ಹವಾಮಾನ ಬದಲಾವಣೆ; ಟೊಮ್ಯಾಟೊ ಬೆಳೆ ರಕ್ಷಣೆ ಹೇಗೆ?
ಕೋಲಾರ, ನವೆಂಬರ್ 04: ಹವಾಮಾನ ವೈಪರೀತ್ಯ ಉಂಟಾಗುತ್ತಿರುವ ಹಿನ್ನಲೆಯಲ್ಲಿ ಟೊಮ್ಯಾಟೊ ಮತ್ತು ಆಲೂಗಡ್ಡೆ ಬೆಳೆಯಲ್ಲಿ ಅಂಗಮಾರಿ ಸೇರಿದಂತೆ ದುಂಡಾಣುವಿನಿಂದ ಬರುವ ಕಜ್ಜಿರೋಗವು ಕೋಲಾರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಂಡು ಬರುತ್ತಿದೆ.
ತರಕಾರಿ ಬೆಳೆಗಳನ್ನು ಬೆಳೆಯುವ ರೈತರು ಹವಾಮಾನ ವೈಪರೀತ್ಯ, ಮಳೆ ಬಗ್ಗೆಯೂ ಗಮನ ಹರಿಸಬೇಕು. ಕೃಷಿ ಇಲಾಖೆ ಬೆಳೆಗಳ ರಕ್ಷಣೆಗಾಗಿ ಹಲವಾರು ಸಲಹೆಗಳನ್ನು ರೈತರಿಗೆ ನೀಡಿದೆ. ರೈತರು ಈ ಕ್ರಮಗಳನ್ನು ಅನುಸರಿಸುವ ಮೂಲಕ ಬೆಳೆ ಕಾಪಾಡಿಕೊಳ್ಳಬಹುದು.
ಶಿಲೀಂಧ್ರ ರೋಗಗಳ ಹತೋಟಿಗಾಗಿ ಟ್ರೈಸೈಕ್ಲೋಜೋಲ್ ಗುಂಪಿಗೆ ಸೇರಿದ ಶಿಲೀಂಧ್ರ ನಾಶಕಗಳನ್ನು 2 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. 1 ಗ್ರಾಂ ಫಿಮೋಕ್ಷಡನ್ + ಸೈಮೋಕ್ಸನಿಲ್ ಅಥವಾ ಅಝಾಕ್ಸಿಸ್ಟ್ರಾಬಿನ್ 1 ಮಿ. ಲೀ. ಅಥವಾ ಲೀ ಅಥವಾ ಅಝಾಕ್ಸಿಸ್ಟ್ರಾಬಿನ್ + ಡೈಫೆನ್ಕೊನಜೋಲ್ 1 ಮಿ. ಲೀ ಅಥವಾ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಬಹುದು.

ಟೊಮ್ಯಾಟೊಗೆ ಕಜ್ಜಿ ರೋಗ : ಟೊಮ್ಯಾಟೊಗೆ ದುಂಡಾಣುವಿನಿಂದ ಕಜ್ಜಿರೋಗ ಬರುತ್ತಿದೆ. ಕಾಯಿಗಳ ಮೇಲೆ ಸಣ್ಣ ಚುಕ್ಕೆಗಳಾಗುವುದರಿಂದ, ಕಾಯಿಗಳ ಗುಣಮಟ್ಟ ಕಡಿಮೆಯಾಗಿ ಮಾರಾಟ ಮಾಡುವಾಗ ಧಾರಣೆ ಕಡಿಮೆಯಾಗುತ್ತಿದ್ದು, ರೈತರು ನಷ್ಟ ಅನುಭವಿಸುತ್ತಿದ್ದಾರೆ. ಈ ರೋಗ ನಿಯಂತ್ರಣಕ್ಕೂ ಸಲಹೆಗಳನ್ನು ನೀಡಲಾಗಿದೆ.
ಕಜ್ಜಿರೋಗದ ಹತೋಟಿಗಾಗಿ ಸ್ಟ್ರೆಪ್ಟೋಮೈಸಿನ್ ಸಲ್ಫೇಟ್ 0.5 ಗ್ರಾಂ ಜೊತೆಗೆ 3 ಗ್ರಾಂ ತಾಮ್ರದ ಆಕ್ಸಿ ಕ್ಲೋರೈಡ್ ಅಥವಾ ಬ್ರೋನೋಫಾಲ್ 0.5 ಗ್ರಾಂ ಜೊತೆಗೆ 3 ಗ್ರಾಂ ತಾಮ್ರದ ಆಕ್ಸಿ ಕ್ಲೋರೈಡ್ ಅಥವಾ 0.5 ಗ್ರಾಂ ಬ್ಯಾಕ್ಟ್ರಿನಾಶಕ ಸಿಂಪರಣೆ ಮಾಡಬೇಕು.
ಟ್ಯೂಟಾ ಅಥವಾ ಊಜಿ ನೊಣ ಹತೋಟಿಗಾಗಿ ನಾಟಿ ಮಾಡಿದ 15 ದಿನಗಳ ನಂತರ ಟಮ್ಯಾಟೊ ಬೆಳೆಗೆ ಪ್ರತಿ ಎಕರೆಗೆ 20ರಂತೆ ಟ್ಯೂಟಾ ಮೋಹಕ ಬಲೆಗಳನ್ನು ಗರಿಷ್ಠ 3 ಅಡಿ ಎತ್ತರದಲ್ಲಿ ಅಳವಡಿಸಬೇಕು. ಪ್ರತಿ 15 ದಿನಗಳಿಗೊಮ್ಮೆ ಮೋಹಕ ಬಲೆಗಳಲ್ಲಿರುವ ಲ್ಯೂರ್ ಅನ್ನು ಬದಲಾಯಿಸಬೇಕು.
ರೈತರು ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications