'ಯೆಸ್' ಅಥವಾ 'ನೋ': ಅಮಿತ್ ಶಾಗೆ ರೈತರ ಎರಡೇ ಆಯ್ಕೆ
ನವದೆಹಲಿ, ಡಿಸೆಂಬರ್ 8: ಕೃಷಿ ಕಾಯ್ದೆಗಳ ವಿರುದ್ಧ ರೈತರು ಹಾಗೂ ವಿವಿಧ ಸಂಘಟನೆಗಳು ಭಾರತ್ ಬಂದ್ ನಡೆಸಿದ ಬೆನ್ನಲ್ಲೇ ಮಾತುಕತೆಗೆ ಬರುವಂತೆ ರೈತ ಸಂಘಟನೆಗಳಿಗೆ ಗೃಹ ಸಚಿವ ಅಮಿತ್ ಶಾ ಆಹ್ವಾನ ನೀಡಿದ್ದರು. ಬುಧವಾರ ಆರನೇ ಸುತ್ತಿನ ಮಾತುಕತೆ ನಿಗದಿಗೊಳಿಸಲಾಗಿದ್ದು, ಅದಕ್ಕೆ ಮುನ್ನವೇ ಅಮಿತ್ ಶಾ ಅವರು ಈ ಆಹ್ವಾನ ನೀಡಿರುವುದು ಕುತೂಹಲ ಹೆಚ್ಚಿಸಿದೆ.
ಮಂಗಳವಾರ ಸಂಜೆ 14 ರೈತ ಸಂಘಟನೆಗಳ ಪ್ರತಿನಿಧಿಗಳು ಅಮಿತ್ ಶಾ ನಿವಾಸಕ್ಕೆ ತೆರಳಿದ್ದು, ಸಭೆ ನಡೆಸಿದ್ದಾರೆ. ಅಮಿತ್ ಶಾ ಅವರ ಭೇಟಿಯ ವೇಳೆ ತಮ್ಮ ಬೇಡಿಕೆಗಳಿಗೆ 'ಯೆಸ್' ಅಥವಾ 'ನೋ' ಎರಡೇ ಆಯ್ಕೆಗಳನ್ನು ನೀಡುವುದಾಗಿ ರೈತ ಮುಖಂಡ ರುದ್ರು ಸಿಂಗ್ ಮನ್ಸಾ ತಿಳಿಸಿದ್ದಾರೆ.
ದೆಹಲಿಯ ಬುರಾರಿ ಮೈದಾನಕ್ಕೆ ತೆರಳಿ ಪ್ರತಿಭಟನೆ ಮುಂದುವರಿಸುವಂತೆ ಕೇಂದ್ರ ಸರ್ಕಾರದ ಮನವಿಯನ್ನು ತಿರಸ್ಕರಿಸಿರುವ ಅವರು, ನಾವು ಬುರಾರಿಗೆ ಹೋಗಲು ಬಯಸಿಲ್ಲ. ದೆಹಲಿ ಮತ್ತು ಹರ್ಯಾಣದ ಜನತೆಗೆ ತೊಂದರೆ ಕೊಡಲು ಬಯಸದ ಕಾರಣ ನಮಗೆ ರಾಮ್ ಲೀಲಾ ಮೈದಾನವನ್ನು ಬಿಟ್ಟುಕೊಡಿ ಎಂದು ಅವರು ಬೇಡಿಕೆ ಇರಿಸಿದ್ದಾರೆ.

ರೈತರನ್ನು ಭೇಟಿಯಾಗುವುದಕ್ಕೂ ಮುನ್ನ ಅಮಿತ್ ಶಾ ಅವರು ದೆಹಲಿ ಪೊಲೀಸ್ ಕಮಿಷನರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಸುಮಾರು ಅರ್ಧಗಂಟೆ ಈ ಮಾತುಕತೆ ನಡೆಯಿತು.
ರೈತ ಮುಖಂಡರ ನಿಯೋಗ ರಾತ್ರಿ 7.45ರ ಸುಮಾರಿಗೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಅಂತಾರಾಷ್ಟ್ರೀಯ ಅತಿಥಿ ಗೃಹಕ್ಕೆ ತೆರಳಿ ಅಮಿತ್ ಶಾ ಅವರನ್ನು ಭೇಟಿ ಮಾಡಿದೆ.












Click it and Unblock the Notifications