ಅಪಾರ್ಟ್ಮೆಂಟ್ಗೆ ಬಂತು ಹಣ್ಣು, ತರಕಾರಿ; ರೈತರ ಸಂಕಷ್ಟ ದೂರ
ಬೆಂಗಳೂರು, ಏಪ್ರಿಲ್ 21 : ರೈತರ ಮತ್ತು ಸರ್ಕಾರದ ಸಮನ್ವಯತೆಯಿಂದಾಗಿ ಬೆಂಗಳೂರಿನ ಜನರಿಗೆ ತಾಜಾ ಹಣ್ಣು ಮತ್ತು ತರಕಾರಿ ಸಿಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಾಯೋಗಿಕ ಮಾರುಕಟ್ಟೆಯ ಮೂಲಕ ಬೆಂಗಳೂರು ನಗರದ ಅಪಾರ್ಟ್ಮೆಂಟ್ಗಳಿಗೆ ಹಣ್ಣು, ತರಕಾರಿಯನ್ನು ಪೂರೈಕೆ ಮಾಡುತ್ತಿದ್ದು, ಲಾಭಗಳಿಸುತ್ತಿದ್ದಾರೆ.
Recommended Video
ಕೊರೊನಾ ಹರಡದಂತೆ ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್ ಡೌನ್ ಆದೇಶ ಜಾರಿಗೊಳಿಸಿವೆ. ಆರಂಭದಲ್ಲಿ ರೈತರು ಇದರಿಂದಾಗಿ ಕಂಗಾಲಾಗಿದ್ದರು. ಬೆಳೆದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಇಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದರು.
ಸರ್ಕಾರ ರೈತರ ಸಂಕಷ್ಟ ಅರಿತು ಕೃಷಿ ಚಟುವಟಿಕೆ ಸೇರಿದಂತೆ ರೈತರು ಬೆಳೆದ ಉತ್ಪನ್ನಗಳನ್ನು ಮಾರಾಟ ಮತ್ತು ಸರಬರಾಜು ಮಾಡಲು ಇದ್ದ ನಿಯಮಗಳನ್ನು ಸಡಿಲಿಸುವ ಮೂಲಕ ರೈತರ ಸಹಾಯಕ್ಕೆ ನೆರವಾಯಿತು.
ರೈತರ ಗೊಂದಲ ನಿವಾರಣೆಗೆ ಹಾಗೂ ಸರ್ಕಾರ ರೈತರೊಂದಿಗಿದೆ ಎಂದು ಧೈರ್ಯ ತುಂಬಲು ರೈತರು ಬೆಳೆದ ಉತ್ಪನ್ನಗಳಿಗೆ ಪರ್ಯಾಯವಾಗಿ ಪ್ರಾಯೋಗಿಕ ಸೂಕ್ತ ಮಾರುಕಟ್ಟೆ ಕಲ್ಪಿಸಲು ಕ್ರಮ ಕೈಗೊಳ್ಳಲಾಯಿತು. ಕಂದಾಯ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ ದೊಡ್ಡಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ರೈತರ ಸಭೆ ನಡೆಸಿದರು.

ಗ್ರಾಹಕರೊಂದಿಗೆ ನೇರ ವ್ಯವಹಾರ
ಆರ್. ಅಶೋಕ ಅವರು ಸಭೆ ನಡೆಸಿದ ಬಳಿಕ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಎಂ.ನಾಗರಾಜು ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ತಾಲೂಕಿನ ಪ್ರಮುಖ ರೈತರಿಗೆ ಪ್ರಾಯೋಗಿಕ ಮಾರುಕಟ್ಟೆ ಬಗ್ಗೆ ವಿವರಿಸಿದರು. ರೈತರಿಗೆ ಮಧ್ಯವರ್ತಿಗಳಿಲ್ಲದೇ ನೇರವಾಗಿ ಗ್ರಾಹಕರೊಂದಿಗೆ ವ್ಯವಹರಿಸಲು ವೇದಿಕೆ ಕಲ್ಪಿಸಿದರು.

ಪದ್ಮನಾಭನಗರದಲ್ಲಿ ಮಾರಾಟ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರು ಆರಂಭದಲ್ಲಿ ತಾವು ಬೆಳೆದ ಹಣ್ಣು ಮತ್ತು ತರಕಾರಿಗಳನ್ನು ಬೆಂಗಳೂರು ನಗರದ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಮೈದಾನದಲ್ಲಿ ಮಾರಾಟ ಮಾಡಿದರು. ನಂತರದ ದಿನಗಳಲ್ಲಿ ಆ ಕ್ಷೇತ್ರದಲ್ಲಿರುವ ಕೆಲವು ಅರ್ಪಾಮೆಂಟ್ಗಳ ವಿಳಾಸ ಮತ್ತು ಸಂಪರ್ಕವನ್ನು ಕಲ್ಪಿಸುವ ಅಲ್ಲಿಯೇ ಹೋಗಿ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಯಿತು. ಇದರಿಂದಾಗಿ ಸೂಕ್ತ ಬೆಲೆ ದೊರಕಿದಂತಾಗಿದೆ ಹಾಗೂ ಕಡಿಮೆ ಬೆಲೆಗೆ ತಾಜಾ ಮತ್ತು ಗುಣಮಟ್ಟದ ಹಣ್ಣು ಮತ್ತು ತರಕಾರಿ ಜನರಿಗೆ ಸಿಕ್ಕಿತು.

ರೈತರಿಗೆ ಉತ್ತಮ ಲಾಭ
ರೈತರ ಉತ್ಪನ್ನಗಳ ಸಂಘದವರು ಬೆಂಗಳೂರು ನಗರದ ಮಾರತಹಳ್ಳಿಯಲ್ಲಿ ಅರ್ಪಾಮೆಂಟ್ಗಳನ್ನು ಹುಡುಕಿಕೊಂಡಿದ್ದು, ಮಧ್ಯವರ್ತಿಗಳಿಲ್ಲದೇ ನೇರವಾರಿ ಜನರೊಂದಿಗೆ ವ್ಯವಹರಿಸುತ್ತಿದ್ದಾರೆ. ಈ ಪರ್ಯಾಯ ಪ್ರಾಯೋಗಿಕ ಮಾರುಕಟ್ಟೆ ಮಾರ್ಗದಿಂದ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟ ಎದುರಿಸುತ್ತಿದ್ದ ರೈತರಿಗೆ ಲಾಭ ಸಿಗುತ್ತಿದೆ. ಜನರಿಗೆ ತಾಜಾ ತರಕಾರಿ, ಹಣ್ಣು ಸಿಗುತ್ತಿದೆ.

2 ದಿನಗಳಿಗೊಮ್ಮೆ ವ್ಯಾಪಾರ
ರೈತರಿಗೆ ಪ್ರಾಯೋಗಿಕ ಮಾರುಕಟ್ಟೆಯನ್ನು ಕಲ್ಪಿಸಲಾಗಿದೆ. ಎರಡು ದಿನಗಳಿಗೊಮ್ಮೆ ರೈತರು ಹಣ್ಣು ಮತ್ತು ತರಕಾರಿಗಳನ್ನು ಸಂಪರ್ಕಿಸಿ ಕೊಡಲಾಗಿರುವ ಅರ್ಪಾಮೆಂಟ್ಗಳಿಗೆ ಸರಬರಾಜು ಮಾಡುತ್ತಿದ್ದಾರೆ. ಇದರಿಂದಾಗಿ ರೈತರು ಮತ್ತು ಗ್ರಾಹಕರಿಗೆ ಉತ್ತಮ ವೇದಿಕೆ ಸಿಕ್ಕಿದೆ.












Click it and Unblock the Notifications