ಕೆ.ಆರ್.ಮಾರ್ಕೆಟ್: ತೆರಿಗೆ ಹೆಸರಲ್ಲಿ ರೈತರ ಸುಲಿಗೆ
ಬೆಂಗಳೂರು, ಡಿಸೆಂಬರ್ 04: ಕೆ.ಆರ್.ಮಾರುಕಟ್ಟೆಯಲ್ಲಿ ರೈತರ ಮೇಲೆ ಆಗುತ್ತಿರುವ ದಬ್ಬಾಳಿಕೆಯನ್ನು ಖಂಡಿಸಿ ಕೋಲಾರ, ಚಿಕ್ಕಬಳ್ಳಾಪುರ, ಬೆಂ.ಗ್ರಾಮಾಂತರ ಜಿಲ್ಲೆ ರೈತರು ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.
ರೈತರು ಬೆಳೆದ ಬೆಳೆಯನ್ನು ಕೆ.ಆರ್.ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಮಾರುಕಟ್ಟೆ ತೆರಿಗೆ ಹೆಸರಲ್ಲಿ ಹಫ್ತಾ ವಸೂಲಿ ಮಾಡಲಾಗುತ್ತಿದೆ. ತೆರಿಗೆ ನೀಡಲು ನಿರಾಕರಿಸಿದ ರೈತರ ಮೇಲೆ ಗೂಂಡಾಗಿರಿ ನೆಡಲಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾರುಕಟ್ಟೆಯಲ್ಲಿ ರೈತರಿಗೆ ಮೀಸಲಾಗಿದ್ದ ಶೆಡ್ಗಳನ್ನು ಬಿಬಿಎಂಪಿಯು ತನ್ನ ಲಾಭಕ್ಕಾಗಿ ಕೋಟ್ಯಾಂತರ ರೂಪಾಯಿಗಳಿಗೆ ಖಾಸಗಿಯವರಿಗೆ ಹರಾಜು ಮಾಡಿದ್ದಾರೆ, ಬಂಡವಾಳ ಹೂಡಿದ ಖಾಸಗಿಯವರು ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ ಆರೋಪಿಸಿದರು.
ಬಯಲು ಸೀಮೆ ರೈತರು 1500 ಅಡಿ ಆಳದಿಂದ ನೀರು ತೆಗೆದು ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ, ಬೆಳೆದ ತರಕಾರಿಯನ್ನು ಮಾರುಕಟ್ಟೆಗೆ ತರುವಷ್ಟರಲ್ಲಿ ರೈತನಿಗೆ ಕತ್ತಿನ ವರೆಗೆ ಸಾಲ ಇರುತ್ತದೆ. ಅಲ್ಪ ಸ್ವಲ್ಪ ಹಣ ಮಾಡಿಕೊಳ್ಳುವ ಆಸೆಯಿಂದ ಬಂದ ರೈತನಿಂದ ತೆರಿಗೆ ಹೆಸರಲ್ಲಿ ಹಣ ಕೀಳುತ್ತಿರುವುದು ಅಕ್ಷಮ್ಯ ಎಂದು ಆರೋಪಿಸಿದ ಅವರು ಬಿಬಿಎಂಪಿ ಈ ವಸೂಲಿದಾರರಿಗೆ ಅಭಯ ನೀಡಿದೆ ಎಂದರು.
ಬಿಬಿಎಂಪಿಗೆ ಮುತ್ತಿಗೆ ಹಾಕಿ ರೈತರಿಂದ ವಸೂಲಿ ಮಾಡುತ್ತಿರುವ ತೆರಿಗೆಯನ್ನು ಕೈಬಿಡಬೇಕೆಂದು ಆಗ್ರಹಿಸುತ್ತಿರುವುದಾಗಿ ಅವರು ಮಾಹಿತಿ ನೀಡಿದರು.












Click it and Unblock the Notifications