ದೆಹಲಿ-ಗಾಜಿಯಾಬಾದ್ ಗಡಿಗೆ ತಡೆಯೊಡ್ಡಿದ ರೈತರು
ನವದೆಹಲಿ, ಡಿಸೆಂಬರ್ 22: ರಾಜಧಾನಿ ದೆಹಲಿಯ ಗಡಿ ಭಾಗಗಳಲ್ಲಿ ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದ್ದು, ದೆಹಲಿ-ಗಾಜಿಯಾಬಾದ್ ಗಡಿಯನ್ನು ರೈತರು ತಡೆದಿದ್ದಾರೆ. ಇದರಿಂದಾಗಿ ದೆಹಲಿಯಿಂದ ಗಾಜಿಪುರ ಮತ್ತು ಗಾಜಿಯಾಬಾದ್ಗೆ ತೆರಳುವ ದೆಹಲಿ-ಮೀರಟ್ ಎಕ್ಸ್ಪ್ರೆಸ್ ವೇ ಹೆದ್ದಾರಿಯ ಎರಡೂ ಭಾಗಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.
'ನಾವು ಯಾರಿಗೂ ಅಡಚಣೆ ಉಂಟುಮಾಡುತ್ತಿಲ್ಲ. ನಿನ್ನೆ ನಾವು ವಾಹನ ಸವಾರರ ಜತೆಗೆ ಮಾತನಾಡಿದ್ದೆವು. ಯಾವುದೇ ರಸ್ತೆಗೆ ತಡೆಯೊಡ್ಡಿರಲಿಲ್ಲ. ನಿಮ್ಮ ಮನೆಗಳಲ್ಲಿಯೂ ರೈತರ ಸಂಕಷ್ಟದ ಬಗ್ಗೆ ಮಾತನಾಡಿ ಎಂದು ಅವರಿಗೆ ಮನವಿ ಮಾಡಿದ್ದೆವು' ಎಂದು ಭಾರತೀಯ ಕಿಸಾನ್ ಒಕ್ಕೂಟದ ವಕ್ತಾರ ರಾಕೇಶ್ ಟಿಕಾಯತ್ ಹೇಳಿದ್ದಾರೆ.
'ಸರ್ಕಾರ ನಮ್ಮ ಬಳಿ ಬಂದು ಮಾತನಾಡಬೇಕು. ಆದರೆ ಇದುವರೆಗೂ ಕೃಷಿ ಸಚಿವರಿಂದ ಯಾವುದೇ ಸಭೆಯ ಆಹ್ವಾನ ಬಂದಿಲ್ಲ. ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವವರೆಗೂ ತಾವೂ ಹಿಂದಕ್ಕೆ ಹೋಗುವುದಿಲ್ಲ ಎಂದು ರೈತರು ನಿರ್ಧರಿಸಿದ್ದಾರೆ. ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಒಂದು ತಿಂಗಳಿಗೂ ಹೆಚ್ಚು ಸಮಯ ಬೇಕಾಗುತ್ತದೆ. ಸರ್ಕಾರ ನಮ್ಮ ಬಳಿ ಬರುತ್ತದೆ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಮ್ಮ ಬೆಳೆಗೆ ಕನಿಷ್ಠ ಬೆಂಬಲ ಬೆಲೆಯ ಪ್ರಯೋಜನ ಸಿಗುವಂತೆ ಮಾಡಲು ಬಿಹಾರದ ರೈತರು ಕೂಡ ತಮ್ಮನ್ನು ಸೇರಿಕೊಳ್ಳುವಂತೆ ಸಂಯುಕ್ತ ಕಿಸಾನ್ ಮೋರ್ಚಾ ಮನವಿ ಮಾಡಿದೆ. ಬಿಹಾರದ ರೈತರ ಬೆಳೆಗಳಿಗೆ ಎಂಎಸ್ಪಿ ಸಿಗುತ್ತಿಲ್ಲ. ಇದರಿಂದ ಅವರು ತೀವ್ರ ಸಂಕಷ್ಟಕ್ಕೆ ಸಿಲುಕುವ ಸ್ಥಿತಿ ನಿರ್ಮಾಣವಾಗಿದೆ. ಅವರೂ ಪ್ರತಿಭಟನೆಯನ್ನು ಸೇರಿಕೊಂಡರೆ ಅದಕ್ಕೆ ಬಲ ಸಿಗುತ್ತದೆ ಮತ್ತು ಅವರಿಗೆ ನ್ಯಾಯವೂ ಲಭಿಸಲಿದೆ ಎಂದು ಅದು ಹೇಳಿದೆ.
ಪ್ರತಿಭಟನೆ ನಡೆಯುತ್ತಿರುವ ಸಿಂಘು ಗಡಿಯಲ್ಲಿ 65 ವರ್ಷದ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಮಧ್ಯರಾತ್ರಿ ವೇಳೆ ಅವರು ವಿಷ ಸೇವಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ. ಸರ್ಕಾರ ರೈತರ ಅಹವಾಲನ್ನು ಕೇಳಿಸಿಕೊಳ್ಳುತ್ತಿಲ್ಲ. ಇದರಿಂದ ನೊಂದು ಮತ್ತು ತನ್ನ ಸಾವಿನಿಂದ ರೈತರ ಸಮಸ್ಯೆ ಪರಿಹರಿಸಲು ಸರ್ಕಾರ ಮುಂದಾಗಲಿ ಎಂದು ಆತ್ಮಹತ್ಯೆ ಪ್ರಯತ್ನ ಮಾಡಿರುವುದಾಗಿ ರೈತ ಹೇಳಿದ್ದಾನೆ ಎಂದು ವರದಿಯಾಗಿದೆ.












Click it and Unblock the Notifications