ಹಾಪ್ ಕಾಮ್ಸ್ ನಲ್ಲಿ 10 ದಿನಗಳ ಕಾಲ ತರಕಾರಿ ಮೇಳ
ಬೆಂಗಳೂರು, ಡಿ. 17: ಬೆಲೆ ಕುಸಿತಗೊಂಡು ಕಂಗಾಲಾಗಿರುವ ರೈತರ ನೆರವಿಗೆ ಹಾಪ್ಕಾಮ್ಸ್ ಮತ್ತೊಮ್ಮೆ ಸಿದ್ಧಗೊಂಡಿದೆ. ಡಿ.17ರಿಂದ 10 ದಿನಗಳವರೆಗೆ ತೋಟೋತ್ಪನ್ನಗಳ ಮೇಳವನ್ನು ಎಲ್ಲಾ ಹಾಪ್ಕಾಮ್ಸ್ ಮಳಿಗೆಗಳಲ್ಲಿ ಲಭ್ಯವಿರುತ್ತದೆ. ಬಾಳೆ, ಕಿತ್ತಲೆ, ಸಪೋಟ ಹಾಗೂ ತರಕಾರಿ ಬೆಲೆ ಕುಸಿತಗೊಂಡಿದೆ. ಹೀಗಾಗಿ ಮುಂದಿನ ಹತ್ತು ದಿನಗಳ ಕಾಲ ರಿಯಾಯಿತಿ ದರದಲ್ಲಿ ಮಾರಾಟ ಜಾರಿಯಲ್ಲಿರುತ್ತದೆ ಎಂದು ಹಾಪ್ ಕಾಮ್ಸ್ ನಿರ್ದೇಶಕ ಬೆಳ್ಳೂರು ಕೃಷ್ಣ ಹೇಳಿದ್ದಾರೆ.
ಪ್ರತಿ ಹಣ್ಣು ಮತ್ತು ತರಕಾರಿಗಳ ಮೇಲೆ ಶೇ. 10 ರಷ್ಟು ರಿಯಾಯಿತಿ ಪ್ರಕಟಿಸಿದೆ. ನಗರದ ಲಾಲ್ಬಾಗ್ನಲ್ಲಿರುವ ಕೇಂದ್ರ ಕಚೇರಿಯ ಮಳಿಗೆ ಹಡ್ಸನ್ ಸರ್ಕಲ್, ಲಾಲ್ಬಾಗ್, ಕಬ್ಬನ್ ಪಾರ್ಕ್, ದೇವನಹಳ್ಳಿ ಹೈವೇ, ಸ್ಯಾಂಕಿ ಟ್ಯಾಂಕ್, ಮಲ್ಲೇಶ್ವರ, ನಾಗರಬಾವಿ ಸರ್ಕಲ್, ಚಂದ್ರಾ ಲೇಔಟ್, ಕೆಂಗೇರಿ ಸೆಟಲೈಟ್ ಬಸ್ ನಿಲ್ದಾಣ, ಮೈಸೂರು ರಸ್ತೆ ಹೈವೆ, ಜಾನಪದ ಲೋಕದ ಆಯ್ದ ಮಳಿಗೆಗಳಲ್ಲಿ ಮಾರಾಟ ಮೇಳ ನಡೆಯಲಿದೆ. [ಮುಂಜಾನೆ ತರಕಾರಿಕೊಳ್ಳಲು ಹಾಪ್ಕಾಮ್ಸ್ಗೆ ಹೋಗಿ]

ಬಾಳೆಹಣ್ಣು, ಕಿತ್ತಳೆ, ದಾಳಿಂಬೆ, ಸಪೋಟ ಅಲ್ಲದೆ, ಕಡ್ಲೆಕಾಯಿ, ಟೊಮೊಟೊ, ಅವರೇಕಾಯಿ, ಅವರೇಬೇಳೆ, ಗೆಣಸು ಸೇರಿದಂತೆ, ಹಲವು ತರಕಾರಿಗಳನ್ನು ನೇರವಾಗಿ ಬೆಳೆಗಾರರಿಂದಲೇ ಖರೀದಿಸಿ ಮಾರಾಟ ಮಾಡಲಾಗುತ್ತದೆ ಎಂದು ಹಾಮ್ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಡಾ. ಬೆಳ್ಳೂರು ಕೃಷ್ಣ ಅವರು ತಿಳಿಸಿದ್ದಾರೆ.
ಸುಮಾರು 100 ಟನ್ನಷ್ಟು ಬೆಳೆ ಮಾರಾಟವಾಗುವ ನಿರೀಕ್ಷೆ ಇದೆ. ರೈತರ ತೋಟಗಳಿಂದಲೇ ನೇರವಾಗಿ ಖರೀದಿ ಮಾಡಿ ಉತ್ತಮ ಬೆಲೆ ಒದಗಿಸಿಕೊಡಲಾಗುವುದು ಎಂದು ಅವರು ತಿಳಿಸಿದರು.
ಹಾಪ್ಕಾಮ್ಸ್ ಅಧ್ಯಕ್ಷ ಜಿ.ಆರ್. ಶ್ರೀನಿವಾಸನ್ ಮಾತನಾಡಿ, ರೈತರು ಬೆಳೆ ನಷ್ಟದಿಂದ ಕಂಗಾಲಾಗಿದ್ದಾರೆ. ಅವರಿಗೆ ಧೈರ್ಯ ತುಂಬಲು ಈ ಮಾರಾಟ ಮೇಳವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ತಮಿಳುನಾಡಿನಲ್ಲಿ ಮಳೆಯ ಕಾರಣದಿಂದ ಆಗಿರುವ ಅನಾಹುತವನ್ನು ನೆಪವಾಗಿಟ್ಟುಕೊಂಡು ಮಧ್ಯವರ್ತಿಗಳು ಬೆಲೆಯನ್ನು ಹೆಚ್ಚಿಸಿ ಶೋಷಣೆ ಮಾಡುವುದನ್ನು ತಪ್ಪಿಸಲಾಗುವುದು ಎಂದು ಹೇಳಿದರು. ನಗರದ 239ಕ್ಕೂ ಅಧಿಕ ಮಳಿಗೆಗಳಲ್ಲದೆ ಹೆದ್ದಾರಿಗಳಲ್ಲೂ ತರಕಾರಿ ಮೇಳ ಜಾರಿಯಲ್ಲಿರುತ್ತದೆ. ಬೆಂಗಳೂರು-ಮೈಸೂರು ಹೆದ್ದಾರಿ, ತುಮಕೂರು ಹೆದ್ದಾರಿ, ಹೈದರಾಬಾದ್ ಹೆದ್ದಾರಿಗಳಲ್ಲಿ ಮೇಳ ನಡೆಯಲಿದೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications