ಇದು ಯಾವ ರೀತಿಯ ಆತ್ಮನಿರ್ಭರ್ ಭಾರತ? ಪ್ರಧಾನಿ ಮೋದಿ ಅವರಿಗೆ ಎಚ್ಡಿಕೆ ಪ್ರಶ್ನೆ!
ಬೆಂಗಳೂರು, ಮೇ 14: ಕೊರೊನಾ ವೈರಸ್ ನಿಯಂತ್ರಿಸಲು ಜಾರಿಗೆ ತಂದಿರುವ ಲಾಕ್ಡೌನ್ನಿಂದ ರಾಜ್ಯದ ರೈತರು ಮೊದಲೇ ಸಂಕಷ್ಟದಲ್ಲಿದ್ದಾರೆ. ಅನಾವೃಷ್ಟಿ, ಅತಿವೃಷ್ಟಿಯ ಬಳಿಕ ಲಾಕ್ಡೌನ್ ಕೂಡ ರೈತರನ್ನು ಕಂಗೆಡಿಸಿದೆ. ಇವೆಲ್ಲವುಗಳ ಜೊತೆಗೆ ಇದೀಗ ಎಪಿಎಂಸಿ ಕಾಯಿದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರುವ ಮೂಲಕ ರೈತರನ್ನು ಶಾಶ್ವತವಾಗಿ ಬಹುರಾಷ್ಟ್ರೀಯ ಕಂಪನಿಗಳ ಅಡಿಯಾಳು ಮಾಡಲು ಸರ್ಕಾರ ಹೊರಟಿದೆ. ಕೊರೊನಾ ಸಂಕಷ್ಟದಲ್ಲಿ ಆತ್ಮನಿರ್ಭರ್ಭಾರತ ಎಂದು ಭಾಷಣ ಮಾಡಿದ್ದ ಪ್ರಧಾನಿ ಮೋದಿ ಅವರು ಬಹುರಾಷ್ಟ್ರೀಯ ಕಂಪನಿಗಳಿಗೆ ರೈತರ ಹಿತ ಬಲಿಕೊಡುತ್ತಿದ್ದಾರೆ.
ಎಪಿಎಂ ಸಿ ಕಾಯಿದೆಗೆ ಸುಗ್ರೀವಾಜ್ಞೆ ತರುವ ಸರ್ಕಾರದ ನಿರ್ಧಾರವನ್ನು ಸ್ವತಃ ರಾಜ್ಯಪಾಲ ವಜೂಬಾಯಿ ವಾಲಾ ಅವರು ಒಪ್ಪಿಲ್ಲ ಎಂಬ ಮಾಹಿತಿಯಿದೆ. ಆದರಿಂದಲೇ ಸುಗ್ರೀವಾಜ್ಞೆಗೆ ಅಂಕಿತ ಹಾಕದೇ
ಸಂಪುಟದ ಒಪ್ಪಿಗೆ ಪಡೆದು ಕಳಿಸುವಂತೆ ಸೂಚಿಸಿದ್ದಾರೆ.
ಜೊತೆಗೆ ವಿರೋಧ ಪಕ್ಷಗಳೂ ಕೂಡ ಸುಗ್ರೀವಾಜ್ಞೆ ವಿರುದ್ಧ ಲಾಕ್ಡೌನ್ ಸಂದರ್ಭದಲ್ಲಿಯೂ ಬೀದಿಗಿಳಿದು ಹೋರಾಟದ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಕೊರೊನಾ ವೈರಸ್ಗಿಂದ ಭೀಕರವಾಗಿರುವ ಕಾಯಿದೆ ತಿದ್ದುಪಡಿ ವಿರೋಧಿಸಿ ರೈತರು ಪ್ರತಿಭಟನೆ ಆರಂಭಿಸಿದ್ದಾರೆ. ರೈತರ ಆಗ್ರಹಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಧ್ವನಿಗೂಡಿಸಿದ್ದಾರೆ.

ದೇಶದ ಬೆನ್ನಲುಬನ್ನೇ ಮುರಿದಂತೆ
ಬಹುರಾಷ್ಟ್ರೀಯ ಕಂಪನಿಗಳಿಗೆ ನಮ್ಮನ್ನು ಒಪ್ಪಿಸಿಕೊಳ್ಳುವುದು ಅಪಾಯಕಾರಿ. ಅಭದ್ರತೆಯ ಈ ವ್ಯವಸ್ಥೆಗೆ ಕೃಷಿ, ರೈತರನ್ನು ಒಳಪಡಿಸುವುದು ನಮ್ಮ ಬೆನ್ನೆಲುಬನ್ನೇ ಮುರಿದಂತೆ. ₹20 ಲಕ್ಷ ಕೋಟಿ ಪ್ಯಾಕೇಜ್ ವೇಳೆ ಸ್ಥಳೀಕರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದರು. ಆದರೆ ಬಹುರಾಷ್ಟ್ರೀಯ ಕಂಪನಿಗಳಿಗೆ ರೈತರನ್ನು ಒಪ್ಪಿಸುವುದು ಯಾರಿ ರೀತಿ ಸ್ವದೇಶಿಕರಣವಾಗುತ್ತದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಕೃಷಿ ವ್ಯವಸ್ಥೆಯನ್ನು ದಾಸ್ಯಕ್ಕೊಳಪಡಿಸಬೇಡಿ
ರೈತ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುವಾಗ ಒಂದು ವೇಳೆ ವಂಚನೆಗೊಳಗಾದರೆ ಎಪಿಎಂಸಿ ಮೂಲಕ ವ್ಯಾಜ್ಯ ಬಗೆಹರಿಸಿಕೊಳ್ಳಲು ಅವಕಾಶವಿದೆ. ಆದರೆ ಬಹುರಾಷ್ಟ್ರೀಯ ಕಂಪನಿಗಳು ಮಾಡುವ ವಂಚನೆಗಳ ವಿರುದ್ಧ ನಮ್ಮ ರೈತರು ಹೋರಾಡಬಲ್ಲರೇ? ಅವರ ಕೂಟ ವ್ಯವಸ್ಥೆಯ ಎದುರು ಸೆಣಸಬಲ್ಲರೇ? ಕೃಷಿ ವ್ಯವಸ್ಥೆಗೆ ಕಾಯಕಲ್ಪ ತರಬೇಕು. ಆದರೆ ದಾಸ್ಯಕ್ಕೊಳಪಡಿಸಬಾರದು ಎಂದು ಆಗ್ರಹಿಸಿದ್ದಾರೆ.

ಸಗ್ರೀವಾಜ್ಞೆ ತಂದರೆ ಹೋರಾಟ ಅನಿವಾರ್ಯ
ಎಪಿಎಂಸಿ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರುವ ಕುರಿತು ಇಂದು ಸಚಿವ ಸಂಪುಟದಲ್ಲಿ ನಿರ್ಧಾರವಾಗುತ್ತಿದೆ. ರೈತರ ಬದುಕನ್ನು ಅಭದ್ರಗೊಳಿಸುವ, ಬಹುರಾಷ್ಟ್ರೀಯ ಕಂಪನಿಗಳ ದಾಸ್ಯಕ್ಕೆ ಒಳಪಡಿಸುವ ಈ ಸುಗ್ರೀವಾಜ್ಞೆಗೆ ಸರ್ಕಾರ ಯಾವುದೇ ಕಾರಣಕ್ಕೂ ಮುಂದಾಗಬಾರದು. ಇದು ಕಡೇ ಎಚ್ಚರಿಕೆ. ಇಲ್ಲವಾದರೆ ಹೋರಾಟ ಎದುರಿಸಬೇಕು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ಅತಿವೃಷ್ಟಿ, ಅನಾವೃಷ್ಟಿಯಿಂದ ಸಂಕಷ್ಟದಲ್ಲಿದ್ದಾರೆ ರೈತರು
ರೈತರು ಮೊದಲೇ ಸಂಕಷ್ಟದಲ್ಲಿ ಇರುವಾಗ ತರಾತುರಿಯಲ್ಲಿ ಕರ್ನಾಟಕ ಕೃಷಿ ಉತ್ಪನ್ನಗಳ ಮಾರಾಟ ನಿಯಂತ್ರಣ ಮತ್ತು ಅಭಿವೃದ್ದಿ ಕಾಯಿದೆ(APMC Act)ಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಅನಕೂಲ ಮಾಡಿಕೊಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹುನ್ನಾರ ನಡೆಸಿವೆ ಎಂದು ರೈತ ಸಂಘಟನೆಗಳು ಸುಗ್ರೀವಾಜ್ಞೆ ವಿರೋಧಿಸಿ ಹೋರಾಟ ಆರಂಭಿಸಿವೆ.
ದೇಶ ಕೊರೊನಾ ವೈರಸ್ ಆತಂಕ ಎದುರಿಸುತ್ತಿರುವಾಗ ಎಪಿಎಂಸಿ ಕಾಯಿದೆಗೆ ಆತುರಾತುವಾಗಿ ತಿದ್ದುಪಡಿ ತರುವ ಉದ್ದೇಶ ಏನಿದೆ ಎಂದು ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಶ್ನೆ ಮಾಡಿವೆ. ಕೊರೊನಾ ವೈರಸ್ ವಿರುದ್ಧ ಎಲ್ಲರೂ ಹೋರಾಟ ಮಾಡುತ್ತಿರುವಾಗ, ರೈತರು ನಾಶವಾಗುವಂತಹ ನಡೆಗೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ರೈತರು ಆರೋಪಿಸಿದ್ದಾರೆ. ಇದು ಯಾವ ರೀತಿಯ ಆತ್ಮನಿರ್ಭರ್ಭಾರತ್? ಪ್ರಧಾನಿ ಮೋದಿ ಅವರನ್ನು ದೇಶದ ರೈತರು ಪ್ರಶ್ನೆ ಮಾಡುತ್ತಿದ್ದಾರೆ, ಕೃಷಿಕರ ಮೂಲಭೂತ ಪ್ರಶ್ನೆಗೆ ಪ್ರಧಾನಿ ಉತ್ತರಿಸುತ್ತಾರಾ? ನೋಡಬೇಕಿದೆ!












Click it and Unblock the Notifications