ಕಳೆಗಟ್ಟಿದ ರೈತ ದಸರಾ ಸಂಭ್ರಮ: ಎತ್ತಿನ ಗಾಡಿ ಓಡಿಸಿದ ಜಿಟಿಡಿ, ಶಿವಶಂಕರರೆಡ್ಡಿ
ಮೈಸೂರು, ಅಕ್ಟೋಬರ್. 12: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಮೂರನೇ ದಿನದ ಅಂಗವಾಗಿ ಇಂದು (ಅ.12) ನಗರದ ಕೋಟೆ ಆಂಜನೇಯ ದೇವಸ್ಥಾನದ ಬಳಿ ಕೃಷಿ ಸಚಿವ ಶಿವಶಂಕರರೆಡ್ಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡರು ಎತ್ತಿನ ಗಾಡಿ ಓಡಿಸುವ ಮೂಲಕ ರೈತ ದಸರಾ ಮೆರವಣಿಗೆಗೆ ಚಾಲನೆ ನೀಡಿದರು.
ರೈತ ದಸರಾ ಕಳೆಗಟ್ಟಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿರುವ ಕಲಾತಂಡಗಳು ನೋಡುಗರ ಮನಸೂರೆಗೊಳಿಸುತ್ತಿವೆ. ಮೆರವಣಿಗೆಯಲ್ಲಿ ಡೊಳ್ಳುಕುಣಿತ, ಪಟಲಕುಣಿತ ನಂದಿ ಕುಣಿತ, ಬೊಂಬೆ ಕುಣಿತ, ಕಂಸಾಳೆ, ಕೋಲಾಟ ಸೇರಿ ಹಲವು ಜಾನಪದ ನೃತ್ಯಗಳು ಅನಾವರಣಗೊಂಡಿದೆ. ಜೊತೆಗೆ ಕೃಷಿಗೆ ಸಂಬಂಧಿಸಿದ ಸ್ತಬ್ದ ಚಿತ್ರ ಎಲ್ಲರ ಕಣ್ಮನ ಸೆಳೆಯುತ್ತಿದೆ.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ಶಿವಶಂಕರ ರೆಡ್ಡಿ, ರೈತ ದಸರಾ ಮೆರವಣಿಗೆಗೆ ಚಾಲನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಗೆಗಳಿಗೆ ಪೂರಕವಾದ ಯೋಜನೆಗಳನ್ನ ಹೆಚ್ಚಾಗಿ ಜಾರಿಗೆ ತರುತ್ತೇವೆ. ಇನ್ನು ದಸರಾ ಪ್ರಯುಕ್ತ ಕೃಷಿ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದರು.

ರೈತರ ಸಾಲನ್ನಾ ವಿಚಾರದ ಕುರಿತು ಪ್ರಸ್ತಾಪಿಸಿದ ಅವರು, ಡಿಸೆಂಬರ್ ನಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಎರಡನೇ ಹಂತದ ಸಾಲ ಮರುಪಾವತಿ ಮಾಡಲಾಗುವುದು. ರೈತರಿಗೆ ಹೊಸ ಸಾಲ ನೀಡಲು ಎಲ್ಲಾ ಸಹಕಾರಿ ಬ್ಯಾಂಕುಗಳಲ್ಲಿಯೂ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ರೈತರಿಗೂ ಹೊಸ ಸಾಲ ದೊರಕಲಿದೆ ಎಂದರು.

ಮೆರವಣಿಗೆಯಲ್ಲಿ ಅಲಂಕಾರಗೊಂಡ ಎತ್ತಿನಗಾಡಿಗಳು, ಬಂಡೂರು ಕುರಿಗಳು, ಗ್ರಾಮೀಣ ಸೊಬಗು ಸಾರುವ ಮತ್ತು ಕೃಷಿ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿಯುಳ್ಳ ಸ್ತಬ್ಧ ಚಿತ್ರಗಳು ಗ್ರಾಮೀಣ ಸೊಬಗನ್ನು ಬಿಂಬಿಸಿದವು. ಇನ್ನು ಇಂದಿನಿಂದ ಭಾನುವಾರದವರೆಗೆ ರೈತ ದಸರಾ ನಡೆಯಲಿದ್ದು, ವಸ್ತುಪ್ರದರ್ಶನ, ಗ್ರಾಮೀಣಕ್ರೀಡಾಕೂಟ, ಹಾಲು ಕರೆಯುವ ಸ್ಪರ್ಧೆ ನಡೆಯಲಿದೆ.












Click it and Unblock the Notifications