17ನೇ ದಿನಕ್ಕೆ ರೈತರ ಪ್ರತಿಭಟನೆ; ಗೃಹ ಸಚಿವ ಅಮಿತ್ ಶಾ ಸಭೆ
ನವದೆಹಲಿ, ಡಿಸೆಂಬರ್ 12: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಹಮ್ಮಿಕೊಂಡಿರುವ ಪ್ರತಿಭಟನೆಯು ಶನಿವಾರ 17ನೇ ದಿನಕ್ಕೆ ಕಾಲಿಟ್ಟಿದೆ.
ಸರ್ಕಾರ ಹಾಗೂ ರೈತರ ನಡುವಿನ ಹಲವು ಸುತ್ತಿನ ಮಾತುಕತೆಯು ವಿಫಲವಾಗಿದ್ದು, ಶನಿವಾರ ದೆಹಲಿ-ಜೈಪುರ ಹೆದ್ದಾರಿ ತಡೆ ನಡೆಸುವುದಾಗಿ ರೈತರು ತಿಳಿಸಿದ್ದಾರೆ. ಹೀಗಾಗಿ ದೆಹಲಿ ಗಡಿಯಲ್ಲಿ 2000 ರಿಂದ 2500 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಶುಕ್ರವಾರ ರಾತ್ರಿ ಕರ್ನಾಲ್ ನಲ್ಲಿನ ಬಸ್ತಾರ ಟೋಲ್ ಪ್ಲಾಜಾವನ್ನು ರೈತರು ತಡೆಹಿಡಿದಿದ್ದರು. ಶನಿವಾರ ಬೆಳಿಗ್ಗೆ ಅಂಬಾಲದಲ್ಲಿನ ಶಂಭು ಟೋಲ್ ಪ್ಲಾಜಾವನ್ನೂ ತಡೆಹಿಡಿದಿದ್ದಾರೆ. ಸೋಮವಾರ (ಡಿ.14) ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ವಿಸ್ತರಿಸಲು ರೈತ ಸಂಘಗಳು ನಿರ್ಧರಿಸಿವೆ.

ಪೊಲೀಸ್, ರಕ್ಷಣಾಧಿಕಾರಿಗಳೊಂದಿಗೆ ಅಮಿತ್ ಶಾ ಸಭೆ: ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪೊಲೀಸರು, ರಕ್ಷಣಾ ಸಿಬ್ಬಂದಿ ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಶನಿವಾರ ಸಭೆ ನಡೆಸಿದ್ದಾರೆ. ಪ್ರತಿಭಟನೆ ವೇಳೆ ಯಾವುದೇ ಗಲಭೆಯಾಗದಂತೆ ಮುನ್ನೆಚ್ಚರಿಕೆ ವಹಿಸುವ ಕುರಿತು ಚರ್ಚೆ ನಡೆಸಿದ್ದಾರೆ. ಸೂಕ್ತ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.












Click it and Unblock the Notifications