ಚಿಕ್ಕಮಗಳೂರು: ಶಾಲಾ ಮಕ್ಕಳಿಗೆ ಕೃಷಿ ಬಗ್ಗೆ ತಿಳುವಳಿಕೆ ಮೂಡಿಸಿದ ಇಂಜಿನಿಯರ್
ಚಿಕ್ಕಮಗಳೂರು, ಡಿಸೆಂಬರ್, 27: ಯುವಕರು ಗ್ರಾಮಗಳನ್ನು ತೊರೆಯದೆ ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ತಮ್ಮ ಜಮೀನಿನಲ್ಲಿಯೇ ವಿವಿಧ ರೀತಿಯ ತೆಂಗು, ಬಾಳೆ, ಅಡಿಕೆ, ಮಾವು, ಹಲಸು ಹಾಗೂ ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ನೆಮ್ಮದಿಯ ಜೀವನ ನಡೆಸಬಹುದೆಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಗವಿರಂಗಪ್ಪ ಚಿಕ್ಕಮಗಳೂರಿನಲ್ಲಿ ತಿಳಿಸಿದರು.
ಸೋಮವಾರ ಜಿಲ್ಲಾ ಪಂಚಾಯತಿ ವತಿಯಿಂದ ಹಮ್ಮಿಕೊಳ್ಳಲಾಗಿರುವ ಅನುಭವಾತ್ಮಕ ಕಲಿಕೆ ಅಂಗವಾಗಿ ತಾಲೂಕಿನ ಬಾಣೂರಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಕೃಷಿ ಅದ್ಯಯನ ಶಿಬಿರವನ್ನು ನಡೆಸಲಾಯಿತು. ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತ ಗವಿರಂಗಪ್ಪ ಅವರ ಜಮೀನಿನಲ್ಲಿ ನಡೆದ ಶಿಬಿರದಲ್ಲಿ ಸ್ಥಳೀಯ ಕೃಷಿಕರು ಮತ್ತು ಶಿಕ್ಷಕರು ಕೃಷಿ ಪದ್ಧತಿ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು. ಈ ವೇಳೆ ಜಮೀನಿನ ಮಾಲೀಕರೂ ಆದ ಇಂಜಿನೀಯರ್ ಗವಿರಂಗಪ್ಪ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಇಂದು ನಾವು ಉತ್ತಮ ಸ್ಥಾನದಲ್ಲಿದ್ದೇವೆ. ನೀವು ಸಹ ಉನ್ನತ ವ್ಯಾಸಂಗ ಮಾಡಿ ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿ ಬದುಕಬಹುದು ಎಂದರು.
ಕೃಷಿ ಉತ್ಪನ್ನ:MSP ಬೆಲೆ ನಿಗದಿ ಅದು ಉತ್ತಮ ಬೆಲೆ ಅಲ್ಲ: ರಮೇಶ್ ಚಂದ್
ಸತತ 8 ವರ್ಷಗಳ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ
ತಮ್ಮ ತಂದೆಯವರಿಗೆ ಸೇರಿದ ಈ ಜಮೀನು ಬರಡು ಭೂಮಿಯಾಗಿತ್ತು. ಸತತ 8 ವರ್ಷಗಳ ಪರಿಶ್ರಮದಿಂದ 400 ತೆಂಗು, ನೀರಿಗಾಗಿ ನಾಲ್ಕು ಬೋರ್ವೆಲ್ ತೆಗೆಸಿ ಕೃಷಿ ಹೊಂಡ ಮಾಡಿದ್ದೇನೆ. ಇದರಲ್ಲಿ 20 ಸಾವಿರ ಮೀನು ಮರಿ ಸಾಕಾಣಿಕೆ, 4000 ಅಡಿಕೆ, 150 ಹಲಸು, ಮಾವು, ಮೆಣಸು, ಬಾಳೆ ಎಲ್ಲವನ್ನೂ ಕೃಷಿ ತಜ್ಞರ ಸಲಹೆ ಪಡೆದು ಮಕ್ಕಳ ಶ್ರಮದಿಂದಾಗಿ ಫಸಲು ಬರುವ ಹಂತಕ್ಕೆ ತಂದಿದ್ದೇವೆ ಎಂದರು. ಜಮೀನು ಉಳ್ಳವರು ಕ್ರಮಬದ್ಧ ಕೃಷಿ ಮಾಡಿದರೆ ನಗರ, ಪಟ್ಟಣಕ್ಕೆ ಗುಳೇ ಹೋಗುವುದು ತಪ್ಪುತ್ತದೆ. ಆದರೆ ವಾರದಕ್ಕೆ ಒಂದು ಬಾರಿ ಜಮೀನಿಗೆ ಬಂದು ಉಳಿದ ದಿನ ಮನೆಯಲ್ಲಿದ್ದರೆ ಸಮಗ್ರ ಕೃಷಿ ಆಗುವುದಿಲ್ಲ. ಕೃಷಿ ಲಾಭದಾಯಕವಾಗಿದ್ದು, ಮಾಡುವ ಎಲ್ಲಾ ಕೆಸದಲ್ಲೂ ಲಾಭ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆದರೆ ಆಸಕ್ತಿಯಿಂದ ಕೃಷಿ ಮಾಡಿದರೆ ಲಾಭ ಖಂಡಿತ ಸಿಗುತ್ತದೆ ಎಂದರು.
ಛಲ ಬಿಡದೆ ಬರಡು ಭೂಮಿಯಲ್ಲಿ ಕೃಷಿ
ಅಂದಿನ ಕಾಲದಲ್ಲಿ ಪರಿಶಿಷ್ಟ ಸಮಾಜದಲ್ಲಿ ಇಂಜಿನಿಯರಿಂಗ್ ಪದವಿ ಗಳಿಸುವುದೇ ಕಷ್ಟವಾಗಿತ್ತು. ಸಮಯಕ್ಕೆ ಸರಿಯಾಗಿ ಪದವಿ ಮುಗಿಸಿದ್ದು ಒಂದು ಸಾಧನೆಯಾದರೆ, ಬರಡು ಭೂಮಿಯಲ್ಲಿ ಕೃಷಿ ಮಾಡಿ ಸಾಧನೆ ಮಾಡಬೇಕು ಎನ್ನುವ ಛಲ ಒಂದು ಕಡೆ ಆಗುತ್ತು. ಇದೂಗ ಅದನ್ನೂ ಸಾಧನೆ ಮಾಡಿದ ತೃಪ್ತಿ ಇದೆ ಎಂದು ತಿಳಿಸಿದರು.
ಫಸಲು ತೆಗೆಯುವ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ
ಇನ್ನು ಮುಖ್ಯ ಶಿಕ್ಷಕ ಕೆ.ಎಂ. ಮಂಜಪ್ಪ ಈ ಬಗ್ಗೆ ಮಾತನಾಡಿ, ಬಹು ಬೆಳೆಗಳನ್ನು ಮಾಡುವ ಕುರಿತು, ಮೀನುಗಾರಿಕೆ ಹಾಗೂ ಹಸಿರು ಬೆಳೆಸುವುದರಿಂದ ಬಂಜರು ಭೂಮಿಯನ್ನು ಹಸನಾಗಿಸುವುದು ಹೇಗೆ ಎನ್ನುವ ಬಗ್ಗೆ ತಿಳುವಳಿಕೆ ಮೂಡಿಸಲಾಯಿತು. ಪರಿಸರ, ಕೃಷಿ ಕ್ಷೇತ್ರದ ಬಗ್ಗೆ ಆಸಕ್ತಿ ಮೂಡಿಸುವುದು ಉದ್ದೇಶ ಎಂದರು.
ಕೃಷಿ ಬಗ್ಗೆಯೂ ಜ್ಞಾನ ಇರಬೇಕು
ಸಹಶಿಕ್ಷಕ ಬಿ.ಎಂ.ರಾಜು ಮಾತನಾಡಿ, ಅನುಭವಾತ್ಮ ಕಲಿಕೆ ಎನ್ನುವುದು ಒಂದು ವಿಶಿಷ್ಠ ಪ್ರಯತ್ನವಾಗಿದೆ. ಮಕ್ಕಳು ಕೃಷಿ ಬಗ್ಗೆ ಆಸಕ್ತಿಯಿಂದ ಕೇಳಿ ತಿಳಿದುಕೊಳ್ಳುತ್ತಿದ್ದಾರೆ. ಮಕ್ಕಳನ್ನು ಈಗಿನಿಂದಲೇ ಕೃಷಿಕಡೆ ಆಕರ್ಷಿಸಲು ಉತ್ತಮ ಯೋಜನೆ ಎಂದರು. ವಿದ್ಯಾರ್ಥಿನಿ ಬಿ.ಎ.ಜ್ಞಾನಾಕ್ಷಿ ಮಾತನಾಡಿ, ವೈದ್ಯರು, ಇಂಜಿನೀಯರ್ ಆಗಬೇಂದಷ್ಟೇ ಅಭಿಲಾಷೆ ಇಟ್ಟುಕೊಂಡರೆ ಸಾಲದು. ಕೃಷಿ ಬಗ್ಗೆಯೂ ಜ್ಞಾನ ಇರಬೇಕು. ಇದರಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕಿ ವಸಂತ್ಕುಮಾರಿ, ಉಷಾರಾಣಿ, ಬಿ.ಜಿ.ಮಂಜುನಾಥ್, ಬಿ.ರವಿ. ಬಿ.ಆರ್.ಪ್ರಕಾಶ್, ಜಯಸಿಂಗ್ ನಾಯಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.