ವಿವಾದಿತ ಕೃಷಿ ಕಾಯ್ದೆ: ಅದೇ ರಾಗ, ಅದೇ ಹಾಡಿದ ಕೇಂದ್ರ ಸಚಿವ ತೋಮರ್
ನವದೆಹಲಿ, ಜುಲೈ 08: "ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳ ರದ್ದು ವಿಚಾರವೊಂದನ್ನು ಹೊರತುಪಡಿಸಿ ಬೇರೆ ಯಾವುದೇ ಪರಿಹಾರವನ್ನು ಇಟ್ಟುಕೊಂಡು ರೈತರು ನಮ್ಮೆದುರಿಗೆ ಬಂದರೂ ನಾವು ಚರ್ಚೆಗೆ ಸಿದ್ಧರಿದ್ದೇವೆ," ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ.
ಕೇಂದ್ರ ಸಚಿವ ಸಂಪುಟ ಪುನಾರಚನೆ ಬಳಿಕ ನವದೆದಹಲಿಯಲ್ಲಿ ನಡೆದ ಮೊದಲ ಸಭೆಯಲ್ಲಿನ ಚರ್ಚೆ ನಂತರ ಮಾಧ್ಯಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಕೃಷಿ ಕಾಯ್ದೆಗಳನ್ನು ಯಾವುದೇ ಕಾರಣಕ್ಕೂ ರದ್ದುಗೊಳಿಸಲು ಸಾಧ್ಯವಿಲ್ಲ ಎಂಬ ಧಾಟಿಯಲ್ಲಿ ಪ್ರತಿಕ್ರಿಯೆ ನೀಡಿದರು.
ರೈತರು ಹಾಗೂ ವಿವಾದಿತ ಕೃಷಿ ಕಾಯ್ದೆಗಳ ಕುರಿತು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿಕೆಗೆ ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ಟಿಕಾಯತ್ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. "ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಿಲ್ಲ ಎನ್ನುತ್ತಿರುವ ಅವರು, ನಮಗೆ ಪ್ರತಿಭಟನೆ ಅಂತ್ಯಗೊಳಿಸುವಂತೆ ಕೇಳುತ್ತಿದ್ದಾರೆ. ಸರ್ಕಾರದ ಆದೇಶವನ್ನು ಪಾಲನೆ ಮಾಡುವುದಕ್ಕಾಗಿ ರೈತರು ಎಂಟು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿಲ್ಲ. ಒಂದು ವೇಳೆ ಅವರು ಚರ್ಚೆಗೆ ಬರುವುದಾದರೆ ಖಂಡಿತವಾಗಿಯೂ ಚರ್ಚಿಸುವುದಕ್ಕೆ ನಾವೂ ಸಿದ್ಧರಿದ್ದೇವೆ, ಆದರೆ ಯಾವುದೇ ಷರತ್ತುಗಳನ್ನು ವಿಧಿಸಕೂಡದು," ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ.

"ವಹಿವಾಟು ಇಲ್ಲದ ಎಪಿಎಂಸಿಗೆ ಎಂಥಾ ಸೂತ್ರ":
"ಮಧ್ಯಪ್ರದೇಶದ 40ಕ್ಕೂ ಹೆಚ್ಚು ಎಪಿಎಂಸಿಗಳಲ್ಲಿ ವ್ಯಾಪಾರ ವಹಿವಾಟು ಶೇ.0ಯಷ್ಟಿದ್ದು, ಅವುಗಳು ಕುಸಿತದ ಅಂಚಿನಲ್ಲಿವೆ. ಉತ್ತರ ಪ್ರದೇಶ ಹಾಗೂ ಬಿಹಾರಗಳಲ್ಲಿ ಎಪಿಎಂಸಿ ಮಾರುಕಟ್ಟೆಗಳನ್ನೇ ಮುಚ್ಚಲಾಗಿದೆ. ಹೀಗೆ ಮಾರಾಟವಿಲ್ಲದೇ, ವಹಿವಾಟು ಇಲ್ಲದೇ ಇರುವ ಎಪಿಎಂಸಿ ಮಾರುಕಟ್ಟೆಗಳಿಗೆ ಯಾವ ರೀತಿ ಸೂತ್ರವನ್ನು ಅಳವಡಿಸುತ್ತೀರಿ," ಎಂದು ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ಟಿಕಾಯತ್ ಪ್ರಶ್ನಿಸಿದ್ದಾರೆ.
ರೈತರ ಮೂಲಸೌಕರ್ಯ ನಿಧಿಗೆ 1 ಲಕ್ಷ ಕೋಟಿ:
"ಭಾರತದ ಕೃಷ್ಟಿ ಉತ್ಪನ್ನ ಮಾರುಕಟ್ಟೆಗಳ ಸಂಪನ್ಮೂಲ ಅಭಿವೃದ್ಧಿಗೆ ಅತ್ಮನಿರ್ಭರ್ ಭಾರತ್ ಅಡಿಯಲ್ಲಿ 1 ಲಕ್ಷ ಕೋಟಿ ರೂಪಾಯಿ ಹಣವನ್ನು ರೈತರ ಮೂಲಸೌಕರ್ಯ ನಿಧಿಗೆ ನೀಡಲಾಗುವುದು ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದರು. ದೇಶದ ಎಪಿಎಂಸಿಗಳನ್ನು ಅಭಿವೃದ್ಧಿಪಡಿಸಲು ಈ ಹಣವನ್ನು ಬಳಸಿಕೊಳ್ಳಲಾಗುವುದು. ಎಪಿಎಂಸಿಗಳನ್ನು ತೆಗೆದು ಹಾಕುವ ಬಗ್ಗೆ ಯಾವುದೇ ಚಿಂತನೆಯಿಲ್ಲ. ಬದಲಿಗೆ ಕೃಷಿ ಕಾಯ್ದೆಗಳ ಜಾರಿ ನಂತರದಲ್ಲಿ ಕೇಂದ್ರದ ಮೂಲಸೌಕರ್ಯ ನಿಧಿಯಿಂದ ಕೋಟಿ ಕೋಟಿ ಹಣವು ಎಪಿಎಂಸಿಗಳಿಗೆ ಹರಿದು ಬರಲಿದೆ," ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.












Click it and Unblock the Notifications