ಅನ್ನ ತಿನ್ನುವವರೆಲ್ಲಾ ಮಾಡಬೇಕಾದ ಚಳವಳಿ ಇದು; ನಂದಿನಿ ಜಯರಾಂ
ದೆಹಲಿಯಲ್ಲಿ ರೈತ ಚಳವಳಿ ಬುಧವಾರಕ್ಕೆ 300 ದಿನ ಪೂರೈಸಿದೆ. ಕಳೆದ ವರ್ಷ ನವೆಂಬರ್ ಮಾಸದಲ್ಲಿ ರೈತರು ದಿಲ್ಲಿ ಚಲೋ ಜಾಥಾ ಹಮ್ಮಿಕೊಂಡಿದ್ದರು. ದಿಲ್ಲಿ ಗಡಿಗಳಲ್ಲಿ ರೈತರನ್ನು ತಡೆಹಿಡಿಯಲಾಯಿತು. ಪ್ರಭುತ್ವ ರಸ್ತೆಗಳಲ್ಲಿ ಕಂದಕ ತೋಡಿತು. ಅಶ್ರುವಾಯು ಸಿಡಿಸಿತು. ವಾಟರ್ ಜೆಟ್ಗಳನ್ನು ಹಾರಿಸಿತು. ರೈತರು ಧೃತಿಗೆಡಲಿಲ್ಲ. ದಿಲ್ಲಿ ಗಡಿಗಳಲ್ಲೇ ಮೊಕ್ಕಾಂ ಹೂಡಿದರು. ಅಂದಿನಿಂದ ಇಂದಿನವರೆಗೆ ಶಾಂತಿಯುತ ಚಳವಳಿಯಲ್ಲಿ ತೊಡಗಿದ್ದಾರೆ.
ಇದೀಗ ದಿಲ್ಲಿ ರೈತ ಚಳವಳಿಯ ಮುಂದುವರಿದ ಭಾಗವಾಗಿ ಸೆಪ್ಟೆಂಬರ್ 27 ರಂದು ಭಾರತ್ ಬಂದ್ಗೆ ರೈತರು ಕರೆ ಕೊಟ್ಟಿದ್ದಾರೆ. ರೈತರ ಪರವಾಗಿ ವಿವಿಧ ಸಾಮಾಜಿಕ ಸಂಘಟನೆಗಳು ಸೇರಲಿವೆ ಎಂಬ ಆಶಾಭಾವನೆಯನ್ನು ಸಂಯುಕ್ತ ಕಿಸಾನ್ ಮೋರ್ಚಾ ವ್ಯಕ್ತಪಡಿಸಿದೆ. ಸೆ.27ರಂದು ರೈತರು ಕರೆ ನೀಡಿರುವ ಭಾರತ್ ಬಂದ್ ತಯಾರಿ ಬಗ್ಗೆ ಒನ್ಇಂಡಿಯಾ ಕನ್ನಡ ರೈತ ಮುಖಂಡರನ್ನು ಮಾತನಾಡಿಸಿದಾಗ...
ನಂದಿನಿ ಜಯರಾಂ, ರೈತ ಮುಖಂಡರು:
ಸರ್ಕಾರ ಅಥವಾ ಪ್ರಭುತ್ವ ಇತ್ತೀಚಿನ ವರ್ಷಗಳಲ್ಲಿ ಒಂದು ನಡವಳಿಕೆ ಕಲಿತುಕೊಂಡಿದೆ. ಯಾವುದೇ ಚಳವಳಿ, ಎಷ್ಟು ತೀವ್ರವಾದ ಹೋರಾಟ ಆಗಿರಲಿ, ಸಮಸ್ಯೆ ಎಷ್ಟೇ ಗಂಭೀರವಾಗಿರಲಿ, ಎಷ್ಟು ದೀರ್ಘಾವಧಿ ಚಳವಳಿ ಆದ್ರೂ ಯಾವುದಕ್ಕೂ ಸ್ಪಂದಿಸದೇ ಪಂಚೇದ್ರಿಯಗಳೇ ಇಲ್ಲದೇ ಇರುವ ರೀತಿ ಉದಾಸೀನ ಮಾಡಿಕೊಂಡು ನಮಗೆ ಸಂಬಂಧ ಪಟ್ಟಿದ್ದೇ ಅಲ್ಲ ಅನ್ನೋ ರೀತಿ ವರ್ತಿಸ್ತಿದೆ. ಇದೊಂದು ಕೆಟ್ಟ ಬೆಳವಣಿಗೆ ಇತ್ತೀಚಿನ ವರ್ಷಗಳಲ್ಲಿ ನಾವು ನೋಡ್ತಾ ಇದ್ದೀವಿ. ಹೋರಾಟಕ್ಕೆ ಬರೋ ಅಷ್ಟರಲ್ಲೇ ಸುಸ್ತಾಗಿರ್ತೀವಿ. ಬಂದ ನಂತರ ಹೋರಾಟಗಳನ್ನು ಈ ತರ ಕಡೆಗಣಿಸಿದಾಗ ರೈತ ಸಮುದಾಯಕ್ಕೆ ನಿಜವಾಗ್ಲೂ ಸುಸ್ತಾಗ್ತದೆ. ಆದರೆ ಈ ವಿಷಯದಲ್ಲಿ ಸುಸ್ತಾಯ್ತು ಅಂತ ಬಿಡೋಕಾಗಲ್ಲ.

ನಮ್ಮ ಬದುಕಿನ ಪ್ರಶ್ನೆ, ನನ್ನ ಮುಂದಿನ ಜನಾಂಗದ ಪ್ರಶ್ನೆ, ಇವೆಲ್ಲವನ್ನೂ ನೋಡ್ದಾಗ 27ನೇ ತಾರೀಖಿನ ನಡೆ ಏನಿದೆ ಅದು ಬಹಳ ಮಹತ್ವ ಪಡ್ಕೊಳ್ಳುತ್ತೆ. ಭಾರತ್ ಬಂದ್ ಅಂತೇಳ್ದಾಗ ಇದು ರೈತರದಷ್ಟೇ ಅನ್ನೋ ಅಭಿಪ್ರಾಯ ಹಲವರಲ್ಲಿದೆ. GATT ಒಪ್ಪಂದ ಆದಾಗ ಪ್ರೊ. ನಂಜುಂಡಸ್ವಾಮಿ ಅವ್ರು ಅದನ್ನು ಹೇಳೋಕೆ ಶುರು ಮಾಡಿದ್ರು. ಏನೆಲ್ಲಾ ಆಗುತ್ತೆ ಅನ್ನೋದನ್ನು ಅವ್ರು ಹೇಳ್ತಿದ್ರು. ಆಗ್ಲೂ ಅನೇಕರು ಅದು ರೈತರಿಗೆ ಸಂಬಂಧಪಟ್ಟಿದ್ದಷ್ಟೇ ಅದ್ಕೊಂಡಿದ್ರು. ರೈತರಿಗೆ ಹೆಚ್ಚಿನ ಸಪೋರ್ಟ್ ಸಿಗ್ಲಿಲ್ಲ. ಆದ್ರೆ ಈಗಿನ ಪರಿಸ್ಥಿತಿ ಆಹಾರ ಭದ್ರತೆಗೆ ಸಂಬಂಧಪಟ್ಟಿದ್ದು, ಹಸಿವಿಗೆ ಸಂಬಂಧಿಸಿದ್ದು. ಹಾಗಾಗಿ ದೇಶದ ಆಹಾರ ಭದ್ರತೆ, ಸಾಮಾಜಿಕ ಭದ್ರತೆ ಎಲ್ಲವೂ ಉಳಿಬೇಕು ಅಂದ್ರೆ ಖಡಾಖಂಡಿತವಾಗಿ ಎಲ್ಲರೂ ಈ ಬಂದ್ ಗೆ ಕೈಜೋಡಿಸಬೇಕು. ಎಲ್ಲರದ್ದೂ ಕರ್ತವ್ಯ ಕೂಡಾ...
ಬಂದ್ ಗೆ ಬೆಂಬಲ ಸೂಚಿಸುವ ಮೂಲಕ ಸರ್ಕಾರಕ್ಕೆ ಛೀಮಾರಿ ಹಾಕಬೇಕು. ಇಡೀ ದೇಶದಲ್ಲಿ ಅನ್ನ ತಿನ್ನೋವ್ರೆಲ್ಲಾ ಮಾಡಬೇಕಾದ ಚಳವಳಿ ಇದು.

ಕುರುಬೂರು ಶಾಂತಕುಮಾರ್, ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ
ಸಂಯುಕ್ತ ಕಿಸಾನ್ ಮೋರ್ಚಾ ಅಖಿಲ ಭಾರತ ಮಟ್ಟದಲ್ಲಿ ಭಾರತ್ ಬಂದ್ಗೆ ಏನು ಕರೆ ಕೊಟ್ಟಿದ್ದಾರೆ, ಅದರ ಅಂಗವಾಗಿ ನಾವು ಕರ್ನಾಟಕದಲ್ಲಿ ಬಂದ್ಗೆ ಸಂಪೂರ್ಣ ಬೆಂಬಲ ಕೊಡ್ತೀವಿ. ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರವಾಸ ಮಾಡಿದ್ದೇವೆ. ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯ ಬರ್ತಿದೆ. ಜನಸಾಮಾನ್ಯರಿಗೆ ಅರಿವು ಬಂದಿದೆ. ಕೃಷಿ ಕಾಯಿದೆಗಳ ಅಪಾಯದ ಬಗ್ಗೆ ಜನರಿಗೆ ಅರ್ಥ ಆಗಿದೆ. ಎಲ್ಲರೂ ಬಂದ್ನಲ್ಲಿ ಸಂಪೂರ್ಣ ತೊಡಗಿಸಿಕೊಳ್ತಾರೆ. ಬಂದ್ ಯಶಸ್ವೀ ಆಗ್ತದೆ. ಕೇಂದ್ರ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಮೂರು ಕೃಷಿ ಕಾಯಿದೆಗಳನ್ನು ವಾಪಸ್ ತಗೋಬೇಕು.
(ಮುಂದುವರೆಯುವುದು)












Click it and Unblock the Notifications