ರೈತರ ಪ್ರತಿಭಟನೆ ವೇಳೆ ಹಿಂಸಾಚಾರ: ಪೊಲೀಸರು ನೀಡಿದ ಹೇಳಿಕೆಯಲ್ಲೇನಿದೆ?
ನವದೆಹಲಿ, ಜನವರಿ 27: ಮೂರು ಕೃಷಿ ಕಾಯ್ದೆಗಳ ವಿರುದ್ಧ ಗಣರಾಜ್ಯೋತ್ಸವ ದಿನದಂದು ನಡೆದ ರೈತರ ಟ್ರ್ಯಾಕ್ಟರ್ ಮೆರವಣಿಗೆ ವೇಳೆ ಉಂಟಾದ ಸಂಘರ್ಷ, ಹಾನಿ ಪ್ರಕರಣಗಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 15 ಎಫ್ಐಆರ್ಗಳನ್ನು ದಾಖಲಿಸಿದ್ದಾರೆ.
ಘರ್ಷಣೆಯಲ್ಲಿ ಎಂಟು ಬಸ್ಗಳು ಹಾಗೂ 17 ಖಾಸಗಿ ವಾಹನಗಳನ್ನು ಜಖಂಗೊಳಿಸಲಾಗಿದೆ. ಹಾಗೆಯೇ ಹಿಂಸಾಚಾರದಲ್ಲಿ 86 ಪೊಲೀಸರಿಗೆ ಗಾಯಗಳಾಗಿವೆ. ಬಹುಪಾಲು ಗಲಭೆಗಳು ಮುಕರ್ಬಾ ಚೌಕ, ಗಾಜಿಪುರ್, ಐಟಿಒ, ಸೀಮಾಪುರಿ, ನಂಗ್ಲೊಯಿ ಟಿ ಪಾಯಿಂಟ್, ಟಿಕ್ರಿ ಗಡಿ ಮತ್ತು ಕೆಂಪು ಕೋಟೆಗಳಲ್ಲಿ ಸಂಭವಿಸಿವೆ. ಘಾಜಿಪುರ್, ಟಿಕ್ರಿ ಮತ್ತು ಸಿಂಘು ಗಡಿಗಳಲ್ಲಿ ಬ್ಯಾರಿಕೇಡ್ಗಳನ್ನು ಮುರಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿ ಪೊಲೀಸರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದ ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡರು, ಉದ್ದೇಶಿತ ಯೋಜನೆಯಂತೆ ಸಂಪೂರ್ಣ ಶಾಂತಿಯುತ ಮೆರವಣಿಗೆ ನಡೆಸುವುದಾಗಿ ಭರವಸೆ ನೀಡಿದ್ದರು. ಆದರೆ ಬೆಳಿಗ್ಗೆ 8 ಗಂಟೆ ಸುಮಾರಿಗೆ ಅವರು ಮೆರವಣಿಗೆ ಆರಂಭಿಸುತ್ತಿದ್ದಂತೆಯೇ ಹಿಂಸಾಚಾರ ಶುರುವಾಯಿತು. ಅವರು ನಿಗದಿತ ಸಮಯಕ್ಕೂ ಮೊದಲೇ ಮೆರವಣಿಗೆ ಆರಂಭಿಸಿದರು. ಜತೆಗೆ ತಾವು ಒಪ್ಪಿಕೊಂಡಿದ್ದ ಮಾರ್ಗವನ್ನು ಬಿಟ್ಟು ಬೇರೆಡೆ ಟ್ರ್ಯಾಕ್ಟರ್ಗಳನ್ನು ಚಲಾಯಿಸಿದರು ಎಂದು ಆರೋಪಿಸಿದ್ದಾರೆ. ಮುಂದೆ ಓದಿ.

ಕೇಂದ್ರ ದೆಹಲಿಯ ಗುರಿ
ಬೆಳಿಗ್ಗೆ 8.30ರ ಸುಮಾರಿಗೆ ಸಿಂಘು ಗಡಿಯಲ್ಲಿ ಅಂದಾಜು 6,000-7,000 ಟ್ರ್ಯಾಕ್ಟರ್ಗಳು ಸೇರಿದ್ದವು. ಈ ಮೊದಲು ಒಪ್ಪಿಕೊಂಡಿದ್ದ ಮಾರ್ಗದ ಬದಲಾಗಿ ಕೇಂದ್ರ ದೆಹಲಿಗೆ ತೆರಳಲು ಅವಕಾಶ ನೀಡಬೇಕು ಎಂದು ಪಟ್ಟುಹಿಡಿದರು. ಇದರಿಂದ ಗೊಂದಲ ಸೃಷ್ಟಿಯಾಯಿತು ಎಂದು ಪೊಲೀಸರು ಹೇಳಿದ್ದಾರೆ.
|
ಮನವೊಲಿಕೆಗೆ ಬಗ್ಗದ ರೈತರು
'ದೆಹಲಿ ಪೊಲೀಸರ ಎಲ್ಲ ಮನವೊಲಿಕೆಯ ಪ್ರಯತ್ನಗಳ ಬಳಿಕವೂ, ಕುದುರೆಗಳಲ್ಲಿ ಕುಳಿತು ಖಡ್ಗ, ಕೃಪಾಣ, ದೊಣ್ಣೆಗಳನ್ನು ಹಿಡಿದ ನಿಹಾಂಗ್ ನೇತೃತ್ವದ ರೈತರು ಪೊಲೀಸರ ಮೇಲೆ ದಾಳಿ ನಡೆಸಿ ಬ್ಯಾರಿಕೇಡ್ಗಳ ಸಾಲನ್ನು ಕಿತ್ತುಹಾಕಿದರು' ಎಂದು ಪೊಲೀಸರ ಹೇಳಿಕೆ ತಿಳಿಸಿದೆ.

ಐಟಿಒದಲ್ಲಿ ಹಿಂಸಾಚಾರ ಶುರು
ಪೊಲೀಸರ ಕೇಂದ್ರ ಕಚೇರಿ ಇರುವ ಐಟಿಒ ಪ್ರದೇಶದಲ್ಲಿ ಗಾಜಿಪುರದಿಂದ ಮತ್ತು ಸಿಂಘು ಗಡಿಯಿಂದ ಬಂದ ಬೃಹತ್ ಸಂಖ್ಯೆಯ ರೈತರ ಗುಂಪು ನವದೆಹಲಿ ಜಿಲ್ಲೆಯತ್ತ ನುಗ್ಗಲು ಪ್ರಯತ್ನಿಸಿದರು. ಅವರನ್ನು ಪೊಲೀಸರು ತಡೆದಾಗ ವ್ಯಾಪಕ ಹಿಂಸಾಚಾರ ನಡೆಯಿತು.
|
ಪೊಲೀಸರ ಮೇಲೆ ಟ್ರ್ಯಾಕ್ಟರ್ ಹತ್ತಿಸಲು ಪ್ರಯತ್ನ
ರೈತರು ಉಗ್ರ ಸ್ವರೂಪ ತಾಳಿದರು ಮತ್ತು ಬ್ಯಾರಿಕೇಡ್ಗಳನ್ನು ಮುರಿದು ಹಾಕಿದರು. ಕಬ್ಬಿಣದ ಸರಳುಗಳಿಗೆ ಹಾನಿ ಮಾಡಿದರು. ಡಿವೈಡರ್ಗಳನ್ನು ಪುಡಿಮಾಡಿದರು. ಮಾತ್ರವಲ್ಲದೆ, ಈ ಬ್ಯಾರಿಕೇಡ್ಗಳ ಬಳಿ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಟ್ರ್ಯಾಕ್ಟರ್ ಹತ್ತಿಸಲು ಪ್ರಯತ್ನಿಸಿದರು. ಹೆಚ್ಚುವರಿ ಪೊಲೀಸ್ ತುಕಡಿಗಳ ಬಲ ಬಂದ ಬಳಿಕ ಪರಿಸ್ಥಿತಿಯನ್ನು ನಿಯಂತ್ರಿಸಲಾಯಿತು.
|
ಕೆಂಪುಕೋಟೆಯಲ್ಲಿ ಬಾವುಟ
ಬಳಿಕ ರೈತರು ಕೆಂಪುಕೋಟೆಯ ಬಳಿ ತೆರಳಲು ನಿರ್ಧರಿಸಿದರು. ಕೆಂಪುಕೋಟೆಯ ಮುಂಭಾಗದ ವಲಯವನ್ನು ಪ್ರವೇಶಿಸಿ ಅದರ ಗೋಡೆಗಳನ್ನೇರಿದರು. ಒಂದು ಧ್ವಜಗಂಬದಲ್ಲಿ ಧಾರ್ಮಿಕ ಧ್ವಜವನ್ನು ಕೂಡ ಹಾರಿಸಿದರು. ಕೋಟೆಯ ಗುಮ್ಮಟಗಳ ಮೇಲೆಯೂ ಬಾವುಟ ಹಾರಿಸಲು ಪ್ರಯತ್ನಿಸಿದ್ದರು. ಕೊನೆಗೆ ಲಾಠಿ ಚಾರ್ಜ್ ಮಾಡುವ ಮೂಲಕ ಪೊಲೀಸರು ಕೋಟೆ ಒಳಗಿನಿಂದ ಜನರನ್ನು ಹೊರಹಾಕುವಲ್ಲಿ ಯಶಸ್ವಿಯಾದರು ಎಂದು ತಿಳಿಸಿದ್ದಾರೆ.
|
ದಾಖಲಾದ ಪ್ರಕರಣಗಳೇನು?
ಸಂಜೆ ವೇಳೆಗೆ ರೈತ ಗುಂಪುಗಳು ಟ್ರ್ಯಾಕ್ಟರ್ ಮೆರವಣಿಗೆಯನ್ನು ಸ್ಥಗಿತಗೊಳಿಸಿದರು. ಗಲಭೆ, ಸಾರ್ವಜನಿಕ ಆಸ್ತಿಗಳಿಗೆ ಹಾನಿ, ಸಾರ್ವಜನಿಕ ಸೇವಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ, ಕಾನೂನು ಬಾಹಿರ ಹಿಂಸಾಕೃತ್ಯಗಳು ಸೇರಿದಂತೆ ವಿವಿಧ ಪ್ರಕರಣಗಳನ್ನು ಪ್ರತಿಭಟನಾಕಾರರ ವಿರುದ್ಧ ದಾಖಲಿಸಲಾಗಿದೆ.












Click it and Unblock the Notifications