ಕೊಯಿಲದಲ್ಲಿ ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ
ಮಂಗಳೂರು, ಅಕ್ಟೋಬರ್. 11:ಬೆಳೆನಾಶ ಹಾಗೂ ಸಾಲಬಾಧೆಯಿಂದ ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಯೋಜನೆಗಳನ್ನು ರಾಜ್ಯಸರಕಾರ ಜಾರಿಗೆ ತರುತ್ತಿದೆ. ಆದರೆ ಇನ್ನೊಂದೆಡೆ ರೈತರ ಆತ್ಮಹತ್ಯಾ ಪ್ರಕರಣಗಳು ಮುಂದುವರೆಯುತ್ತಲೇ ಇವೆ.
ರೈತರ ಸರಣಿ ಆತ್ಮಹತ್ಯಾ ಪ್ರಕರಣಗಳಿಗೆ ಇದೀಗ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದ ರೈತನ ಆತ್ಮಹತ್ಯಾ ಪ್ರಕರಣ ಸೇರ್ಪಡೆಗೊಂಡಿದೆ.
ಸಾಲ ಬಾಧೆಯಿಂದ ಬೇಸತ್ತ ರೈತರೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಯಿಲದಲ್ಲಿ ಬುಧವಾರ (ಅ10) ನಡೆದಿದೆ. ಕುಶಾಲಪ್ಪ ಗೌಡ (53) ಎಂಬುವವರೇ ಆತ್ಮಹತ್ಯೆ ಮಾಡಿಕೊಂಡ ಕೃಷಿಕ.

ಬ್ಯಾಂಕ್ ಹಾಗೂ ಕೈ ಸಾಲಗಳಿಂದಾಗಿ ಕುಶಾಲಪ್ಪ ಗೌಡ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು ಎಂದು ಹೇಳಲಾಗಿದೆ. ಈ ಬಗ್ಗೆ ಮನನೊಂದು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದಲ್ಲಿರುವ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಸಾಲ ಮನ್ನಾ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ ರೈತರ 713 ಕೋಟಿ ರೂಪಾಯಿ ಸಾಲ ಮನ್ನಾ ಆಗಲಿದೆ.
ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರದ ಸಂದರ್ಭದಲ್ಲಿ ಸಾಲ ಮನ್ನಾದಡಿ ಜಿಲ್ಲೆಯ 380 ಕೋಟಿ ರೂಪಾಯಿ ರೈತರ ಸಾಲ ಮನ್ನಾ ಆಗಿದೆ. ಆದರೂ ಕುಶಾಲಪ್ಪ ಗೌಡ ಸಾಲಬಾಧೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೂ ಏಕೆ ?ಎಂಬ ಪ್ರಶ್ನೆ ಉದ್ಬವವಾಗಿದೆ.












Click it and Unblock the Notifications