ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದ ರೈತರಿಗೆ 50 ಲಕ್ಷ ರೂ. ನೋಟೀಸ್!
ಸಾಂಬಾಲ್, ಡಿಸೆಂಬರ್ 18: ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ದೆಹಲಿಯಲ್ಲಿ ರೈತರು ಕೈಗೊಂಡಿರುವ ಹೋರಾಟಕ್ಕೆ ದೇಶಾದ್ಯಂತ ಬೆಂಬಲ ವ್ಯಕ್ತಗೊಂಡಿದೆ. ಆದರೆ ಉತ್ತರ ಪ್ರದೇಶದ ಸಾಂಬಾಲ್ ನಲ್ಲಿ ಪ್ರತಿಭಟನೆ ನಡೆಸಿದ ರೈತರಿಗೆ 50 ಲಕ್ಷ ರೂಪಾಯಿಯ ಬಾಂಡ್ ನೀಡುವಂತೆ ನೋಟೀಸ್ ಕೊಡಲಾಗಿದೆ.
ಪ್ರತಿಭಟನೆ ಸಮಯದಲ್ಲಿ ಶಾಂತಿ ಉಲ್ಲಂಘನೆಯಾಗುವ ಸಾಧ್ಯತೆಯ ಪೊಲೀಸರ ಎಚ್ಚರಿಕೆಯ ಕಾರಣ ರೈತ ಮುಖಂಡರಿಗೆ ವೈಯಕ್ತಿಕ ಬಾಂಡ್ ಸಲ್ಲಿಸುವಂತೆ ನೋಟೀಸ್ ನೀಡಿರುವುದಾಗಿ ಉತ್ತರ ಪ್ರದೇಶದ ಸಾಂಬಾಲ್ ಜಿಲ್ಲಾಡಳಿತವು ತಿಳಿಸಿದೆ. ನೋಟೀಸ್ ನಲ್ಲಿ 50 ಲಕ್ಷ ರೂ ಬಾಂಡ್ ಗೆ ಸಹಿ ಹಾಕಲು ನಮೂದಿಸಿದ್ದು, ಆ ನಂತರ ಅದನ್ನು 50,000ರೂಗಳಿಗೆ ಇಳಿಸಲಾಗಿದೆ. ಮುಂದೆ ಓದಿ...

ಆರು ರೈತ ಮುಖಂಡರಿಗೆ ನೋಟೀಸ್
ಸಾಂಬಾಲ್ ನ ಆರು ರೈತ ಮುಖಂಡರಿಗೆ ಡಿ.12 ಹಾಗೂ 13ರಂದು ಐವತ್ತು ಲಕ್ಷ ರೂಪಾಯಿಯ ವೈಯಕ್ತಿಕ ಬಾಂಡ್ ನೀಡುವಂತೆ ನೋಟೀಸ್ ನೀಡಲಾಗಿತ್ತು. ಇತರೆ ಆರು ರೈತರಿಗೆ ಐದು ಲಕ್ಷ ರೂ ಬಾಂಡ್ ನೀಡುವ ನೋಟೀಸ್ ನೀಡಲಾಗಿತ್ತು. ಇಷ್ಟೊಂದು ಹಣ ನಮ್ಮಿಂದ ಎಲ್ಲಿ ಬರಬೇಕು ಎಂದು ರೈತರು ಪ್ರಶ್ನಿಸಿದ್ದಾರೆ. ಆ ನಂತರ ದೋಷದಿಂದಾಗಿ 50 ಲಕ್ಷ ಎಂದು ನಮೂದಾಗಿದೆ. ಹೊಸ ನೋಟೀಸ್ ನೀಡಲಾಗುತ್ತಿದೆ ಎಂದು ಸಾಂಬಾಲ್ ಎಸ್ ಪಿ ಚಕ್ರೇಶ್ ಮಿಶ್ರಾ ಸ್ಪಷ್ಟನೆ ನೀಡಿದ್ದಾರೆ.

"ಭಯೋತ್ಪಾದಕರೆಂಬಂತೆ ನಡೆಸಿಕೊಳ್ಳುತ್ತಿದ್ದಾರೆ"
"ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕಲು ಮನಸ್ಸಿಗೆ ಬಂದಂತೆ ಸಂಖ್ಯೆಗಳನ್ನು ಹಾಕಿದ್ದಾರೆ. ನಮ್ಮದು ಶಾಂತಿಯುತ ಪ್ರತಿಭಟನೆ. ಆಡಳಿತಕ್ಕೆ ರೈತ ಪ್ರತಿಭಟನೆ ಬಗ್ಗೆ ಭಯ ಏಕೆ? ನಾವು ಭಯೋತ್ಪಾದಕರು ಎಂಬಂತೆ 50 ಲಕ್ಷ ಬಾಂಡ್ ಕೇಳಿದ್ದಾರೆ. ನಮ್ಮ ಬಳಿ ಅಷ್ಟು ಹಣ ಎಲ್ಲಿಂದ ಬರುತ್ತದೆ ಎಂದು ರೈತ ಮುಖಂಡ ಭಾರತೀಯ ಕಿಸಾನ್ ಯೂನಿಯನ್ ಜಿಲ್ಲಾಧ್ಯಕ್ಷ ರಾಜ್ ಪಾಲ್ ಪ್ರಶ್ನಿಸಿದ್ದಾರೆ. ರಾಜ್ ಪಾಲ್ ಸಿಂಗ್ ಯಾದವ್ ಮತ್ತು ರೈತ ಮುಖಂಡರಾದ ಜೈವೀರ್ ಸಿಂಗ್, ಬ್ರಹ್ಮಚಾರಿ ಯಾದವ್, ಸತೇಂದ್ರ ಯಾದವ್, ರೌಡಾಸ್, ವೀರ್ ಸಿಂಘ್ ಎಂಬುವರಿಗೆ ಈ ನೋಟೀಸ್ ನೀಡಲಾಗಿದೆ. ಇವರೆಲ್ಲರೂ ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆಗೆ ಜನರನ್ನು ಸಂಘಟಿಸುತ್ತಿದ್ದರು ಎಂದು ತಿಳಿದುಬಂದಿದೆ.

"ಶಾಂತಿ ಉಲ್ಲಂಘನೆಯಾಗಬಾರದೆಂದು ನೋಟೀಸ್"
ಕೆಲವು ವ್ಯಕ್ತಿಗಳು ರೈತರನ್ನು ಪ್ರಚೋದಿಸುತ್ತಿರುವ ಕುರಿತು ಹಯಾತ್ ನಗರ ಪೊಲೀಸ್ ಠಾಣೆಯಿಂದ ಮಾಹಿತಿ ಬಂದ ಕಾರಣ ಪ್ರತಿಭಟನೆ ಹೆಸರಿನಲ್ಲಿ ಶಾಂತಿ ಉಲ್ಲಂಘನೆಯಾಗಬಹುದು ಎಂದು ಅವರಿಗೆ ವೈಯಕ್ತಿಕವಾಗಿ ಐವತ್ತು ಲಕ್ಷ ರೂ ಬಾಂಡ್ ಸಲ್ಲಿಸುವಂತೆ ತಿಳಿಸಿದ್ದೇವೆ. ಕ್ರಿಮಿನಲ್ ಪ್ರೊಸೀಜರ್ ಕೋಡ್ ನ ಸೆಕ್ಷನ್ 111ರ ಅಡಿ ನೋಟೀಸ್ ಕಳುಹಿಸಲಾಗಿದೆ ಎಂದು ಉಪವಿಭಾಗ ಮ್ಯಾಜಿಸ್ಟ್ರೇಟ್ ದೀಪೇಂದ್ರ ಯಾದವ್ ತಿಳಿಸಿದ್ದಾರೆ. ಈ ಬಾಂಡ್ ದುಬಾರಿ ಎಂದು ರೈತರು ವಿರೋಧಿಸುತ್ತಿದ್ದಂತೆ ಮತ್ತೊಂದು ನೋಟೀಸ್ ನೀಡಿದ್ದು, ಅದರಲ್ಲಿ ಐವತ್ತು ಸಾವಿರ ರೂ ಬಾಂಡ್ ಸಲ್ಲಿಸುವಂತೆ ತಿಳಿಸಲಾಗಿದೆ.

"ಏನಾದರೂ ನಾವು ಜಗ್ಗಲ್ಲ"
"ಏನಾದರೂ ಆಗಲಿ, ನಾವು ಈ ಬಾಂಡ್ ನೀಡುವುದಿಲ್ಲ. ನಮ್ಮನ್ನು ನೇಣಿಗೆ ಹಾಕಬಹುದು ಇಲ್ಲವೇ ಜೈಲಿಗೆ ಕಳುಹಿಸಬಹುದು. ನಾವು ರೈತರ ಹಕ್ಕಿಗಾಗಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೇವೆಯೇ ಹೊರತು ಅಪರಾಧ ಮಾಡುತ್ತಿಲ್ಲ. ಪೊಲೀಸರು ಸುಮ್ಮನೆ ನಮ್ಮ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ನವೆಂಬರ್ 26ರಿಂದಲೂ ಪ್ರತಿಭಟನೆ ಕೈಗೊಂಡಿದ್ದೇವೆ. ಪ್ರತಿಭಟನೆ ಬೆಂಬಲಿಸಿ ಮೊದಲ ದಿನವೇ 400 ಜನರು ಸಾಂಬಾಲ್ ನ ಚೌಕ್ ನಲ್ಲಿ ಸೇರಿದ್ದರು. ಆಗಿನಿಂದ ಪೊಲೀಸರು ಈ ರೀತಿ ನಿಯಂತ್ರಣ ಸಾಧಿಸುತ್ತಿದ್ದಾರೆ" ಎಂದು ರಾಜ್ ಪಾಲ್ ಸಿಂಗ್ ದೂರಿದ್ದಾರೆ.












Click it and Unblock the Notifications