ಪ್ರಧಾನಿ ನರೇಂದ್ರ ಮೋದಿ ತಾಯಿಗೆ ರೈತನ ಭಾವುಕ ಪತ್ರ
ನವದೆಹಲಿ, ಜನವರಿ 25: ಮೂರು ಕೃಷಿ ಕಾಯ್ದೆಗಳ ವಿರುದ್ಧ ಸಾವಿರಾರು ರೈತರೊಂದಿಗೆ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್ನ ರೈತರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ. ದೇಶಾದ್ಯಂತ ಬೃಹತ್ ಪ್ರತಿಭಟನೆಗೆ ಕಾರಣವಾಗಿರುವ ಕಾಯ್ದೆಗಳನ್ನು ರದ್ದುಗೊಳಿಸುವಂತೆ ನಿಮ್ಮ ಮಗನಿಗೆ ತಿಳಿಹೇಳಿ ಎಂದು ಮನವಿ ಮಾಡಿದ್ದಾರೆ. ನರೇಂದ್ರ ಮೋದಿ ಅವರು ತಮ್ಮ ನಿಲುವನ್ನು ಬದಲಿಸಲು ತಾಯಿಯಾಗಿ ತಮ್ಮ ಎಲ್ಲ ಅಧಿಕಾರ ಬಳಸಿಕೊಳ್ಳುವಂತೆ ಕೋರಿದ್ದಾರೆ.
ಪಂಜಾಬ್ನ ಫೆರೋಜಾಬಾದ್ ಜಿಲ್ಲೆಯ ಗೋಲು ಕಾ ಮೋದ್ ಎಂಬ ಗ್ರಾಮದ ಹರ್ಪ್ರೀತ್ ಸಿಂಗ್ ಎಂಬ ರೈತ ಹಿಂದಿಯಲ್ಲಿ ಈ ಪತ್ರ ಬರೆದಿದ್ದಾರೆ. ಪ್ರತಿಭಟನೆ ನಡೆಸುತ್ತಿರುವ ರೈತರು ಎದುರಿಸುತ್ತಿರುವ ಹವಾಮಾನ ಸ್ಥಿತಿ, ದೇಶದ ಹಸಿವು ನೀಗಿಸುವಲ್ಲಿ ರೈತರ ಶ್ರಮ, ಗಡಿ ರಕ್ಷಣೆಯಲ್ಲಿ ರೈತರ ಪಾತ್ರ ಮುಂತಾದವುಗಳನ್ನು ಮೋದಿ ಅವರ ತಾಯಿ ಹೀರಾಬೆನ್ ಅವರಿಗೆ ಭಾವುಕವಾಗಿ ವಿವರಿಸಿದ್ದಾರೆ.
'ಭಾರವಾದ ಹೃದಯದಿಂದ ಈ ಪತ್ರ ಬರೆಯುತ್ತಿದ್ದೇನೆ. ನಿಮಗೆ ತಿಳಿದಿರುವಂತೆ ದೇಶಕ್ಕೆ ಆಹಾರ ನೀಡುವ ಅನ್ನದಾತ ಇಂದು ಮೂರು ಕರಾಳ ಕಾಯ್ದೆಗಳಿಂದಾಗಿ ದೆಹಲಿಯ ರಸ್ತೆಗಳಲ್ಲಿ ಚಳಿಯಿಂದ ಮಲಗುವಂತಾಗಿದೆ. ಇದರಲ್ಲಿ 90-95 ವರ್ಷದ ವೃದ್ಧರು, ಮಕ್ಕಳು ಮತ್ತು ಮಹಿಳೆಯರೂ ಇದ್ದಾರೆ. ಈ ಚಳಿ ಹವಾಮಾನದಿಂದ ಜನರು ಅಸ್ವಸ್ಥರಾಗುತ್ತಿದ್ದಾರೆ. ಅವರು ಹುತಾತ್ಮರಾಗುತ್ತಿದ್ದಾರೆ ಕೂಡ. ಇದು ನಮ್ಮನ್ನೆಲ್ಲ ಚಿಂತೆಗೀಡುಮಾಡಿದೆ' ಎಂದು ಬರೆದಿದ್ದಾರೆ. ಮುಂದೆ ಓದಿ.

ಅಂಬಾನಿ, ಅದಾನಿಗಳ ಪರ ಕಾಯ್ದೆ
'ಅದಾನಿ, ಅಂಬಾನಿ ಹಾಗೂ ಇತರೆ ಕಾರ್ಪೊರೇಟ್ ಕಂಪೆನಿಗಳ ಅನುಕೂಲತೆಗಾಗಿ ಅಂಗೀಕರಿಸಿರುವ ಮೂರು ಕರಾಳ ಕಾಯ್ದೆಗಳಿಂದಾಗಿ ದೆಹಲಿಯ ಗಡಿಗಳಲ್ಲಿ ಈ ಶಾಂತಿಯುತ ಪ್ರತಿಭಟನೆ ನಡೆಯುತ್ತಿದೆ. ಒಂದೂವರೆ ತಿಂಗಳಿಗಿಂತಲೂ ಹೆಚ್ಚು ಸಮಯದಿಂದ ದೆಹಲಿ ಸುತ್ತಲೂ ಸಾವಿರಾರು ರೈತರು ಬೀಡುಬಿಟ್ಟಿದ್ದಾರೆ. ಸರ್ಕಾರದೊಂದಿಗೆ ಹಲವು ಸುತ್ತಿನ ಮಾತುಕತೆಗಳು ನಡೆದರೂ ಫಲದಾಯಕವಾಗಿಲ್ಲ' ಎಂದು ವಿವರಿಸಿದ್ದಾರೆ.

ತಾಯಿ ಮಾತು ನಿರಾಕರಿಸಲಾರರು
'ನಾನು ಸಾಕಷ್ಟು ಭರವಸೆಗಳೊಂದಿಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ನಿಮ್ಮ ಮಗ ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನಿ. ಅವರು ಅಂಗೀಕರಿಸಿದ ಕೃಷಿ ಕಾನೂನುಗಳನ್ನು ಅವರು ಹಿಂದಕ್ಕೆ ಪಡೆದುಕೊಳ್ಳಬಹುದು. ಒಬ್ಬ ವ್ಯಕ್ತಿ ಯಾರನ್ನು ಬೇಕಾದರೂ ನಿರಾಕರಿಸಬಲ್ಲ. ಆದರೆ ತಾಯಿ ಮಾತನ್ನಲ್ಲ. ಏಕೆಂದರೆ ನಮ್ಮ ದೇಶವು ತಾಯಿಯನ್ನು ದೇವರಂತೆ ಪರಿಗಣಿಸಿದೆ. ನಿಮ್ಮ ಮಗ, ಪ್ರಧಾನಿ ಮೋದಿ ನಿಮ್ಮ ಮನೆಯನ್ನು ಎಂದಿಗೂ ನಿರಾಕರಿಸುವುದಿಲ್ಲ' ಎಂದು ಪತ್ರದಲ್ಲಿ ಹೇಳಿದ್ದಾರೆ.

ಮೋದಿ ಕಿವಿ ಹಿಂಡಿ ಬುದ್ದಿ ಹೇಳಬಹುದು
'ನಿಮ್ಮ ಮಗ ನಿಮ್ಮ ಮಾತನ್ನು ಕೇಳುತ್ತಾರೆ ಮತ್ತು ಈ ಕರಾಳ ಕಾಯ್ದೆಗಳನ್ನು ರದ್ದುಗೊಳಿಸುತ್ತಾರೆ ಎಂದು ನಂಬುತ್ತೇನೆ. ಆಗ ಇಡೀ ದೇಶ ನಿಮಗೆ ಕೃತಜ್ಞವಾಗಿರುತ್ತದೆ. ತಾಯಿಯು ಮಗನ ಕಿವಿ ಎಳೆದು ಆದೇಶಿಸಬಲ್ಲಳು. ಈ ಮೂರು ಕೃಷಿ ಕಾಯ್ದೆಗಳು ರದ್ದುಗೊಂಡರೆ ಅದು ಇಡೀ ದೇಶದ ಗೆಲುವಾಗುತ್ತದೆ ಮತ್ತೆ ಅದು ಯಾರ ಸೋಲು ಆಗುವುದಿಲ್ಲ' ಎಂದಿದ್ದಾರೆ.

75ಕ್ಕೂ ಅಧಿಕ ರೈತರ ಸಾವು
ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸಿಮ್ಲಾದಲ್ಲಿ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿ ಕೆಲವು ದಿನಗಳ ಹಿಂದೆ ಬಂಧನಕ್ಕೆ ಒಳಗಾಗಿದ್ದ ರೈತರು ಹರ್ಪ್ರೀತ್ ಸಿಂಗ್ ಒಬ್ಬರು. ಮರುದಿನ ಜಾಮೀನಿನ ಮೇಲೆ ಅವರು ಬಿಡುಗಡೆಯಾಗಿದ್ದರು. ಪ್ರತಿಭಟನೆಯ ವೇಳೆ ವಿಪರೀತ ಚಳಿ, ವಿವಿಧ ಆರೋಗ್ಯ ಸಮಸ್ಯೆಗಳಿಂದ 75ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಕೆಲವು ರೈತರು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾರೆ.












Click it and Unblock the Notifications