ಗಡಿಯಲ್ಲಿ ರೈತರ ಉಪವಾಸ ನಿರಶನ; ತೀವ್ರ ಹೋರಾಟಕ್ಕೆ ನಿರ್ಧಾರ
ನವದೆಹಲಿ, ಡಿಸೆಂಬರ್ 21: ಕೇಂದ್ರದ ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ದೆಹಲಿಯಲ್ಲಿ ರೈತರ ಹೋರಾಟ ಮುಂದುವರೆದಿದ್ದು, ಹೋರಾಟ ತೀವ್ರಗೊಳಿಸಲು ಸೋಮವಾರ ಕೆಲವು ರೈತ ಸಂಘಟನೆಗಳು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿವೆ.
ತಮ್ಮ ಉಪವಾಸ ಸತ್ಯಾಗ್ರಹದ ಕುರಿತು ಭಾನುವಾರ ರೈತರು ಘೋಷಣೆ ಮಾಡಿದ್ದು, ಎಲ್ಲಾ ಪ್ರತಿಭಟನಾ ಸ್ಥಳಗಳಲ್ಲಿ ಉಪವಾಸ ಸತ್ಯಾಗ್ರಹ ನಡೆಯಲಿದೆ. ಇದೇ ಸಂದರ್ಭ, ಸರ್ಕಾರ ರೈತರನ್ನು ಮುಂದಿನ ವಾರ ಮಾತುಕತೆಗೆ ಆಹ್ವಾನಿಸಿದೆ. ಹರಿಯಾಣದಲ್ಲಿ ಡಿಸೆಂಬರ್ 25ರಿಂದ 27ರವರೆಗೆ ಟೋಲ್ ಸಂಗ್ರಹ ನಿಲ್ಲಿಸುವುದಾಗಿ ರೈತರು ತಿಳಿಸಿದ್ದಾರೆ.
"ಇಂಥ ಕಠಿಣ ಪರಿಸ್ಥಿತಿಯಲ್ಲೂ ಮೋದಿ ಮೌನಕ್ಕೆ ಗಂಟುಬಿದ್ದಿದ್ದೇಕೆ?"
ರೈತ ಸಂಘಟನೆಗಳು 24 ಗಂಟೆಗಳ ಅವಧಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದು, 12 ರೈತ ಸಂಘಟನೆಗಳು ಮೊದಲು ಉಪವಾಸ ಸತ್ಯಾಗ್ರಹ ನಡೆಸಿ, 24 ಗಂಟೆ ನಂತರ ಇತರೆ 11 ರೈತ ಸಂಘಟನೆಗಳು ಸತ್ಯಾಗ್ರಹ ಮುಂದುವರೆಸಲಿವೆ.
ಜೈ ಕಿಸಾನ್ ಮೂವ್ಮೆಂಟ್ ನ ರವೀಂದರ್ ಪಾಲ್ ಕೌರ್ ಗಿಲ್, ಭಾರತೀಯ ಕಿಸಾನ್ ಯೂನಿಯನ್ ಸಿದ್ದಪುರದ ಜಗಜಿತ್ ಸಿಂಗ್ ದೇಲ್ ವಾಲ್, ಡೋಬಾ ಯೂನಿಯನ್ ಪಂಜಾಬ್ ನ ಕುಲದೀಪ್ ಸಿಂಗ್ ದಯಾಲ, ಪಂಜಾಬ್ ಭಾರತೀಯ ಕಿಸಾನ್ ಯೂನಿಯನ್ ನ ಫರ್ಮಾನ್ ಸಿಂಗ್ ಸಂದು, ಬೂಟಾ ಸಿಂಗ್ ಚಕ್ರ, ಡೆಮಾಕ್ರಟಿಕ್ ಕಿಸಾನ್ ಸಭಾ ಪಂಜಾಬ್ ನ ಡಾ. ಸತ್ನಂ ಸಿಂಗ್ ಅಜ್ನಲ್, ಕೀರ್ತಿ ಕಿಸಾನ್ ಯೂನಿಯನ್ ಭೂಪೇಂದರ್ ಸಿಂಗ್, ಜಂಗಬೀರ್ ಸಿಂಗ್ ಚೌಹಾಣ್, ಮುಖೇಶ್ ಚಂದ್ರ, ಕುಲ್ ಹಿಂದ್ ಕಿಸಾನ್ ಸಭಾದ ಬಲ್ಜಿತ್ ಸಿಂಗ್, ಪಬ್ಲಿಕ್ ಜಸ್ಟೀಸ್ ವೆಲ್ಫೇರ್ ನ ಬಲದೇವ್ ಸಿಂಗ್ ಸಿರ್ಸಾ ಈ ಪ್ರಮುಖರು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.
ಫೇಸ್ ಬುಕ್ ಪುಟ ಬ್ಲಾಕ್ ಮಾಡಿದರೆ ಬಿಜೆಪಿ ಮುಖ ಮರೆಮಾಚಲು ಸಾಧ್ಯವಿಲ್ಲ: ಸೋಮವಾರ ಕೆಲವು ಅವಧಿಯವರೆಗೆ ರೈತರ ಪ್ರತಿಭಟನೆ ಲೈವ್ ವರದಿಯಾಗುತ್ತಿದ್ದ ಕಿಸಾನ್ ಏಕ್ತಾ ಮೋರ್ಚಾ ಪುಟವನ್ನುಇದಕ್ಕಿದ್ದಂತೆ ಬ್ಲಾಕ್ ಮಾಡಲಾಗಿತ್ತು. ಆದರೆ ಹೀಗೆ ಮಾಡುವುದರಿಂದ ಬಿಜೆಪಿಗೆ ಯಾವುದೇ ಅನುಕೂಲವಿಲ್ಲ. ಇದರಿಂದ ಬಿಜೆಪಿ ತನ್ನ ಮುಖವನ್ನು ಮರೆ ಮಾಚಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ವಕ್ತಾರ, ಜೈವೀರ್ ಶರ್ಗಿಲ್ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.