ಹೈದರಾಬಾದ್ ಟೆಕ್ಕಿಗಳು ಏನು ಮಾಡ್ತಿದ್ದಾರೆ ನೋಡಿ
ಕೃಷಿ ಕ್ಷೇತ್ರ (ಉದ್ಯಮ)ದಲ್ಲಿ ಹೊಸ ಕೃಷಿ/ಉದ್ಯಮಿಗಳು ಕಾಣಿಸಿಕೊಂಡಿದ್ದಾರೆ. ಎಲ್ಲಿ? ಯಾರು ಅವರು? ಎಂಬ ಪ್ರಶ್ನೆಗೆ ಉತ್ತರವಾಗಿ ಆಂಧ್ರ ಪ್ರದೇಶದ ಟೆಕ್ಕಿಗಳು ಕಾಣಿಸಿಕೊಳ್ಳುತ್ತಾರೆ. ಅಲ್ರಿ ಎಲ್ಲಿಯ ಕೃಷಿ? ಎಲ್ಲಿಯ ಸಾಫ್ಟ್ ವೇರುಗಳು? ಎಂದು ಆಶ್ಚರ್ಯ ಚಕಿತರಾಗಬೇಡಿ.
ಇದು ನಿಜ್ಜಾ. ಆಂಧ್ರದ ಹೈಟೆಕ್ ಸ್ಥಳವಾದ ಹೈದರಾಬಾದಿನ ಟೆಕ್ಕಿಗಳು ನೇರವಾಗಿ ಭೂತಾಯಿಯ ಮಡಿಲಲ್ಲಿ ಕೃಷಿ ಮಾಡಲು ಪಣತೊಟ್ಟಿದ್ದಾರೆ. ಅದೂ ಎಂಥಾ ಕೃಷಿ ಅಂತೀರಿ. ದೇವ ಮರವೆಂದೇ ಪೂಜನೀಯವಾದ ಶ್ರೀಗಂಧದ ಮರಗಳನ್ನು ನೆಟ್ಟಿದ್ದಾರೆ.
ಎಸಿ ಬಿಟ್ಟು ಬಿಸಿಲಿಗೆ: ಎಸಿ ಕಚೇರಿಗಳಲ್ಲಿ ಕುಳಿತು ತೊಡೆಯ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಂಡು ಕೆಲಸ ಮಾಡುವ ಮಂದಿ ಗುದ್ದಲಿ ಹಿಡಿದು ಮೈಬಗ್ಗಿಸಿ ಬಟಾಬಯಲಿನಲ್ಲಿ ಬಿರುಬಿಸಿಲಿನಲ್ಲಿ ಗಂಧದ ಮರ ನಾಟಿ ಕೆಲಸವನ್ನು ಜೋರಾಗಿ ಮಾಡುತ್ತಿದ್ದಾರೆ.

sandalwood farming
ಅಂದರೆ ಶ್ರೀಗಂಧದ ಮರ ಬೆಳೆಸುವಿಕೆ ಎಂದೆಂದಿಗೂ ಲಾಭದಾಯಕವೇ. ಆದರೆ ನಮ್ಮ ಕರ್ನಾಟಕ ಸರಕಾರ ಅದಕ್ಕೆ ಅನಗತ್ಯ ನಿಯಂತ್ರಣ ಹೇರಿ ಗಂಧದ ಕೃಷಿಗೆ ಕೊಡಲಿ ಪೆಟ್ಟು ನೀಡುತ್ತದೆ. ಇತ್ತೀಚೆಗೆ 5 ವರ್ಷದ ಹಿಂದೆ ಗಂಧದ ಮರ ಕೃಷಿಯನ್ನು ಮುಕ್ತಗೊಳಿಸಿತ್ತಾದರೂ ಅದನ್ನು ಸರಿಯಾಗಿ ಪೋಷಿಸುತ್ತಿಲ್ಲ.
ಒಂದೆಡೆ ಕರ್ನಾಟಕ ಸಾಬೂನು ಮಂಡಳಿ (Karnataka Soaps And Detergents Limited) ತನ್ನ ಸುವಿಖ್ಯಾತ ಸ್ಯಾಂಡಲ್ ಸೋಪ್ ತಯಾರಿಕೆಗೆ ಗಂಧದ ಮರ ಸಿಗದೆ ಪರದಾಡುತ್ತಿರುವಾಗ ರಾಜ್ಯದಲ್ಲಿ ಗಂಧದ ಮರ ಕೃಷಿಗೆ ಉತ್ತೇಜನ ನೀಡದಿರುವುದು ಪರಿಸ್ಥಿತಿಯ ವ್ಯಂಗ್ಯವೇ ಸರಿ. ಗಂಧ ಸಿಗದೆ ವಿಶ್ವೇಶ್ವರಯ್ಯನವರು ಸ್ಥಾಪಿಸಿದ KDSLನ ಅನೇಕ ಘಟಕಗಳು ಬಾಗಿಲು ಹಾಕಿಕೊಂಡಿವೆ.

ಆಂಧ್ರದಲ್ಲಿ ಸುಗಂಧವೇ!?
ಇದನ್ನು ಕೇಳಿ ನಿಜಕ್ಕೂ ಆಶ್ಚರ್ಯವಾಗುತ್ತದೆ. ಆಂಧ್ರದ ಬರಡು ನೆಲದಲ್ಲಿ ಗಂಧದ ನಾಟಿ ಮಾಡುವುದೆಂದರೆ ತಮಾಷೆ ಅಲ್ಲ. ಅದೂ ಹೈದರಾಬಾದಿನ ಸುತ್ತಮುತ್ತ 100 ಕಿಮೀ ಫಾಸಲೆಯಲ್ಲಿ ಈಗ ಗಂಧದ ನಾಟಿ ಮಾಡಲಾಗಿದ್ದು ಮುಂದೆ ಹೈದರಾಬಾದನ್ನು ಗಂಧದ ಗುಡಿ ಎನ್ನಲಡ್ಡಿಯಿಲ್ಲ.

Sandalwood (Santalum Spicatum) Plantation
ಹೈದರಾಬಾದಿನ ಟೆಕ್ಕಿಗಳು ಸುಮಾರು 1000 ಎಕರೆಯಲ್ಲಿ ಶ್ರೀಗಂಧದ ನಾಟಿ ಮಾಡಿದ್ದಾರೆ. ಅಳೈರ್, ವಿಕಾರಬಾದ್ ಮತ್ತು ಜಹೀರಾಬಾದಿನ (ರಾಯಲಸೀಮ-ತೆಲಂಗಾಣ ಭಾಗ) ಬರಡು ಭೂಮಿಯಲ್ಲಿ ಈಗ ಗಂಧದ ಗಿಡಗಳು ನಳನಳಿಸುತ್ತಿವೆ.
ಹಾಗೆ ನೋಡಿದರೆ ಬೆವರು ಹರಿಸಲು ಮುಂದಾದ ಟೆಕ್ಕಿಗಳಿಗೆ ಇಲ್ಲಿನ ಬರಡು ಭೂಮಿ ಕಡಿಮೆ ಬೆಲೆಗೇ ಸಿಕ್ಕಿದೆ. ಎಕರೆಗೆ 20 ಲಕ್ಷ ರೂ. ದರದಲ್ಲಿ ಇಲ್ಲಿನ ಭೂಮಿ ಸಿಕ್ಕಿದೆ.

ಹೂಡಿಕೆ ಗಂಧದ ಪರಿಮಳ ಬೀರುತ್ತಿದೆ.
ಎಂಎಂ ರಾವ್ ಎಂಬ ಟೆಕ್ಕಿ 14 ವರ್ಷ ಬಿಪಿಒ ಕ್ಷೇತ್ರದಲ್ಲಿ ದುಡಿದಿದ್ದರು. ಅವರೀಗ ಸಾಫ್ಟ್ ವೇರ್ ಗೆ ಗುಡ್ ಬೈ ಹೇಳಿ ಪೂರ್ಣಕಾಲಿಕ ಗಂಧದ ಬೆಳೆಗಾರರಾಗಿದ್ದಾರೆ. ಇತ್ತೀಚೆಗೆ 4 ಲಕ್ಷ ತೆತ್ತು ಅರ್ಧ ಎಕರೆ ಭೂಮಿಯಲ್ಲಿ Alair ಸಮೀಪ ಖರೀದಿಸಿದೆ. ಅದರ ಬೆಲೆ ಆಗಲೇ 6 ಲಕ್ಷ ರೂ. ಆಗಿದೆ. ಇನ್ನು ಬೆಳೆ ಸಮೇತ ಮಾರಾಟ ಮಾಡಿದರೆ ಇನ್ನೂ ಹೆಚ್ಚಿನ ಮೌಲ್ಯ ಬರುವುದು ಖಚಿತ ಎಂದು ಸಂತಸಗೊಂಡಿದ್ದಾರೆ.

ಉಪ ಬೆಳೆಗಳೂ ಆಧಾರವಾಗಿವೆ
ಗಂಧದ ಬೆಳೆ ಮಧ್ಯೆ ಉಪ ಬೆಳೆಗಳನ್ನೂ ಹಾಕಿದ್ದೇನೆ. ತರಗಾರಿ, ಮಾವಿನ ಹಣ್ಣಿನ ಗಿಡಗಳನ್ನೂ ಹಾಕಿದ್ದೇನೆ. ಅದೂ ಕೈಹಿಡಿದಿದೆ. ಗಂಧದ ಮರಗಳು ಎತ್ತರಕ್ಕೆ ಬೆಳೆಯುವ ವೇಳೆಗೆ ಈ ಉಪ ಬೆಳೆಗಳೇ ನನಗೆ ತಿಂಗಳಿಗೆ 25,000 ರೂ. ತಂದುಕೊಡುತ್ತದೆ ಎಂದು ರಾವ್ ಹೇಳುತ್ತಾರೆ.
ರಾವ್ ಅವರು ತಾವೊಬ್ಬರೇ ಇಲ್ಲಿ ನೆಲೆಯೂರಿಲ್ಲ. ತಮ್ಮ ಜತೆಗೆ ಇನ್ನೊಂದಷ್ಟು ಟೆಕ್ಕಿಗಳನ್ನು ಹೊಸ ವೃತ್ತಿಗೆ ಪರಿಚಯಿಸಿದ್ದಾರೆ. ಶ್ರೀಗಂಧದ ಕೃಷಿ ಲಾಭದಾಯಕ ಎಂಬುದನ್ನು ಮನಗಂಡು ಮತ್ತಷ್ಟು ಟೆಕ್ಕಿಗಳು ಗಂಧದ ಸಸಿ ಹಿಡಿದು ಇತ್ತ ಧಾವಿಸುತ್ತಿದ್ದಾರೆ.

ಶ್ರೀಗಂಧ ಕೃಷಿ ಬಗ್ಗೆ ಇವರಿಗೆ ಗಂಧವೇ ಇಲ್ಲ :
ಅಂದಹಾಗೆ ಸುಗಂಧದೆಣ್ಣೆ ತುಂಬಿಕೊಂಡು ಶ್ರೀಗಂಧದ ಮರಗಳು ಫಲವತ್ತಾಗಲು 15-20 ಹಿಡಿಸುತ್ತದೆ. ಹಾಗಾಗಿ ಇದು ದೀರ್ಘಾವದಿಯದ್ದಾಗಿರುವುದರಿಂದ ಕೆಲವು ಕಾರ್ಪೊರೇಟ್ ಕಂಪನಿಗಳೂ ಶ್ರೀಗಂಧದ ಕೃಷಿಯಲ್ಲಿ ಕೈಜೋಡಿಸಿವೆ. ಕಂಪ್ಯೂಟರ್ ಮೈಂಟಿನ ಟೆಕ್ಕಿಗಳೂ ಶ್ರೀಗಂಧ ಕೃಷಿ ಬಗ್ಗೆ ತಮಗೇನೂ ಗಂಧವಿರುವುದಿಲ್ಲ ಎಂದು ಕಂಪನಿಗಳ ಜತೆ ಕೈಜೋಡಿಸುತ್ತಿದ್ದಾರೆ. ಗಂಧದ ಟೆಕ್ಕಿಗಳ ಜತೆ ಒಪ್ಪಂದಕ್ಕೆ ಬಂದು profit-sharing package ಅಡಿ ಸಮ-ಸಮ ಕೃಷಿಯಲ್ಲಿ ತೊಡಗಿವೆ.

ವೈಜ್ಞಾನಿಕ ಕೃಷಿಗೆ ಒತ್ತು
ಟೆಕ್ಕಿಗಳು ಹೆಚ್ಚು ಆಸಕ್ತಿ ತೋರಿಸುತ್ತಿರುವುದರಿಂದ ಗಂಧದ ಬೆಳೆಯನ್ನು ವೈಜ್ಞಾನಿಕವಾಗಿ ಬೆಳೆಯಲು ತೀರ್ಮಾನಿಸಿರುವ ಕಾರ್ಪೊರೇಟ್ ಕಂಪನಿಗಳು ತೋಟಗಾರಿಕೆ ಮತ್ತು ಮರ ವಿಜ್ಞಾನಿಗಳನ್ನು ಆಡಳಿತ ಮಂಡಲಿಗೆ ನೇಮಕ ಮಾಡಿಕೊಂಡು ವೃತ್ತಿಪರ ಕೃಷಿಗೆ ಮುಂದಾಗಿವೆ.












Click it and Unblock the Notifications