ಮಡಿಕೇರಿಯಲ್ಲಿ ಭತ್ತದ ಬೆಳೆ ಕುಂಠಿತವಾಗಿದ್ದು ಯಾಕೆ?

ಮಡಿಕೇರಿ, ಜೂನ್ 19: ಕೊಡಗಿನಲ್ಲಿ ಮುಂಗಾರು ಮಂದಗತಿಯಲ್ಲಿ ಸಾಗುತ್ತಿದ್ದು, ಭಾರೀ ಮಳೆ ಸುರಿಯದಿದ್ದರೂ ಆಶಾದಾಯಕ ಮಳೆ ಸುರಿಯುತ್ತಿರುವುದರಿಂದಾಗಿ ಭತ್ತದ ಕೃಷಿಯತ್ತ ರೈತರು ಮುಖ ಮಾಡಿದ್ದಾರೆ.

ಇಷ್ಟರಲ್ಲೇ ಮಳೆ ಸುರಿದು ಹಳ್ಳಕೊಳ್ಳಗಳು ತುಂಬಿ ಹರಿಯ ಬೇಕಾಗಿತ್ತಾದರೂ ವಾಡಿಕೆಯ ಮಳೆ ಬಾರದೆ, ಸುರಿಯುತ್ತಿರುವ ಮಳೆಯೂ ಬಿರುಸು ಪಡೆದುಕೊಳ್ಳದ ಕಾರಣದಿಂದಾಗಿ ಮಳೆ ನೀರನ್ನು ನಂಬಿ ಭತ್ತದ ಕೃಷಿ ಮಾಡುತ್ತಿರುವ ಬಹುತೇಕ ರೈತರು ಇನ್ನಷ್ಟೆ ಭತ್ತದ ಸಸಿ ಮಡಿ ತಯಾರಿಸಿ ನಾಟಿ ಕಾರ್ಯಕ್ಕೆ ಮುಂದಾಗಬೇಕಾಗಿದೆ.

ನೆನಪಿನ ಬುತ್ತಿ ಬಿಚ್ಚಿಡುವ ಕೊಡಗಿನ ಸುಂದರ ಮಳೆ
ನೀರಿನ ಅನುಕೂಲ ಇರುವ ರೈತರು ಈಗಾಗಲೇ ಬಿತ್ತನೆ ಬೀಜ ಹಾಕಿದ್ದು, ಮೂರ್ನಾಲ್ಕು ವಾರಗಳಲ್ಲಿ ನಾಟಿ ಕಾರ್ಯವನ್ನು ಆರಂಭಿಸಲಿದ್ದಾರೆ.

ಕಳೆದ ಬಾರಿ ಸಮರ್ಪಕವಾಗಿ ಮಳೆಯಾಗದ ಕಾರಣ ಬಹುತೇಕ ಕಡೆ ನೀರಿನ ಸಮಸ್ಯೆಯಿಂದ ನಾಟಿ ಕಾರ್ಯವನ್ನು ಮಾಡಿರಲಿಲ್ಲ. ಈ ಬಾರಿಯೂ ಬಹಳಷ್ಟು ರೈತರು ಭತ್ತದ ಕೃಷಿಯತ್ತ ಒಲವು ತೋರಿಲ್ಲ ಹೀಗಾಗಿ ಪಾಳು ಬಿದ್ದ ಗದ್ದೆಗಳು ಕಂಡು ಬರುತ್ತಿವೆ. ನೀರು, ಕೂಲಿ ಕಾರ್ಮಿಕರ ಸಮಸ್ಯೆ ಹಾಗೂ ನಷ್ಟಗಳೇ ಹೆಚ್ಚಾಗುವ ಕಾರಣಗಳಿಂದಾಗಿ ಭತ್ತ ಬೆಳೆಯಲು ಹಿಂದೇಟು ಹಾಕುತ್ತಿರುವುದು ಕೆಲವೆಡೆ ಕಾಣುತ್ತಿದೆ. ಮೂಲಗಳ ಪ್ರಕಾರ ಕಳೆದೊಂದುವರೆ ದಶಕಗಳಿಂದೀಚೆಗೆ ಕೊಡಗಿನಲ್ಲಿ ಸುಮಾರು 6 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೃಷಿ ಸ್ಥಗಿತಗೊಂಡಿದೆ ಎನ್ನಲಾಗುತ್ತಿದೆ.

ಜಿಲ್ಲೆಯಲ್ಲಿ ಎಷ್ಟಿದೆ ಭತ್ತದ ಬೆಳೆ?

ಜಿಲ್ಲೆಯಲ್ಲಿ ಎಷ್ಟಿದೆ ಭತ್ತದ ಬೆಳೆ?

ಕೃಷಿ ಸಹಾಯಕ ತಾಂತ್ರಿಕ ಅಧಿಕಾರಿ ಬಿ.ಎಸ್. ರಮೇಶ್ ಅವರ ಪ್ರಕಾರ ಪ್ರಸಕ್ತ ಸಾಲಿನಲ್ಲಿ 30,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಇಟ್ಟುಕೊಳ್ಳಲಾಗಿದೆಯಾದರೂ ಜಿಲ್ಲೆಯಲ್ಲಿ 28,100 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವುದು ಖಚಿತವಾಗುತ್ತಿದೆ. ಇನ್ನು ಇಲ್ಲಿ ತಾಲೂಕುವಾರು ನೋಡಿದರೆ ಹೆಚ್ಚಿನವರು ಮಳೆ ನೀರನ್ನೇ ಆಶ್ರಯಿಸಿ ಬೆಳೆಬೆಳೆಯುವುದು ಕಂಡು ಬರುತ್ತಿದೆ. ಹೀಗಾಗಿ ಮಡಿಕೇರಿಯಲ್ಲಿ ಮಳೆ ಅವಲಂಬಿತ 6500, ವೀರಾಜಪೇಟೆಯಲ್ಲಿ 14,000, ಸೋಮವಾರಪೇಟೆಯಲ್ಲಿ 7600 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುತ್ತಿರುವುದಾಗಿ ತಿಳಿದು ಬಂದಿದೆ.

ಕುಂಠಿತವಾಗಿದ್ದು ಏಕೆ?

ಕುಂಠಿತವಾಗಿದ್ದು ಏಕೆ?

ವೀರಾಜಪೇಟೆ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತದ ಕೃಷಿ ಮಾಡುತ್ತಿದ್ದರಾದರೂ ಇತ್ತೀಚೆಗಿನ ಬೆಳವಣಿಗೆಯನ್ನು ಗಮನಿಸಿದ್ದೇ ಆದರೆ ಬಹುತೇಕ ಗದ್ದೆಗಳು ಪಾಳುಬಿದ್ದಿವೆ. ಅಷ್ಟೇ ಅಲ್ಲದೆ, ಇನ್ನು ಕೆಲವು ನಿವೇಶನಗಳಾಗಿವೆ. ಮತ್ತೆ ಕೆಲವರು ತೋಟವನ್ನಾಗಿ ಮಾರ್ಪಡಿಸಿದ್ದಾರೆ. ಆರ್ಥಿಕ ದೃಷ್ಟಿಕೋನದಿಂದ ನೋಡುವುದಾದರೆ ಕೊಡಗಿನಲ್ಲಿ ಭತ್ತದ ಕೃಷಿಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಆದ್ದರಿಂದ ಇತ್ತೀಚೆಗಿನ ದಿನಗಳಲ್ಲಿ ಭತ್ತದ ಕೃಷಿಯತ್ತ ಹೆಚ್ಚಿನ ಒಲವು ತೋರಿದಂತೆ ಕಂಡು ಬರುತ್ತಿಲ್ಲ. ತಮ್ಮ ಸಾಮಥ್ರ್ಯಕ್ಕೆ ತಕ್ಕಂತೆ ಕೃಷಿ ಮಾಡುತ್ತಿದ್ದಾರೆ ಅಷ್ಟೆ.

ಮಳೆ ಬೀಳುವಲ್ಲಿ ಮಾತ್ರ ಭತ್ತದ ಬೆಳೆ

ಮಳೆ ಬೀಳುವಲ್ಲಿ ಮಾತ್ರ ಭತ್ತದ ಬೆಳೆ

ಕೊಡಗಿಗೊಂದು ಸುತ್ತು ಹೊಡೆದರೆ ಮಳೆ ಹೆಚ್ಚು ಬೀಳುವ ಮಡಿಕೇರಿ ಮತ್ತು ವೀರಾಜಪೇಟೆಯಲ್ಲಿ ಮಾತ್ರ ಹೆಚ್ಚು ಭತ್ತ ಬೆಳೆಯಲಾಗುತ್ತಿದೆಯಾದರೂ ಮಳೆ ಕಡಿಮೆ ಬೀಳುವ ಸೋಮವಾರಪೇಟೆ ತಾಲೂಕಿನಲ್ಲಿ ಭತ್ತ ಮಾತ್ರವಲ್ಲದೆ ಮುಸುಕಿನ ಜೋಳ, ತಂಬಾಕು ಮೊದಲಾದ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇಲ್ಲಿನ ಮಳೆ ಅಧಿಕವಾಗಿ ಸುರಿಯುವ ಪ್ರದೇಶಗಳಾದ ಮಾದಾಪುರ, ಶಾಂತಳ್ಳಿ, ಬೆಟ್ಟದಳ್ಳಿ, ತಲ್ತರೆಶೆಟ್ಟಳ್ಳಿ, ಕೂತಿ, ಕುಡಿಗಾಣ, ಹೆಗ್ಗಡಮನೆ, ಪುಷ್ಪಗಿರಿ, ತೋಳೂರುಶೆಟ್ಟಳ್ಳಿ, ಹರಪಳ್ಳಿ, ಬೀದಳ್ಳಿ, ಬೆಂಕ್ಯಳ್ಳಿ, ಯಡೂರು, ಹಾನಗಲ್ಲು, ಬೇಳೂರು, ಗೌಡಳ್ಳಿ, ನಂದಿಗುಂದ, ಶನಿವಾರಸಂತೆ, ಕೊಡ್ಲಿಪೇಟೆ ಮೊದಲಾದ ಕಡೆ ಭತ್ತದ ಕೃಷಿಗೆ ಒತ್ತು ನೀಡುತ್ತಿದ್ದು, ನಾಟಿ ಕಾರ್ಯಕ್ಕಾಗಿ ಸಸಿ ಮಡಿಗಳನ್ನು ತಯಾರಿಸುವ ಕಾರ್ಯ ಮುಂದುವರೆದಿದೆ.

ಕ್ಷೀಣಿಸುತ್ತಿದೆ ಭತ್ತದ ಬೆಳೆ

ಕ್ಷೀಣಿಸುತ್ತಿದೆ ಭತ್ತದ ಬೆಳೆ

ಮೊದಲಿಗೆ ಹೋಲಿಸಿದರೆ ಭತ್ತದ ಕೃಷಿ ಮಾಡುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗಿರುವುದು ಕಂಡು ಬರುತ್ತಿರುವುದು. ಒಂದು ಕಾಲದಲ್ಲಿ ಇಲ್ಲಿನ ಜನರಿಗೆ ಭತ್ತದ ಕೃಷಿಯೇ ಪ್ರಧಾನವಾಗಿತ್ತು. ಆದರೆ ಇತರೆ ವಾಣಿಜ್ಯ ಬೆಳೆಗಳ ಭರಾಟೆಯಲ್ಲಿ ಭತ್ತದ ಕೃಷಿ ಕ್ಷೀಣಿಸುತ್ತಿರುವುದು ಆತಂಕಕಾರಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+