ಮಾವು ಬೆಳೆಗೆ ರೋಗ: ಚಿಕ್ಕಬಳ್ಳಾಪುರ ರೈತರಿಗೆ ಫಸಲು ಕಳೆದುಕೊಳ್ಳುವ ಭೀತಿ; ತೆಗೆದುಕೊಳ್ಳಬೇಕಾದ ಕ್ರಮಗಳನ್ನು ತಿಳಿಯಿರಿ
ಮಾವಿನ ಬೆಳೆಗೆ ರೋಗ ಹರಡುತ್ತಿದ್ದು, ಇದರಿಂದ ಚಿಕ್ಕಬಳ್ಳಾಪುರ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಹಾಗೆಯೇ ರೋಗ ನಿಯಂತ್ರಣಕ್ಕೆ ತಜ್ಞರು ಕೆಲವೊಂದು ಮಾರ್ಗಗಳನ್ನು ತಿಳಿಸಿದ್ದಾರೆ. ಹಾಗಾದರೆ ರೋಗ ನಿಯಂತ್ರಣಕ್ಕೆ ತಜ್ಞರು ನೀಡಿದ ಕ್ರಮಗಳನ್ನು ಇಲ್ಲಿ ನೀಡಲಾಗಿದೆ.
ಚಿಕ್ಕಬಳ್ಳಾಪುರ, ಫೆಬ್ರವರಿ, 09: ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಮಾವಿನ ಗಿಡದಲ್ಲಿ ಉತ್ತಮ ಹೂವು ಬಿಟ್ಟಿದ್ದರಿಂದ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದರು. ಆದರೆ ಇದೀಗ ರೈತರ ಆಸೆ ಈಗ ಹುಸಿಯಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಹೂವು, ಚಿಗುರು ಏಕಕಾಲದಲ್ಲಿ ಬಿಡುತ್ತಿರುವುದರಿಂದ ಜಿಲ್ಲೆಯ ಮಾವಿನ ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ.
ಮಾವಿನ ಮರದ ತುಂಬಾ ಬಿಟ್ಟ ಹೂವನ್ನು ಉಳಿಸಿಕೊಳ್ಳುವ ಮೂಲಕ ಫಸಲು ಹೆಚ್ಚಿಸಿಕೊಳ್ಳಲು ಮಾವು ಬೆಳೆಗಾರರು ಹರಸಾಹಸ ಪಡುತಿದ್ದಾರೆ. ಮರದಲ್ಲಿ ಹೂವು ಬಿಟ್ಟಿರುವುದನ್ನು ಕಂಡರೆ, ಈ ಬಾರಿ ಉತ್ತಮ ಫಸಲು ಬರುತ್ತದೆ ಎನ್ನುವ ಭಾವನೆ ಮೂಡುತ್ತದೆ. ಆದರೆ, ಹೂವು, ಚಿಗುರು ಎರಡೂ ಏಕ ಕಾಲದಲ್ಲಿ ಬಂದಿದೆ. ವಾತಾವರಣ ಏರುಪೇರಿನಿಂದ ಈ ಬಾರಿ ಮಾವು ಬೆಳೆಗಾರರ ಅಂದಾಜು ಎಲ್ಲಾ ತಲೆಕೆಳಕಾಗುತ್ತಿದೆ. ನಿಗದಿತ ಸಮಯದಲ್ಲಿ ಬಿಡದ ಹೂವು ಈಗ ಮರವೆಲ್ಲಾ ಕಾಣಿಸಿಕೊಂಡಿದೆ. ಆದರೆ, ಬಿರು ಬಿಸಿಲಿನ ತಾಪಕ್ಕೆ ಹೂವು ಉದುರುವ ಚಿಂತೆಯೂ ಬೆಳೆಗಾರರನ್ನು ಕಾಡತೊಡಗಿದೆ.
ಮಾವು ಬೆಳೆಗಾರರು ಆತಂಕಕ್ಕೆ ಒಳಗಾದದಂತೆ ತಜ್ಞರು ಕೆಲವೊಂದು ಸೂಚನೆಗಳನ್ನು ನೀಡಿದ್ದಾರೆ. ಅಗತ್ಯವಾಗಿರುವ ಔಷಧಿಗಳನ್ನು ಸಿಂಪಡಣೆ ಮಾಡಿದರೆ ರೋಗಗಳನ್ನು ನಿರಂತ್ರಣ ಮಾಡಬಹುದು ಎನ್ನುವ ಮಾಹಿತಿಯನ್ನು ನೀಡಿದ್ದಾರೆ.

ಪ್ರದೇಶವಾರು ಮಾವು ಬೆಳೆಯ ವಿವರ
ಜಿಲ್ಲೆಯಲ್ಲಿ ಒಟ್ಟು ಸುಮಾರು 11,537.5 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಾಗುತ್ತಿದೆ. ಯಾವ ತಾಲೂಕಿನಲ್ಲಿ ಎಷ್ಟು ಮಾವು ಬೆಳೆ ಬೆಳೆಯಲಾಗಿದೆ ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ.
| ತಾಲೂಕು | ಹೆಕ್ಟೇರ್ |
| ಚಿಕ್ಕಬಳ್ಳಾಪುರ | 764 |
| ಚಿಂತಾಮಣಿ | 7,222 |
| ಗೌರಿಬಿದನೂರು | 907.78 |
| ಶಿಡ್ಲಘಟ್ಟ | 2290 |
| ಬಾಗೇಪಲ್ಲಿ | 230.23 |
| ಗುಡಿಬಂಡೆ | 123.5 |
ಒಟ್ಟಾರೆ ಪ್ರಸಕ್ತ ಸಾಲಿನಲ್ಲಿ 1,34,724.5 ಟನ್ನಷ್ಟು ಉತ್ಪಾದನೆಯ ಗುರಿ ಹೊಂದಲಾಗಿದೆ .

ತಡವಾಗಿ ಹೂ ಬಿಟ್ಟ ಮಾವು ಬೆಳೆ
ಅಕ್ಟೋಬರ್, ನವೆಂಬರ್ನಲ್ಲಿ ಚಿಗುರೊಡೆಯಬೇಕು. ಡಿಸೆಂಬರ್, ಜನವರಿ ಮೊದಲ ವಾರದೊಳಗೆ ಹೂವು ಬಿಡಬೇಕು. ಆದರೆ, ಈಗ ಒಂದು ತಿಂಗಳು ತಡವಾಗಿ ಹೂವು ಬಿಟ್ಟಿದೆ. ಫೆಬ್ರವರಿ ಮೊದಲ ವಾರದಲ್ಲಿ ಬರುವಂತಹ ಬೆಳೆ, ಮಾರ್ಚ್ನಲ್ಲಿ ಮೂಡಿದೆ. ಭೂಮಿಯಲ್ಲಿ ಹೆಚ್ಚು ತೇವಾಂಶ ಮತ್ತು ಬಿಸಿಲಿನ ತಾಪಮಾನದಿಂದ ಹೂವಿನ ಗೊಚ್ಚಲಿನಲ್ಲಿ ಬೂದಿ ರೋಗ ಕಾಣಿಸಿಕೊಳ್ಳುತ್ತಿದೆ. ಮತ್ತೊಂದು ಕಡೆ ಚಿಗುರು ಆಧಿಕವಾಗಿರುವುದರಿಂದ ಬಂಕೆ ರೋಗ ಹರಡುತ್ತಿದ್ದು, ಇದನ್ನು ನಿಯಂತ್ರಿಸಲು 2ನೇ ಸುತ್ತಿನ ಔಷಧಿ ಸಿಂಪಡಣೆ ಪ್ರಾರಂಭಿಸಿದ್ದಾರೆ.

ಫಸಲು ಕಳೆದುಕೊಳ್ಳುವ ಭೀತಿಯಲ್ಲಿ ರೈತರು
ಈ ಬಾರಿ ವಿಶೇಷವಾಗಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಭಾಗದಲ್ಲಿ ಭಾರಿ ಪ್ರಮಾಣದ ಮಳೆಯಾಗಿದೆ. ಅದರಲ್ಲೂ ಸೆಪ್ಟಂಬರ್ ಮತ್ತು ಡಿಸೆಂಬರ್ನಲ್ಲೂ ಮಳೆಯಾಗಿದ್ದರಿಂದ ಭೂಮಿಯಲ್ಲಿನ ತೇವಾಂಶ ಇನ್ನೂ ಹಾಗೇ ಇದೆ. ಹೀಗಾಗಿ ಕಳೆದ ಮಾವು ಹಂಗಾಮಿನಲ್ಲಿ ಕಂಡುಬಂದಂತಹ ವಿಳಂಬ ಹೂ ಕಚ್ಚುವಿಕೆ ಹಾಗೂ ವಿಸ್ತರಿಸಿದ ಫಸಲಿನ ಅವಧಿಯಂತಹ ಪರಿಸ್ಥಿತಿ ಈಗಲೂ ಮರುಕಳಿಸಬಹುದು ಎಂದು ಅಂದಾಜಿಸಲಾಗಿದೆ. ಇದು ಮುಂಗಾರಿನವರೆಗೂ ವಿಸ್ತರಣೆಯಾದರೆ ಹಣ್ಣಿನ ನೊಣ, ಆಂತ್ರಾಕ್ನೋಸ್ ಬಾಧೆಗಳು ಹೆಚ್ಚಾಗಿ ಫಸಲು ಗುಣಮಟ್ಟವಿಲ್ಲದೆ ನಷ್ಟವಾಗಬಹುದು. ಮತ್ತೊಂದೆಡೆ 2022ನೇ ಸಾಲಿನ ಮಾವು ಇಳಿ ಹಂಗಾಮು ಫಸಲಾಗಿರುವ ಸಾಧ್ಯತೆ ಇರುವುದರಿಂದ ಈ ಬಾರಿ ಹೆಚ್ಚಿನ ಫಸಲು ನಿರೀಕ್ಷೆ ಮಾಡುವುದು ಕಷ್ಟ ಎಂದು ತಜ್ಞರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಔಷಧಿ ಸಿಂಪಡನೆಯ ವಿವರ
ಮಾವಿನ ಮರಗಳಲ್ಲಿ ಹೂವಿನ ಜೊತೆ ಚಿಗುರು ಹೆಚ್ಚಿರುವುದರಿಂದ ಜಿಗಿ ಹುಳು, ಹೂ ತೆನೆ ಬುಡ ಕೊರಕ, ನುಸಿ, ಚಿಬ್ಬು ರೋಗ, ಹಿಟ್ಟು ತಿಗಣೆ ಹೀಗೆ ನಾನಾ ರೋಗಗಳು ಹೆಚ್ಚಾಗಿ ಕಾಡಬಹುದು. ಹೀಗಾಗಿ ರೈತರು ಹೂ ಬಿಡುವ ಮತ್ತು ಹೂ ತೆನೆ ಹೊರ ಬರುವ ಹೊತ್ತಿನಲ್ಲಿ ನಿಗದಿತ ಪ್ರಮಾಣದಲ್ಲಿ ತೋಟಗಾರಿಕೆ ಇಲಾಖೆ ಮತ್ತು ಮಾವು ಅಭಿವೃದ್ಧಿ ಮಂಡಳಿ ಸೂಚಿಸಿರುವ ಔಷಧಿಗಳನ್ನು ಸಿಂಪಡಿಸಬೇಕು. ಹೀಗೆ ಸಿಂಪಡಣೆ ಮಾಡುವುದರಿಂದ ಕೀಟ ರೋಗಗಳು ನಿಯಂತ್ರಣವಾಗುವುದರ ಜೊತೆಗೆ ಮುಂದಿನ ಹಂತದಲ್ಲಿ ರೋಗಗಳು ಉಲ್ಬಣಗೊಳ್ಳುವುದನ್ನು ತಪ್ಪಿಸುತ್ತದೆ. ಇಲ್ಲದಿದ್ದರೆ ಕಾಯಿ ಕಚ್ಚುವಿಕೆ ಕುಂಠಿತಗೊಂಡು ಇಳುವರಿಗೆ ತೀವ್ರ ಧಕ್ಕೆಯಾಗಲಿದೆ. ಇದರಿಂದಾಗಿ ರೈತರು ಅಗತ್ಯ ಸುರಕ್ಷಿತ ಕ್ರಮಗಳನ್ನು ಅನುಸರಿಸಬೇಕು.

ರೋಗ ನಿಯಂತ್ರಣಕ್ಕೆ ತಜ್ಞರ ಅಭಿಪ್ರಾಯ
ಏಕ ಕಾಲದಲ್ಲಿ ಹೂವು ಮತ್ತು ಚಿಗುರು ಬಿಡುತ್ತಿರುವುದರಿಂದ ಪ್ರಮುಖವಾಗಿ ಜಿಗಿ ಹುಳ ಮತ್ತು ಬೂದಿ ರೋಗ ಕಾಣಿಸಿಕೊಳ್ಳುತ್ತದೆ. ಜಿಗಿಹುಳು ನಿಯಂತ್ರಿಸಲು ಯಾವ ಔಷಧಿಯನ್ನು ಎಷ್ಟು ಸಿಂಪಡಣೆ ಮಾಡಬೇಕು ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ. ಥಿಯಾಮೆಥಾಕ್ಸಮ್ 1 ಗ್ರಾಂ ಪ್ರತಿ 2.5 ಲೀಟರ್ ನೀರಿಗೆ ಜೊತೆಗೆ ಲ್ಯಾಂಬ್ಡಾ- ಸೈಹಾಲೋಥ್ರಿನ್ ಅಥವಾ 0.5 ಮಿಲಿ ಪ್ರತಿ ಲೀಟರ್ ನೀರಿಗೆ ಸಿಂಪಡಿಸಬೇಕು. ಬೂದಿ ರೋಗ ನಿಯಂತ್ರಿಸಲು ಡಯಾಫೆನ್ಕೊನಜೋಲ್ 0.5 ಮಿಲಿ ಅಥವಾ ಹೆಕ್ಸಾಕೊನಜೋಲ್ 1.5 ಮಿಲಿ ಪ್ರತಿ ಲೀಟರ್ ನೀರಿನೊಂದಿಗೆ ಸಿಂಪಡಿಸಿ ರೋಗವನ್ನು ನಿಯಂತ್ರಿಸುವ ಮೂಲಕ ಉತ್ತಮ ಇಳುವರಿ ಪಡೆದುಕೊಳ್ಳಲು ಸಾಧ್ಯ ಎಂದು ಬೆಂಗಳೂರಿನ ಜಿಕೆವಿಕೆ ವಿಜ್ಞಾನಿ ಡಾ.ಕೇಶವ ರೆಡ್ಡಿ ಸೂಚನೆ ನೀಡಿದ್ದಾರೆ.
ಮಾವಿನ ಗಿಡ ಹೂವು, ಚಿಗುರು ಏಕಕಾಲದಲ್ಲಿ ಬಿಟ್ಟಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಹೂವು ರಕ್ಷಣೆ ಮಾಡುವ ಮೂಲಕ ಉತ್ತಮ ಇಳುವರಿ ಪಡೆದುಕೊಳ್ಳಲು ಅಗತ್ಯವಾದ ಮಾಹಿತಿಯನ್ನು ಸಂಬಂಧಪಟ್ಟ ಇಲಾಖಾಧಿಕಾರಿಗಳು ರೈತರಿಗೆ ನೀಡಬೇಕು ಎಂದು ಬೊಮ್ಮಗಾನಹಳ್ಳಿ ಬಿ.ಪಿ.ಎಲ್. ಪ್ರಭಾಕರ್ ರೆಡ್ಡಿ ತಿಳಿಸಿದ್ದಾರೆ.












Click it and Unblock the Notifications