ಹವಾಮಾನ ಇಲಾಖೆ ಸಂಪರ್ಕಿಸುವುದು ಹೇಗೆ?
ಬೆಂಗಳೂರು, ಜೂನ್ 10; ನೈಋತ್ಯ ಮುಂಗಾರು ಕರ್ನಾಟಕಕ್ಕೆ ಆಗಮಿಸಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಲು ತಯಾರಿ ನಡೆಸುತ್ತಿದ್ದಾರೆ.
ಚಂಡಮಾರುತ, ಮುಂಗಾರು ಮಾರುತಗಳ ಸಮಯದಲ್ಲಿ ಹವಾಮಾನ ಇಲಾಖೆ ಮಳೆಯ ಬಗ್ಗೆ ಮುನ್ಸೂಚನೆ ನೀಡುತ್ತದೆ. ಜೂನ್ನಿಂದ ಸೆಪ್ಟೆಂಬರ್ ತನಕ ಸುರಿಯುವ ಮಳೆಗೆ ದೇಶದಲ್ಲಿ ಭಾರೀ ಮಹತ್ವವಿದೆ.
ಕೃಷಿ ಪ್ರಧಾನವಾದ ಭಾರತದಲ್ಲಿ ನೈಋತ್ಯ ಮುಂಗಾರು ಮಾರುಗಳ ಮಳೆಯನ್ನು ನಂಬಿಕೊಂಡು ರೈತರು ಬೆಳೆ ಬೆಳೆಯುತ್ತಾರೆ. ಆದ್ದರಿಂದ ಮಳೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಪ್ರಯತ್ನ ನಡೆಸುತ್ತಾರೆ.

ಕರ್ನಾಟಕದಲ್ಲಿನ ಮಳೆ, ಬಿಸಿಲು, ಉಷ್ಣಾಂಶದ ಕುರಿತು ಹವಾಮಾನ ಇಲಾಖೆಯ ಬೆಂಗಳೂರು ಶಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್ಎನ್ಎಂಡಿಸಿ) ಪ್ರತಿದಿನ ವರದಿಯನ್ನು ನೀಡುತ್ತದೆ.
ಪ್ರತಿ ದಿನ ಬೆಳಗ್ಗೆ ಕಳೆದ 24 ಗಂಟೆಗಳಲ್ಲಿ ಸುರಿದ ಮಳೆ, ಮುಂದಿನ 24 ಗಂಟೆಗಳ ಮುನ್ಸೂಚನೆ, ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದ್ದರೆ ಹಸಿರು, ಯೆಲ್ಲೊ ಮತ್ತು ರೆಡ್ ಅಲರ್ಟ್ಗಳನ್ನು ನೀಡಲಾಗುತ್ತದೆ.
ಜನರು ಹವಾಮಾನದ ಬಗ್ಗೆ ಮಾಹಿತಿ ಪಡೆಯಲು ಹವಾಮಾನ ಇಲಾಖೆಯ ಬೆಂಗಳೂರು ಕಚೇರಿಯನ್ನು ಸಂಪರ್ಕಿಸಬಹುದು. ಈ ದೂರವಾಣಿ ಸಂಖ್ಯೆಗಳು ಟೋಲ್ ಫ್ರೀ ಆಗಿವೆ. 1800 220 161, 080-22211118,22235675 (ಕಚೇರಿ ಅವಧಿಯಲ್ಲಿ ಮಾತ್ರ ಕರೆ ಮಾಡಬೇಕು)
ಇಂಟರ್ ನೆಟ್ ಯುಗದಲ್ಲಿ ನೀವು ಹವಾಮಾನ ಇಲಾಖೆ ವೆಬ್ ಸೈಟ್ಗೆ ಭೇಟಿ ನೀಡಿ ಸಹ ಮಾಹಿತಿ ಪಡೆಯಬಹುದಾಗಿದೆ. ಕನ್ನಡ, ಇಂಗ್ಲಿಶ್ ಮತ್ತು ಹಿಂದಿ ಭಾಷೆಯಲ್ಲಿ ಮಾಹಿತಿ ಲಭ್ಯವಿದೆ. http://www.imdbangalore.gov.in/
ವೆಬ್ಸೈಟ್ನಲ್ಲಿ ನೀವು ಫೇಸ್ ಬುಕ್ ಮತ್ತು ಟ್ವಿಟರ್ ಮೂಲಕ ಮಾಹಿತಿ ಪಡೆಯಲು ಆ ಪುಟಗಳಿಗೆ ಭೇಟಿ ನೀಡುವ ಲಿಂಕ್ ಸಹ ನೀಡಲಾಗಿದೆ.
ಕೆಎಸ್ಎನ್ಎಂಡಿಸಿ; ಹವಾಮಾನ ಇಲಾಖೆ ಹೊರತುಪಡಿಸಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್ಎನ್ಎಂಡಿಸಿ) ಸಹ ಮಳೆ, ಜಲಾಶಯಗಳ ನೀರಿನ ಮಟ್ಟ, ಉಷ್ಣಾಂಶದ ವಿವರಗಳನ್ನು ನೀಡುತ್ತದೆ.
ಕೆಎಸ್ಎನ್ಎಂಡಿಸಿ ಕಚೇರಿ ದೂರವಾಣಿ ಸಂಖ್ಯೆ 080 67355000. ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಮತ್ತು ಟ್ವಿಟರ್ಗಳಲ್ಲಿಯೂ ಕೆಎಸ್ಎನ್ಎಂಡಿಸಿ ಸಕ್ರಿಯವಾಗಿದೆ.
ಸ್ಮಾರ್ಟ್ ಫೋನ್ಗಳಲ್ಲಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಲು ಬಯಸುವವರಿಗೆ ಕೆಎಸ್ಎನ್ಎಂಡಿಸಿಯ ಮೊಬೈಲ್ ಅಪ್ಲಿಕೇಶನ್ ಲಭ್ಯವಿದೆ. ಇದರ ಜೊತೆಗೆ ಗುಡುಗು ಸಿಡಿಲಿನ ಮಾಹಿತಿ ನೀಡಲು SIDILU ಅಪ್ಲಿಕೇಶನ್ ಪ್ಲೇ ಸ್ಟೋರ್ನಲ್ಲಿದೆ.
ರೈತರಿಗೆ ಹವಾಮಾನದ ಕುರಿತು ಮಾಹಿತಿ ನೀಡಲು ಈಗ ಹಲವಾರು ಫೇಸ್ಬುಕ್, ವಾಟ್ಸಪ್ ಗ್ರೂಪ್ಗಳಿವೆ. ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ದರೆ ವಿವಿಧ ಪೇಜ್ಗಳಲ್ಲಿ ಮಳೆಯ ಮಾಹಿತಿಯನ್ನು ಪಡೆಯಬಹುದಾಗಿದೆ.
ಹವಾಮಾನ ಇಲಾಖೆ ಮುನ್ಸೂಚೆ ಅನ್ವಯ ಮಲೆನಾಡು ಮತ್ತು ಕರಾವಳಿ ಭಾಗದ ಜಿಲ್ಲೆಗಳ ಜಿಲ್ಲಾಡಳಿ ಮುಂಗಾರು ಸಮಯದಲ್ಲಿನ ಮುನ್ಸೂಚನೆಯನ್ನು ನೀಡುತ್ತವೆ. ಜಿಲ್ಲಾಧಿಕಾರಿಗಳ ಫೇಸ್ ಬುಕ್ ಖಾತೆ, ಡಿಐಪಿಆರ್ ಖಾತೆಗಳಲ್ಲಿ ಇದನ್ನು ಪಡೆಯಬಹುದಾಗಿದೆ. ಜಿಲ್ಲೆಗಳು ಮಳೆಗಾಲದಲ್ಲಿ ಜನರ ಸಹಾಯಕ್ಕಾಗಿ ಸಹಾಯವಾಣಿಯನ್ನು ಸಹ ಆರಂಭಿಸಿರುತ್ತದೆ.
ಬೆಂಗಳೂರು, ಮೈಸೂರು, ದಾವಣಗೆರೆ, ಮಂಗಳೂರು ಹೀಗೆ ಮಹಾನಗರ ಪಾಲಿಕೆಗಳನ್ನು ಹೊಂದಿರುವ ನಗರಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ಇದ್ದರೆ ಮಹಾನಗರ ಪಾಲಿಕೆಯೇ ಪ್ರಕಟಣೆ ಹೊರಡಿಸುತ್ತದೆ. ಜಿಲ್ಲಾ ಪೊಲೀಸರು ಸಹ ಈ ಕುರಿತ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ.
ಭಾರತೀಯ ಹವಾಮಾನ ಇಲಾಖೆ ಈ ಬಾರಿಯ ಮುಂಗಾರು ಅವಧಿಯಲ್ಲಿ ವಾಡಿಕೆಯಷ್ಟು ಮಳೆಯಾಗಲಿದೆ ಎಂದು ಹೇಳಿದೆ. ಕಳೆದ ಎರಡು ವರ್ಷಗಳಿಂದ ಜೂನ್, ಜುಲೈ ತಿಂಗಳಿನಲ್ಲಿ ಮಳೆ ಕಡಿಮೆ ಇತ್ತು. ಆದರೆ, ಆಗಸ್ಟ್ನಲ್ಲಿ ಸುರಿದ ಮಳೆ ಭಾರೀ ಅನಾಹುತವನ್ನು ಉಂಟು ಮಾಡಿತ್ತು.












Click it and Unblock the Notifications