ಕುಡಿಯುವ ನೀರು ಕೇಳಿದ ರೈತರಿಗೆ ಪೊಲೀಸರ ಲಾಠಿ ಏಟು
ಬೆಂಗಳೂರು, ಮಾರ್ಚ್, 03: ಕುಡಿಯುವ ನೀರು ಕೇಳಲು ಬೆಂಗಳೂರಿಗೆ ಆಗಮಿಸಿದ್ದ ರೈತರಿಗೆ ಅಂತಿಮವಾಗಿ ಸಿಕ್ಕಿದ್ದು ಲಾಠಿ ಏಟು. ಗುರುವಾರ ಮಧ್ಯಾಹ್ನ ಕಾವೇರಿ ಜಂಕ್ಷನ್ ಬಳಿ ವಿಕೋಪಕ್ಕೆ ಹೋದ ರೈತರ ಪ್ರತಿಭಟನೆಯನ್ನು ಹತೋಟಿಗೆ ತರಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ. ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಬಂಧನ ಮಾಡಲಾಗಿದೆ.
ದೇವನಹಳ್ಳಿ ರಸ್ತೆಯ ಮೂಲಕ ರೈತ ಶಕ್ತಿ ವಿಧಾನಸೌಧದ ಕಡೆ ನುಗ್ಗಿ ಬರುತ್ತಿತ್ತು ಕಿವಿ ಕೇಳದ ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸಲು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಆಗಮಿಸುತ್ತಿತ್ತು. ಆದರೆ ನುಗ್ಗಿ ಬರುತ್ತಿದ್ದ ರೈತ ಶಕ್ತಿಯನ್ನು ಮೇಖ್ರಿ ವೃತ್ತದ ಬಳಿ ತಡೆಯಲಾಗಿತ್ತು. ರೈತರ ಹೋರಾಟ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಸಾವಿರಾರು ರೈತರು ಮೇಖ್ರಿ ವೃತ್ತದಲ್ಲಿಯೇ ಪ್ರತಿಭಟನೆ ಕುಳಿತಿದ್ದಾರೆ. ಶಾಶ್ವತ ನೀರಾವರಿಗೆ ಆಗ್ರಹಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟ ಬಯಲು ಸೀಮೆ ಶಾಶ್ವತ ನೀರಾವರಿ ಹೋರಾಟ ಸಮಿತಿ ರೈತರನ್ನು ದೇವನಹಳ್ಳಿ ಬಳಿ ತಡೆಯಲು ಪೊಲೀಸರಿಂದ ಸಾಧ್ಯವಾಗಿರಲಿಲ್ಲ. [ಎತ್ತಿನಹೊಳೆ ಯೋಜನೆ ವಿವಾದ ಏಕೆ, ಏನು?]
ರೈತರ ಮೆರವಣಿಗೆ ತಡೆಯಲು ದೇವನಹಳ್ಳಿ, ಚಿಕ್ಕಬಳ್ಳಾಪುರ ರಸ್ತೆಯ ನಂದಿ ಕ್ರಾಸ್ ನಲ್ಲಿ ಡಿಸಿಪಿ ಡಾ.ಹರ್ಷ, ಎಸ್.ಪಿ.ರಮೇಶ್ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಎಸಿಪಿಗಳು, ಇನ್ಸ್ ಪೆಕ್ಟರ್ಗಳು, ಟ್ರಾಫಿಕ್ ಇನ್ಸ್ ಪೆಕ್ಟರ್, 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಇದ್ದರೂ ಅವರೆಲ್ಲರನ್ನು ಮೀರಿ ರೈತ ಶಕ್ತಿ ಬೆಂಗಳೂರು ಕಡೆ ನುಗ್ಗಿತ್ತು.

300 ಟ್ರ್ಯಾಕ್ಟರ್ ಗಳು
300 ಕ್ಕೂ ಅಧಿಕ ಟ್ರ್ಯಾಕ್ಟರ್ ಗಳು, 5000 ಕ್ಕೂ ಅಧಿಕ ರೈತರು ವಿಧಾನಸೌಧದ ಕಡೆ ನುಗ್ಗುವ ಯತ್ನ ಮಾಡಿದ್ದರು. ಹಲವು ರೈತರು ದ್ವಿಚಕ್ರ ವಾಹನದಲ್ಲಿ ಆಗಮಿಸಿದ್ದರು. ಚಿಕ್ಕಬಳ್ಳಾಪುರ ಮತ್ತು ಕೋಲಾರದ ಜಿಲ್ಲೆ ಜನರಿಗೆ ಶಾಶ್ವತವಾಗಿ ನೀರು ನೀಡುವವರೆಗೂ ಹೋರಾಟ ನಿಲ್ಲಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫ್ರೀಡಂ ಪಾರ್ಕಿನಿಂದ ಮೆರವಣಿಗೆ
ಒಂದೆಡೆ ರೈತರು ದೇವನಹಳ್ಳಿ ಮಾರ್ಗದಲ್ಲಿ ಬೆಂಗಳೂರಿನ ಕಡೆ ಆಗಮಿಸುತ್ತಿದ್ದರೆ ಇತ್ತ ಸ್ವಾತಂತ್ರ್ಯ ಉದ್ಯಾನದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತ ಹೋರಾಟ ನಡೆಯುತ್ತಿದೆ.

ಟ್ರಾಫಿಕ್ ಜಾಮ್
ವಿಮಾನ ನಿಲ್ದಾಣ ರಸ್ತೆ ಸಂಪೂರ್ಣ ಜಾಮ್ ಆಗಿತ್ತು. ಎಲ್ಲ ಕಡೆ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದರೂ ಅದೆಲ್ಲವನ್ನು ಕಿತ್ತೆಸೆದ ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಆಗಮಿಸುತ್ತಿದ್ದಾರೆ.

ಹೊಸಕೋಟೆ, ದೇವನಹಳ್ಳಿಯಲ್ಲೂ ಪ್ರತಿಭಟನೆ
ಹೊಸಕೋಟೆ, ದೇವನಗಹಳ್ಳಿಯಲ್ಲೂ ರೈತರು ಬೀದಿಗಿಳಿದು ಹೋರಾಟ ಆರಂಭ ಮಾಡಿದ್ದಾರೆ. ಬೆಳೆಗಳಿಗೆ ನಿರ್ದಿಷ್ಟ ಬೆಲೆ, ಬರ ಪರಿಹಾರ, ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳ ಸದ್ಯದ ಪರಿಸ್ಥಿತಿ ಎಲ್ಲದಕ್ಕೂ ಪರಿಹಾರ ನೀಡಬೇಕು ಎಂದು ಒತ್ತಾಯ ಆಗ್ರಹಿಸಿದ್ದರು.












Click it and Unblock the Notifications