ಲಾಕ್ಡೌನ್ ಎಫೆಕ್ಟ್: ಅನ್ನದಾತರಿಗೆ ಪಾಸ್ ಇಲ್ಲ, ಜಮೀನಿಗೆ ಹೋಗೋಕು ಆಗ್ತಿಲ್ಲ
ಶಿವಮೊಗ್ಗ, ಮೇ 11: ಕೊರೊನಾ ಲಾಕ್ಡೌನ್ ಅವಧಿಯಲ್ಲಿ ಕೃಷಿ ಚಟುವಟಿಕೆಗೆ ಯಾವುದೇ ಅಡ್ಡಿಯನ್ನುಂಟು ಮಾಡಬಾರದು ಎಂದು ರಾಜ್ಯ ಸರ್ಕಾರ ಸೂಚಿಸಿದೆ. ಆದರೆ ಮೊದಲ ದಿನ ಲಾಕ್ಡೌನ್ ಅವಧಿಯಲ್ಲಿ ರೈತರು, ಕೃಷಿಕರು ತೀವ್ರ ಸಂಕಷ್ಟ ಅನುಭವಿಸಿದರು.
ಕೊರೊನಾ ಲಾಕ್ಡೌನ್ ನಿಂದಾಗಿ ರೈತರ ಬೆಳೆಗಳು ಮಾರುಕಟ್ಟೆ ತಲುಪುತ್ತಿಲ್ಲ, ಮಾರುಕಟ್ಟೆ ಖರೀದಿದಾರರು ಬರುತ್ತಿಲ್ಲ. ಬೆಳೆಗಳಿಗೆ ಉತ್ತಮ ಬೆಲೆಯೂ ಸಿಗದೆ ರೈತರು ಸಂಕಷ್ಟ ಅನುಭವಿಸುವಂತಾಗಿದೆ.
ಮುಂಗಾರು ಪೂರ್ವ ಮಳೆ ಶುರುವಾಗಿದ್ದು, ರೈತರು ಹೊಲಗಳನ್ನು ಹಸನು ಮಾಡಲಾರಂಭಿಸಿದ್ದಾರೆ. ಟ್ರ್ಯಾಕ್ಟರ್ ಗೆ ಡೀಸೆಲ್ ತರಲು ನಗರಕ್ಕೆ ಹೋಗದಂತಾಗಿದೆ. ಬೀಜ-ಗೊಬ್ಬರಕ್ಕೂ ಅವಕಾಶ ನೀಡುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಇದೇ ಪರಿಸ್ಥಿತಿ ಮುಂದುವರೆದರೆ ಮುಂಗಾರು ಬಿತ್ತನೆಗೆ ತೊದರೆಯಾಗಲಿದೆ ಎಂದು ರೈತರು ಅಲವತ್ತುಕೊಳ್ಳುತ್ತಿದ್ದಾರೆ.

ಕೃಷಿಕರಿಗಾದ ಸಮಸ್ಯೆ ಏನು?
ಮನೆ ಒಂದು ಕಡೆ, ಜಮೀನು ಒಂದು ಕಡೆ ಇರುವ ರೈತರು ತೀವ್ರ ಸಂಕಷ್ಟ ಅನುಭವಿಸಿದರು. ‘ಅಗತ್ಯ ಸೇವೆ ಹೊರತು ಮತ್ಯಾರಿಗೂ ರಸ್ತೆಗಿಳಿಯುವ ಅವಕಾಶವಿಲ್ಲ. ಅಗತ್ಯ ಸೇವೆಯಲ್ಲಿ ಇರುವವರಿಗೆ ಪಾಸ್ ಮತ್ತು ಐಡಿ ಕಾರ್ಡ್ ಇದೆ. ಆದರೆ ರೈತರಿಗೆ ಯಾವುದೇ ಐಡಿ ಕಾರ್ಡು, ಪಾಸ್ ಇಲ್ಲ. ಪಹಣಿ ಮತ್ತು ಇತರೆ ದಾಖಲೆಗಳನ್ನು ಹೊತ್ತು ಓಡಾಡುವಂತಾಗಿದೆ. ಅದರೆ ಇದಕ್ಕೆ ಪೊಲೀಸರು ಅವಕಾಶ ನೀಡುತ್ತಿಲ್ಲ' ಅನ್ನುತ್ತಾರೆ ರೈತ ಮಂಜುನಾಥ್.

ಸರ್ಕಾರದ ನಿಯಮದಲ್ಲಿ ಅವಕಾಶವಿಲ್ಲ
ಔಷಧ ಸಿಂಪಡಣೆ, ಗೊಬ್ಬರ ಹಾಕಬೇಕು, ನೀರು ಬಿಡಬೇಕಿದೆ, ಕಳೆ ತೆಗೆಯಬೇಕು ಎಂದು ಹಲವರು ಕೃಷಿಕರು ಪೊಲೀಸರ ಮುಂದೆ ಮನವಿ ಮಾಡಿದ ಉದಹಾರಣೆಗಳಿವೆ. ಆದರೆ ಸರ್ಕಾರದ ನಿಯಮದಲ್ಲಿ ಈ ಅವಕಾಶವಿಲ್ಲ ಎಂದು ಪೊಲೀಸರು ತಡೆದಿದ್ದಾರೆ. ಹತ್ತಾರು ಕಿ.ಮೀ ದೂರದಲ್ಲಿರುವ ಜಮೀನಿಗೆ ನಡೆದು ಹೋಗಿ ಕೆಲಸ ಮಾಡಲು ಅಸಾಧ್ಯವಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದೇನು?
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ ಅವರ ಗಮನ ಸೆಳೆದಾಗ, ‘ಯಾರನ್ನೂ ಓಡಾಡಲು ಬಿಡಬಾರದು ಎಂದು ಈಗ ಇರುವ ನಿಯಮದಲ್ಲಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಅವರೊಂದಿಗೆ ಸಭೆ ನಡೆಸುತ್ತೇವೆ. ಮಾರ್ಗಸೂಚಿಯಲ್ಲಿ ಬದಲಾವಣೆಯಾದರೆ ತಿಳಿಸುತ್ತೇವೆ' ಎಂದರು.

ಲಾಕ್ಡೌನ್ ಮಾರ್ಗಸೂಚಿ ಗೊಂದಲ
‘ಕೃಷಿ ಚಟುವಟಿಕೆಗೆ ತೊಂದರೆ ಆಗಿದೆ ಎಂಬುದು ಗಮನಕ್ಕೆ ಬಂದಿದೆ. ಈ ಬಗ್ಗೆ ಯಾವುದೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ಪುರಲೆ ಸೇರಿದಂತೆ ವಿವಿಧೆಡೆ ಹಾಲು ವಿತರಣೆ ಮಾಡುತ್ತಿದ್ದವರಿಗೆ ತೊಂದರೆಯಾಗಿದೆ ಎಂದು ಫೋನ್ ಮಾಡಿದ್ದರು. ಮಾತಾಡಿ ಸಮಸ್ಯೆ ಬಗೆಹರಿಸಿದ್ದೇನೆ' ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.
ಲಾಕ್ಡೌನ್ ಮಾರ್ಗಸೂಚಿ ಗೊಂದಲದಿಂದಾಗಿ ಶಿವಮೊಗ್ಗ ಜಿಲ್ಲೆಯ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಈ ಸಮಸ್ಯೆಗೆ ಪರಿಹಾರ ಒದಗಿಸದಿದ್ದರೆ, ಹಲವಾರು ರೈತರು ಬೆಳೆ ನಷ್ಟ ಅನುಭವಿಸುವುದು ನಿಶ್ಚಿತವಾಗಿದೆ.












Click it and Unblock the Notifications