಾರದಿಂದ ಮಾರ್ಚ್ ಮೂರನೇ ವಾರದವರೆಗೆ ನೀರು ಹರಿಸಲಾಗಿತ್ತು. ನೀರು ಕಡಿಮೆಯಾದ ಕಾರಣ ರೈತರು ಹೋರಾಟ ಮಾಡಿದ್ದರಿಂದ ಹೆಚ್ಚುವರಿ ನೀರು ಹರಿಸಲಾಗಿತ್ತು. ಇದರಿಂದ ಭತ್ತ, ಮೆಣಸಿನಕಾಯಿ, ಹತ್ತಿ ಸೇರಿ ವಿವಿಧ ಬೆಳೆಗಳು ರೈತರ ಕೈಸೇರಿಸಿದ್ದವು. ಈ ಬಾರಿಯೂ ಏಪ್ರೀಲ್ 10ರವರೆಗೆ ನೀರು ಹರಿಸಬೇಕು ಎನ್ನುವುದು ರೈತರ ಬೇಡಿಕೆಯಾಗಿದೆ.

''ವಾರಬಂಧಿ ಇಲ್ಲದೆ ಏಪ್ರಿಲ್ 10ರವರೆಗೆ ನೀರು ಹರಿಸಬೇಕು ಎನ್ನುವುದು ನಮ್ಮ ಬೇಡಿಕೆ. ಭತ್ತ ಬೆಳೆಗಾರರು ಹಾಗೂ ಟೇಲೆಂಡ್ ಭಾಗದ ರೈತರಿಗೆ ನೀರು ಒದಗಿಸಲು ಕನಿಷ್ಠ 90ದಿನ ನೀರು ಕೊಡಬೇಕು. ಆದರೆ, ಅಧಿಕಾರಿಗಳು ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಸಾಧ್ಯತೆಯಿದೆ. ಈ ಬಗ್ಗೆ ಜನಪ್ರತಿನಿಧಿಗಳು ಎಚ್ಚರಿಕೆವಹಿಸಬೇಕಿದೆ'' ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ್ ಪಾಟೀಲ್ ಇಂಗಳದಾಳ ಹೇಳಿದರು.
ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯ ಸೇರಿ ನಮಗೆ 110-113 ಟಿಎಂಸಿ ಅಡಿವರೆಗೆ ನೀರಿನ ಲಭ್ಯತೆಯಿದೆ. ನ.23 ರಂದು ಮಧ್ಯಾಹ್ನ 3ಕ್ಕೆ ಐಸಿಸಿ ಸಭೆಯಿದ್ದು, ನೀರು ಬಿಡುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ರೈತರ ಬೆಳೆಗೆ ಸಮರ್ಪಕ ನೀರು ಒದಗಿಸಲು ವಾರಬಂಧಿ ಪದ್ಧತಿ ಅನಿವಾರ್ಯವಾಗಿದೆ ಎಂದು ನಾರಾಯಣಪುರ ಡ್ಯಾಂ ಎಇಇ ಪ್ರಕಾಶ ಹೇಳಿದ್ದಾರೆ.












Click it and Unblock the Notifications