ತುಮಕೂರು ರೈತರು ಹೆತ್ತಮಕ್ಕಳನ್ನೇ ನೊಗಕ್ಕೆ ಕಟ್ಟಿದರು

ಬರ ಎಂಬುದು ತುಮಕೂರು, ಕೋಲಾರ ಭಾಗದ ರೈತ ಜೀವನದ ಅವಿಭಾಜ್ಯ ಅಂಗ. ಬರದ ಕರಿನೆರಳಲ್ಲೇ ಇಲ್ಲಿನ ರೈತ ಕುಟುಂಬಗಳು ಬದುಕು ರೂಪಿಸಿಕೊಳ್ಳಬೇಕು. ಕೃಷಿ ಪಾಡು ತಮ್ಮ ಜನ್ಮಕ್ಕೇ ಸಾಕು, ಮುಂದಿನ ಕುಡಿಗಳು ಒಂದಷ್ಟು ಶಿಕ್ಷಣ ಕಲಿತು, ಪಟ್ಟಣ ಸೇರಿಕೊಳ್ಳಲಿ ಎಂಬುದು ಇಲ್ಲಿನ ಹಿರಿಯ ರೈತ ತಲೆಗಳ ಹಿರಿಯಾಸೆ.
ಅಕ್ಷರಶಃ ಮೂಕ ಎತ್ತುಗಳು: ಇಂದಿನ ರೈತ ಮಕ್ಕಳು ಒಮ್ಮೆ ಶಾಲೆಯತ್ತ ಮುಖ ಮಾಡಿದರೆ ಹೊಲ, ತೋಟಗಳತ್ತ ಹೆಜ್ಜೆ ಹಾಕುವುದು ದೂರದ ಮಾತು. ಹೀಗೆ ಮಕ್ಕಳನ್ನು ಶಾಲೆಗಳಿಗೆ ಅಟ್ಟಿ, ನಿಟ್ಟುಸಿರು ಬಿಡುವ ರೈತನ ಬದುಕು ಇನ್ನೂ ದುರ್ಭರವಾಗುತ್ತದೆ.
ಕೆಲಸಕ್ಕೆ ಕೃಷಿ ಕೂಲಿಗಳು ಸಿಗುವುದು ದೂರದ ಮಾತು. ಆದರೆ ಬದುಕಿನ ನೊಗ ಹೊರುವುದು ಅನಿವಾರ್ಯ. ಹೀಗಾಗಿ, ತುಮಕೂರು ಜಿಲ್ಲೆಯ ರೈತರು ಹೊಲ, ತೋಟಗಳಲ್ಲಿ ಸಾಲು ತೆಗೆಯಲು ಅನಿವಾರ್ಯವಾಗಿ ತಮ್ಮ ಮಕ್ಕಳಿಗೆ ಕೈಯಲ್ಲಿ ನೊಗ ಹಿಡಿಯಲು ಹೇಳುತ್ತಿದ್ದಾರೆ.
ಲೋಕೇಶ್ (9), ಹರೀಶ್ (7), ಜಗದೀಶ್ (21), ವೆಂಕಟೇಶ್ (13) ಶಾಲೆಯಿಂದ ಬಿಡುವು ಸಿಕ್ಕಿದಾಗ ತಮ್ಮ ಅಪ್ಪಂದಿರ ಸಂಕಷ್ಟಕ್ಕೆ ಹೆಗಲು ಕೊಡಲು ನೊಗ ಹೊರುತ್ತಿದ್ದಾರೆ. ಇವರು ತುಮಕೂರು ಮತ್ತು ಕೊರಟಗೆರೆ ತಾಲೂಕಿನ ಬಡ ರೈತರುಗಳಾದ ಪುಟ್ಟಸಿದ್ದಯ್ಯ ಹಾಗೂ ರಂಗಶಾಮಯ್ಯ ಅವರ ಪುತ್ರರು.
ಈ ಬಾರಿಯ ಬರವಂತೂ ಜಿಲ್ಲೆಯಲ್ಲಿ ಭೀಕರವಾಗಿದೆ. ಇದು ಇಲ್ಲಿನ ರೈತನನ್ನು ಮತ್ತಷ್ಟು ಕಂಗೆಡಿಸಿದೆ. ಮುಂಗಾರು ಸುಭಿಕ್ಷವಾಗಿರುತ್ತದೆಂದು ನಂಬಿ ಬಿತ್ತನೆ ಮಾಡಿದ ರೈತ, ಅಲ್ಪಸ್ವಲ್ಪ ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿದ್ದಾನೆ. ಅದಕ್ಕಾಗಿ ಹೆಚ್ಚು ಹಣ ಖರ್ಚು ಮಾಡುವ ಸ್ಥಿತಿಯಲ್ಲೂ ಇಲ್ಲ. ಹಾಗಾಗಿ ಅನಿವಾರ್ಯವಾಗಿ ಮಕ್ಕಳ ಮೇಲೆ ಭಾರ ಹಾಕುತ್ತಿದ್ದಾನೆ ಸ್ವಾವಲಂಬಿ ರೈತ.
ಬಾಲ ಕಾರ್ಮಿಕರ ಗೋಳು, ಮಾನವ ಹಕ್ಕು ಉಲ್ಲಂಘನೆ, ಶಿಕ್ಷಣಕ್ಕೆ ಕಲ್ಲು ಎಂದೆಲ್ಲ ಬೊಂಬಡ ಹೊಡೆಯುವವರು ಹೊಡೆಯುತ್ತಲೇ ಇದ್ದಾರೆ. ಆದರೆ ಈ ಮಕ್ಕಳು ಮಾತ್ರ ಅದ್ಯಾವುದೂ ತಮ್ಮ ಕಿವಿಗೆ ಕೇಳಿಸದು ಎಂಬಂತೆ ಅಕ್ಷರಶಃ ಮೂಕ ಎತ್ತಿನ ಹಾಗೆ ಹೊಲಗಳಲ್ಲಿ ದುಡಿಯುತ್ತಿದ್ದಾರೆ.












Click it and Unblock the Notifications