ಚಾಮರಾಜನಗರದಿಂದಲೇ ಸ್ಪರ್ಧಿಸುವೆ: ವಾಟಾಳ್ ನಾಗರಾಜ್
ಚಾಮರಾಜನಗರ, ಏಪ್ರಿಲ್ 12: ಚಾಮರಾಜನಗರದಿಂದ ಐದು ಬಾರಿ ಶಾಸಕರಾಗಿ ಅಸೆಂಬ್ಲಿಯಲ್ಲಿ ಕನ್ನಡ ಪರ ದನಿಯಾಗಿದ್ದ ವಾಟಾಳ್ ನಾಗರಾಜ್ ಅವರು ಈಗ ಹೊಸ ರಾಜಕೀಯ ವೇದಿಕೆ ರಚಿಸಿಕೊಂಡು ಮತ್ತೊಮ್ಮೆ ಪ್ರವೇಶ ಬಯಸಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಮತ್ತೊಮ್ಮೆ ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ಭಾಗದಿಂದ ಸ್ಪರ್ಧಿಸುವಂತೆ ಆಗ್ರಹಿಸಿದ್ದಾರೆ. ಆದರೆ, ಚಾಮರಾಜನಗರ ಕ್ಷೇತ್ರದಿಂದಲೇ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ ಎಂದರು.

100 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕಣಕ್ಕೆ !
ಕನ್ನಡ ಸಂಘಟನೆಗಳು, ಪ್ರಾದೇಶಿಕ, ದಲಿತ ಹಾಗೂ ರೈತ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಕರ್ನಾಟಕ ಪ್ರಜಾ ಸಂಯುಕ್ತ ರಂಗ ಎಂಬ ಪಕ್ಷ ಸ್ಥಾಪಿಸಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ, ಸ್ವರಾಜ್ ಇಂಡಿಯಾ, ಸರ್ವೋದಯ ಕರ್ನಾಟಕ ಹೀಗೆ ರೈತ ಪರ ಪಕ್ಷಗಳಿವೆ. ಈಗ ವಾಟಾಳ್ ಪಕ್ಷ ಕೂಡಾ ದಲಿತರು, ರೈತರ ಪರ ನಿಲ್ಲಲು ಮುಂದಾಗಿದೆ.
100 ಕ್ಷೇತ್ರಗಳಲ್ಲಿ ಕನ್ನಡ ಪರ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಪ್ರಾದೇಶಿಕ ಅಸಮಾನತೆ, ಕನ್ನಡ ಅಸ್ಮಿತೆ ಕಾಯುವುದು ಕೂಡಾ ನಮ್ಮ ಮುಖ್ಯ ಉದ್ದೇಶ ಎಂದು ವಾಟಾಳ್ ಹೇಳಿದ್ದಾರೆ.











Click it and Unblock the Notifications