ಮಿಡತೆ, ಬಸವನ ಹುಳು ಹಾವಳಿಯಿಂದ ಬೆಳೆ ರಕ್ಷಿಸಲು ಸಲಹೆಗಳು
ಧಾರವಾಡ, ಜೂನ್ 11; ಧಾರವಾಡ ಜಿಲ್ಲೆಯ ಅಮ್ಮಿನಭಾವಿ ಮತ್ತು ಮರೇವಾಡ ಗ್ರಾಮಗಳ ವ್ಯಾಪ್ತಿಯಲ್ಲಿ ಹೆಸರು, ಉದ್ದು, ಮತ್ತು ಸೋಯಾ ಅವರೆ ಬಿತ್ತನೆಯಾಗಿದೆ. ಬಿತ್ತನೆಗೊಂಡ 10 ದಿನಗಳ ನಂತರ ಬೆಳೆ ಎರಡೆಲೆ ಬೆಳೆದಿದ್ದು, ಪ್ರಾರಂಭದಲ್ಲಿ ಮಿಡತೆಕಾಟ ಕಾಣಿಸಿಕೊಂಡಿತ್ತು.
ಪ್ರಸ್ತುತ ಮಿಡತೆ ಬಾಧೆ ಕಡಿಮೆ ಇದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಹೇಳಿದ್ದಾರೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ತಜ್ಞರು ಕ್ಷೇತ್ರ ವೀಕ್ಷಣೆ ಮಾಡಿದರು.
ಜೂನ್ ತಿಂಗಳ 5ರಂದು ಸುರಿದ ಭಾರೀ ಮಳೆಯಿಂದ ಮೇ ತಿಂಗಳ ಕೊನೆಯ ವಾರದಲ್ಲಿ ಬಿತ್ತಿದ ಬೆಳೆಗಳ ಕ್ಷೇತ್ರದಲ್ಲಿ ಮಳೆಯ ರಭಸಕ್ಕೆ ಮೇಲ್ಮಣ್ಣು ಗಟ್ಟಿಯಾಗಿ ಹೆಪ್ಪುಗಟ್ಟಿದಂತಾಗಿದೆ. ಬೆಳೆಗಳು ಲವಲವಿಕೆಗೊಂಡಿಲ್ಲ. ಸಣ್ಣ ಮಳೆಯಾದಾಗ ಮತ್ತೆ ಚೇತರಿಕೆ ಕಾಣಲಿವೆ. ಮುಂಗಾರು ಬೆಳೆಗಳಲ್ಲಿ ಅಲ್ಲಲ್ಲಿ ಸ್ವಲ್ಪ ಮಟ್ಟಿಗೆ ಬಸವನ ಹುಳುವಿನ ಬಾಧೆ ಸಹ ಕಾಣಿಸಿಕೊಂಡಿದೆ.

ಮಿಡತೆಯ ನಿರ್ವಹಣೆ; ಬೀಜ ಬಿತ್ತಿದ ಬಳಿಕ ಒಣ ಹವೆ ಮುಂದುವರೆದಾಗ ಮಿಡತೆಗಳ ಹಾವಳಿ ಕಂಡು ಬರುತ್ತದೆ. ಮೇಲಿಂದ ಮೇಲೆ ಮಳೆಯಾಗುತ್ತಿದ್ದರೆ ಮಿಡತೆಗಳ ಬಾಧೆ ಇರುವುದಿಲ್ಲ. ಇದರ ನಿರ್ವಹಣೆಗಾಗಿ ಕಸ, ಕಳೆ ತೆಗೆದು ಬದುಗಳನ್ನು ಸ್ವಚ್ಛವಾಗಿಡಬೇಕು.
ಬೀಜ ಬಿತ್ತುವ ಮುಂಚೆ ಹೊಲದ ಸುತ್ತಲೂ ಒಂದು ಅಡಿ ಕಾಲುವೆ ಮಾಡುವುದರಿಂದ ಕೀಟಗಳು ಹೊಲದೊಳಗೆ ಬರುವುದನ್ನು ತಡೆಗಟ್ಟಬಹುದು. ಬದುಗಳ ಮೇಲೆ ಶೇ 2ರ ಮೆಲಾಥಿಯನ್ ಅಥವಾ ಶೇ 4ರ ಫೇನ್ವಾಲರೇಟ್ ಅಥವಾ ಶೇ 1.5 ರ ಕ್ವಿನಾಲಫಾಸ್ ಹುಡಿರೂಪದ ಕೀಟನಾಶಕಗಳನ್ನು ಹೊಲದ ಸುತ್ತಲಿನ ಕಾಲುವೆಯಲ್ಲಿ ಧೂಳೀಕರಿಸಬೇಕು.
ಬಸವನಹುಳು; ಬಸವನಹುಳು ನಿಶಾಚರಿಯಾಗಿದ್ದು ರಾತ್ರಿ ಹೊತ್ತಿನಲ್ಲಿ ಬೆಳೆಯನ್ನು ಬಾಧಿಸುತ್ತದೆ. ಹಗಲು ಹೊತ್ತಿನಲ್ಲಿ ಬದುಗಳಲ್ಲಿ, ಕಸದ ಗುಂಪುಗಳ ಕೆಳಗಡೆ ಆಶ್ರಯ ಪಡೆಯುತ್ತದೆ. ಕೆಲವೊಮ್ಮೆ ಮೋಡಕವಿದ ವಾತಾವರಣ ಮತ್ತು ತುಂತುರು ಮಳೆಯಿದ್ದಾಗ ದಿನವಿಡೀ ಬೆಳೆಯನ್ನು ತಿನ್ನುತ್ತದೆ. ಬೆಳೆಯ 10-15 ದಿನಗಳವರೆಗೆ ಇದರ ಬಾಧೆ ಹೆಚ್ಚು. ತದನಂತರ ಕಾಂಡ ಗಡುಸಾದಾಗ ಬಾಧೆ ಇರುವುದಿಲ್ಲ.
ಹೊಲದ ಸುತ್ತಲೂ ಇರುವ ಬದುಗಳನ್ನು ಸ್ವಚ್ಛಗೊಳಿಸಬೇಕು. ಬದುವಿನ ಸುತ್ತಲೂ ಅಲ್ಲಲ್ಲಿ ಕಸದ ಗುಂಪೆ ಹಾಕಿ ಅದರಲ್ಲಿ ಶೇ 2.5 ರಮೆಟಾಲ್ಡಿಹೈಡ್ ಶಂಕುಹುಳು ನಾಶಕದ ಬಿಲ್ಲೆಗಳನ್ನು ಹಾಕುವುದರಿಂದ ಹುಳುಗಳು ಆಕರ್ಷಿಸಿ ಸಾಯುತ್ತವೆ.
ಬದುವಿನ ಸುತ್ತಲೂ ಅರ್ಧ ಅಡಿ ಅಂಗಲ ಪುಡಿರೂಪದ ಕೀಟನಾಶಕಗಳಾದ ಮೆಲಾಥಿಯನ್, ಕ್ವಿನಾಲಫಾಸ್, ಫೆನ್ವಲರೇಟ್ ಧೂಳೀಕರಿಸಬೇಕು ಎಂದು ರೈತರಿಗೆ ಸಲಹೆ ನೀಡಲಾಗಿದೆ.












Click it and Unblock the Notifications