ಕೊಡಗಿನಲ್ಲಿ ರಸಗೊಬ್ಬರ ಕೊರತೆ: ಮಳೆ ಬಂದರೂ ಆರಂಭವಾಗದ ಕೃಷಿ ಚಟುವಟಿಕೆ
ಕೊಡಗು ಜೂ. 19: ಮುಂಗಾರು ಮಳೆ ಚುರುಕಾದ ಬೆನ್ನಲ್ಲೆ ರಾಜ್ಯದೆಲ್ಲಡೆ ಕಳೆದೊಂದು ತಿಂಗಳಿನಿಂದ ಕೃಷಿ ಸಂಬಂಧಿ ಚಟುವಟಿಕೆಗಳು ಗರಿಗೆದರಿವೆ. ರೈತರು ಮಂದಹಾಸದಿಂದ ವ್ಯವಸಾಯದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ರಸಗೊಬ್ಬರ ಕೊರತೆ ಸೃಷ್ಟಿಯಾಗಿದ್ದರಿಂದ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆಗಳು ಇನ್ನೂ ಆರಂಭವಾಗಿಲ್ಲ. ರಸಗೊಬ್ಬರ ಸಿಗದ ಕೃಷಿಕರಿಗೆ ಕೃಷಿ ಇಲಾಖೆಯ ಭರವಸೆ ಮಾತ್ರ ಸಿಕ್ಕಿದೆ.
ಸಕಾಲಕ್ಕೆ ಕೊಡಗಿನ ವಿವಿಧ ಪ್ರಾಥಮಿಕ ಸಂಘಗಳು ಮತ್ತು ರಸಗೊಬ್ಬರ ವಿತರಕರಿಂದ ರೈತರ ಬೇಡಿಕೆ ಪೂರೈಸಲು ಸಾಧ್ಯವಾಗಿಲ್ಲ. ಅಗತ್ಯದಷ್ಟು ಗೊಬ್ಬರ ರೈತರಿಗೆ ದೊರೆತಿಲ್ಲ. ಹೀಗಾಗಿ ಈ ಭಾಗದಲ್ಲಿ ಬೀಜ ಬಿತ್ತನೆ ಕೆಲಸಗಳು ಮಳೆ ಆರಂಭವಾಗಿ ತಿಂಗಳಾದರೂ ಆರಂಭವಾಗಿಲ್ಲ. ಈ ಸಮಸ್ಯೆ ಉಂಟಾದ ಬೆನ್ನಲ್ಲೆ ಎಚ್ಚತ್ತುಕೊಂಡಿರುವ ಕೃಷಿ ಇಲಾಖೆ ಆದಷ್ಟು ಶೀಘ್ರವೇ ಸಮಸ್ಯೆ ಬಗೆಹರಿಸಿ, ಗೊಬ್ಬರ ಒದಗಿಸಲಾಗುವುದು ಎಂದು ಭರವಸೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿದರೆ ಮುಲಾಜಿಲ್ಲದೇ ಕ್ರಮ: ಕೃಷಿ ಸಚಿವ ಬಿಸಿ ಪಾಟೀಲ್
ಕಚ್ಚಾ ವಸ್ತುಗಳ ಆಮದು ವಿಳಂಬ
ಭಾರತದಲ್ಲಿ ಗೊಬ್ಬರ ಸಂಸ್ಕರಣೆಗೆ ಅಗತ್ಯವಾದ ಕಚ್ಚಾ ವಸ್ತುಗಳು ಆಮದು ಮಾಡಿಕೊಳ್ಳುವಲ್ಲಿ ವಿಳಂಬವಾಗುತ್ತಿದೆ. ರಷ್ಯಾ ಮತ್ತು ಉಕ್ರೇನ್ ಯುದ್ಧ ಪರಿಣಾಮವಾಗಿ ಕಚ್ಚಾವಸ್ತುಗಳ ಆಮದು ಸಮಸ್ಯೆ ಉಂಟಾಗಿದ್ದು, ಇದು ಜಾಗತಿಕವಾಗಿ ಪರಿಣಾಮ ಬೀರುತ್ತಿದೆ ಎಂದು ಕೆಲವು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಉಂಟಾದ ಸಮಸ್ಯೆ ನೀಗಿಸಲು ಸರ್ಕಾರಗಳು ಅಗತ್ಯ ಕಚ್ಚಾವಸ್ತುಗಳನ್ನು ಆಮದು ಮಾಡಿಕೊಳ್ಳಲು ತುರ್ತು ಕ್ರಮ ವಹಿಸಬೇಕು ಎಂಬ ಆಗ್ರಹ ರೈತಪರ ಸಂಘದ ಪ್ರತಿನಿಧಿಗಳಿಂದ ಕೇಳಿ ಬಂದಿವೆ.
ಇನ್ನೊಂದಷ್ಟು ದಿನ ಕಾಫಿ ಬೆಳೆಗೆ ಸಮಸ್ಯೆ ಆಗುವುದಿಲ್ಲ ಎನ್ನಬಹುದಾದರೂ ಸಣ್ಣ ಕಾಫಿ ಬೆಳೆಗಾರರು ಮತ್ತು ರೈತರು ಗೊಬ್ಬರ ಕೊರತೆಯಿಂದ ಆತಂಕಕ್ಕೆ ಈಡಾಗಿದ್ದಾರೆ. ಅಗತ್ಯಕ್ಕೆ ತಕ್ಕಷ್ಟು ಮಳೆ ಬಂದ ನಂತರ ಬೆಳೆಗಳಿಗೆ ಗೊಬ್ಬರ ಹಾಕಬೇಕಿದೆ. ಆದರೆ ಕೊರತೆಯಿಂದ ಅದು ಸಾಧ್ಯವಾಗುತ್ತಿಲ್ಲ ಎಂದು ರೈತರೊಬ್ಬರು ಅಳಲು ತೊಂಡಿಕೊಂಡಿದ್ದಾರೆ.
ರಸಗೊಬ್ಬರ ಪೂರೈಕೆಗೆ ಕ್ರಮ:
ಕೊಡಗು ವ್ಯಾಪ್ತಿಯಲ್ಲಿ ಗೊಬ್ಬರ ಸಿಗದ ಪರಿಣಾಮ ರೈತರು ಮಂಡ್ಯ, ಮೈಸೂರು, ಹಾಸನದಲ್ಲಿ ಖರೀದಿಸಿ ತರುತ್ತಿದ್ದಾರೆ. ಗೊಬ್ಬರ ಎಲ್ಲಿ ಸಿಗುತ್ತದೆ ಎಂಬುದರ ಬಗ್ಗೆ ಮಾಹಿತಿ ಪತ್ತೆ ಹೆಚ್ಚುವುದೇ ರೈತರಿಗೆ ಕಾಯಕವಾಗಿದೆ. ಇದರಿಂದ ಸಮಯ ಹಾಗೂ ಅಧಿಕ ಹಣ ಹಾಳಾಗುತ್ತದೆ.
ರಸಗೊಬ್ಬರ ಕೊರತೆಯ ಸಮಸ್ಯೆ ಸರ್ಕಾರದ ಗಮನಕ್ಕೆ ಬಂದಿದೆ. ಇನ್ನೊಂದು ವಾರದೊಳಗೆ ರೈತರಿಗೆ ಬೇಕಾದಷ್ಟು ಗೊಬ್ಬರ ಪೂರೈಸಲಿದ್ದೇವೆ. ಜೂನ್ ಅಂತ್ಯಕ್ಕೆ ಅಂದಾಜು 10 ಸಾವಿರ ಮೆಟ್ರಿಕ್ ಟನ್ ಗಳಷ್ಟು ಗೊಬ್ಬರ ಒದಗಿಸಲಾಗುವುದು ಎಂದು ಇಲ್ಲಿನ ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.