ಕಾವೇರಿಗಾಗಿ ಋಷಿಕುಮಾರಶ್ರೀಯಿಂದ ಉಪವಾಸ ಸತ್ಯಾಗ್ರಹ

ತಮಿಳುನಾಡಿಗೆ ಮತ್ತೊಮ್ಮೆ ನೀರು ಹರಿಸುವ ಮೂಲಕ ರೈತರಿಗೆ ಸರ್ಕಾರ ಅನ್ಯಾಯ ಮಾಡಿದೆ. ಇದನ್ನು ಖಂಡಿಸಿ ಅ.4 ರಿಂದ ಸತತ ಉಪವಾಸ ಆರಂಭಿಸುವುದಾಗಿ ಕಾಳಿಮಠದ ಋಷಿಕುಮಾರ ಸ್ವಾಮೀಜಿ ಹೇಳಿದ್ದಾರೆ.
ಚನ್ನರಾಯಪಟ್ಟಣ ತಾಲೂಕಿನಲ್ಲಿ ಕರ್ನಾಟಕ ಸಮರಸೇನೆ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ ಋಷಿಕುಮಾರ ಸ್ವಾಮೀಜಿ, ರಾಜ್ಯ ಬರದಲ್ಲಿ ಮುಳುಗಿದೆ. ಕಾವೇರಿ ಕೊಳ್ಳದ 45 ತಾಲೂಕಿನ ಜನತೆ ಸೇರಿ ಸುಮಾರು 1.5 ಕೋಟಿ ಜನ ಕಾವೇರಿ ನೀರನ್ನು ಅವಲಂಬಿಸಿದ್ದಾರೆ.
ನಮ್ಮ ತಾಯಿ ಕಾವೇರಿಯನ್ನು ಹರಿದು ಹಂಚಲು ಬಿಡುವುದಿಲ್ಲ. ಇಡೀ ರಾಜ್ಯವೇ ದಂಗೆ ಏಳುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಂದ ಹಣ ತಿಂದು ನಮ್ಮ ವಕೀಲರು ಮೋಸ ಮಾಡಿದ್ದಾರೆ. ಅಗತ್ಯಕ್ಕಿಂತ ಹೆಚ್ಚಿನ ನೀರು ತಮಿಳುನಾಡಿಗೆ ಹರಿದಿದೆ ಎಂದು ಸ್ವಾಮೀಜಿ ಆರೋಪ ಹೊರೆಸಿದರು.
ಕೇಂದ್ರದಲ್ಲಿ ನಮ್ಮವರು ನಾಲ್ವರು ಮಂತ್ರಿಗಳಾಗಿರುವುದು ಗೆಣಸು ತಿನ್ನಲಿಕಷ್ಟೇ. ಕಾವೇರಿ ಉಳಿಸಿಕೊಳ್ಳಲು ಆಗದಿದ್ದರೆ ಪ್ರತ್ಯೇಕ ದೇಶ ಮಾಡಿ ಬಿಡಿ. ನಮ್ಮ ಪಾಡಿಗೆ ನಾವು ಬದುಕುತ್ತೇವೆ ಎಂದು ಋಷಿಕುಮಾರ ಸ್ವಾಮೀಜಿ ಗುಡುಗಿದ್ದಾರೆ.
ಯಡಿಯೂರಪ್ಪ ಅವರು ರಾಜೀನಾಮೆ ನೀಡುತ್ತೀನಿ ಎಂದರೆ ಅವರ ಬೆನ್ನ ಹಿಂದೆ 80 ಜನ ಶಾಸಕರು ನಿಲ್ಲುತ್ತಾರೆ. ಡಿವಿ ಸದಾನಂದ ಗೌಡರಿಗೆ 30 ಜನ ಶಾಸಕರು ಬೆಂಬಲ ಸೂಚಿಸುತ್ತಾರೆ. ಆದರೆ, ರಾಜ್ಯದ ಜನತೆ ನೀರಿಗಾಗಿ ಸಾಯುತ್ತಿದ್ದರೂ ರಾಜೀನಾಮೆ ನೀಡುವ ಮಾತುಗಳನ್ನಾಡುವುದಿಲ್ಲ. ಹೋರಾಟ ಮಾಡುವ ನೈತಿಕತೆಯಿಲ್ಲ ಎಂದು ಋಷಿಕುಮಾರ ಸ್ವಾಮೀಜಿ ಹೇಳಿದರು.
ಪೇಜಾವರ ಶ್ರೀ ಬೆಂಬಲ : ಈ ರೀತಿ ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ಸಂವಿಧಾನ ಬಿಕ್ಕಟ್ಟು ಮಾಡಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಉಂಟುಮಾಡುವಂತೆ ಪೇಜಾವರ ಮಠದ ಶ್ರೀ ವಿಶ್ವೇಶ್ವರತೀರ್ಥಸ್ವಾಮೀಜಿ ಹೇಳಿದರು.
ರೈತ ಹಿತರಕ್ಷಣಾ ಸಮಿತಿ ವತಿಯಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾವೇರಿ ನದಿ ನೀರಿನ ವಿಚಾರವಾಗಿ ರಾಜ್ಯಕ್ಕೆ ಸಮರ್ಪಕವಾದ ನ್ಯಾಯ ದೊರೆತಿಲ್ಲ.
ರಾಜ್ಯ ಸರ್ಕಾರ ತಕ್ಷಣ ಸುಪ್ರೀಂ ಕೋರ್ಟಿಗೆ ತಡ ಮಾಡದೆ ಎರಡು ದಿನಗಳೊಳಗೆ ಮೇಲ್ಮನವಿ ಸಲ್ಲಿಸುವಂತೆ ಸಲಹೆ ನೀಡಿದರು. ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀಬಾಲಗಂಗಾಧರನಾಥಸ್ವಾಮೀಜಿ, ಸುತ್ತೂರು ಮಠದ ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ರಾಜ್ಯದ ಎಲ್ಲಾ ಮಠಾಧೀಶರು ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಕರೆ ನೀಡಿದರು.
ಪಕ್ಷಾತೀತವಾಗಿ ಎಲ್ಲ ಮುಖಂಡರು, ಮಠಾಧಿಪತಿಗಳು ದೆಹಲಿಗೆ ತೆರಳಿ ಪ್ರಧಾನಮಂತ್ರಿ ಡಾ. ಮನ್ಮೋಹನ್ಸಿಂಗ್ ಅವರನ್ನು ಭೇಟಿ ಮಾಡಿ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು. ರಾಜ್ಯದಲ್ಲೇ ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಇನ್ನು ತಮಿಳುನಾಡಿಗೆ ನೀರು ಹರಿಸುವುದಾಗಿ ಹೇಗೆ ಎಂಬುದರ ಬಗ್ಗೆ ಸಂಪೂರ್ಣ ಅಂಕಿ ಅಂಶಗಳ ಮೂಲಕ ತಿಳಿಸಿಕೊಡಬೇಕೆಂದು ಹೇಳಿದರು.












Click it and Unblock the Notifications