ಬಂಡೀಪುರದಲ್ಲಿ ಕಾಡಾನೆ ಭೀಕರ ದಾಳಿಗೆ ಬಲಿಯಾದ ರೈತ
ಮೈಸೂರು, ಜನವರಿ 24: ತಡರಾತ್ರಿ ತನ್ನ ಜಮೀನು ಕಾಯುತ್ತಿದ್ದ ಸಮಯದಲ್ಲಿ ಕಾಡಾನೆಯೊಂದು ದಾಳಿ ಮಾಡಿ, ರೈತರೊಬ್ಬರು ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಹುಳ್ಳೆಮಾಳ ಗ್ರಾಮದ ಹೊರವಲಯದ ಜಮೀನಿನಲ್ಲಿ ಘಟನೆ ನಡೆದಿದೆ. ಕಾಡಾನೆ ದಾಳಿಗೆ ಬಲಿಯಾಗಿರುವ ರೈತನನ್ನು ಪ್ರಕಾಶ್ ಎಂದು ಗುರುತಿಸಲಾಗಿದೆ.
ರೈತ ಪ್ರಕಾಶ್ ತನ್ನ ಜಮೀನಿನಲ್ಲಿ ರಾಗಿ ಬೆಳೆಯನ್ನು ಸಂರಕ್ಷಿಸುತ್ತಿದ್ದ ಸಂದರ್ಭ ಏಕಾಏಕಿ ಕಾಡಾನೆ ದಾಳಿ ಮಾಡಿದೆ. ತಲೆಯ ಭಾಗಕ್ಕೆ ತುಳಿದು, ಬೆನ್ನಿನ ಭಾಗಕ್ಕೆ ತನ್ನ ಚೂಪಾದ ದಂತದಿಂದ ಚುಚ್ಚಿದ ಪರಿಣಾಮ ಸ್ಥಳದಲ್ಲೇ ರೈತ ಪ್ರಕಾಶ್ ಮೃತಪಟ್ಟಿದ್ದಾರೆ.

ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಿದೆ ಹುಳ್ಳೆಮಾಳ ಗ್ರಾಮ. ಘಟನಾ ಸ್ಥಳಕ್ಕೆ ಎಚ್.ಡಿ.ಕೋಟೆ ಸಿಪಿಐ ಪುಟ್ಟಸ್ವಾಮಿ, ಸರಗೂರು ಸಬ್ಇನ್ಸ್ ಪೆಕ್ಟರ್ ಪುಟ್ಟರಾಜು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಮುಖ್ಯ ಅರಣ್ಯಾಧಿಕಾರಿ ಮತ್ತು ಇತರೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಹುಳ್ಳೆಮಾಳ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಕಾಡು ಪ್ರಾಣಿಗಳಿಂದ ರಕ್ಷಣೆ ನೀಡದ ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications