ಪ್ರತಿಭಟನಾನಿರತ ರೈತರಿಗೆ ಹೊಸ ಆಯ್ಕೆ ಕೊಟ್ಟ ರಕ್ಷಣಾ ಸಚಿವ
ನವದೆಹಲಿ, ಡಿಸೆಂಬರ್ 25: ದೆಹಲಿಯಲ್ಲಿ ರೈತರ ಪ್ರತಿಭಟನೆ ಶುಕ್ರವಾರ 30ನೇ ದಿನಕ್ಕೆ ಕಾಲಿಟ್ಟಿದೆ. ರೈತರು ಇಂದು ಕೃಷಿ ಕಾಯ್ದೆಗಳ ರದ್ದತಿಗೆ ಪ್ರತಿಭಟನಾ ಮೆರವಣಿಗೆ ಕೈಗೊಂಡಿದ್ದು, ಈ ಹೋರಾಟಕ್ಕೆ ಅಂತ್ಯ ಹಾಡುವ ಕುರಿತು ಸರ್ಕಾರಕ್ಕೆ ಎಲ್ಲೆಡೆಯಿಂದ ಒತ್ತಡವೂ ಹೆಚ್ಚಾಗಿದೆ.
ಅಟಲ್ ಬಿಹಾರಿ ವಾಜಪೇಯಿ ಅವರ 96ನೇ ಜನ್ಮದಿನವಾದ ಇಂದು ಬಿಜೆಪಿ ರಾಷ್ಟ್ರಾದ್ಯಂತ ರೈತರನ್ನು ತಲುಪುವ ಸಂವಾದ ಕಾರ್ಯಕ್ರಮ ನಡೆಸುತ್ತಿದೆ. ಈ ಸಂದರ್ಭ ದೆಹಲಿಯ ದ್ವಾರಕಾದಲ್ಲಿ ಬಿಜೆಪಿ ಮೆರವಣಿಗೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರೈತರಿಗೆ ಮನವಿಯೊಂದನ್ನು ಮಾಡಿದ್ದಾರೆ. ಮುಂದೆ ಓದಿ...

ರೈತರಿಗೆ ರಕ್ಷಣಾ ಸಚಿವರ ಸಲಹೆ
"ಕೇಂದ್ರ ಸರ್ಕಾರ ಈಗ ಜಾರಿಗೊಳಿಸಿರುವ ಈ ಕೃಷಿ ಕಾಯ್ದೆಗಳನ್ನು ಒಂದು ವರ್ಷ ಜಾರಿಯಲ್ಲಿರಲು ಬಿಡಿ. ಒಂದು ವರ್ಷದಲ್ಲಿ ಈ ಕಾಯ್ದೆಗಳ ಕುರಿತು ಅವಲೋಕನ ಮಾಡೋಣ. ಈ ಅವಧಿಯಲ್ಲಿ ಈ ಕಾಯ್ದೆಗಳಿಂದ ರೈತರಿಗೆ ಪ್ರಯೋಜನವಾಗಿಲ್ಲ ಎಂಬುದು ಸಾಬೀತಾದರೆ, ತಿದ್ದುಪಡಿಯನ್ನು ಮಾಡೋಣ" ಎಂದು ಸಲಹೆ ನೀಡಿದ್ದಾರೆ.

"ನಾನು ಕೂಡ ರೈತನ ಮಗ"
ಕೃಷಿ ಕಾಯ್ದೆಗಳ ವಿರುದ್ಧ ರೈತರ ಹೋರಾಟಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನದ ಭಾಗವಾಗಿ ಶುಕ್ರವಾರ ದೆಹಲಿಯಲ್ಲಿ ಬಿಜೆಪಿ ಪರ ಮೆರವಣಿಗೆ ಹಮ್ಮಿಕೊಂಡಿದ್ದು, ಇಲ್ಲಿ ರಕ್ಷಣಾ ಸಚಿವರು ರೈತರಿಗೆ ಮನವಿ ಮಾಡಿದ್ದಾರೆ. "ನಾನು ಕೂಡ ರೈತನ ಮಗ. ಮೋದಿ ಸರ್ಕಾರ ರೈತರ ಹಿತಾಸಕ್ತಿ ವಿರುದ್ಧವಾಗಿ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಈ ಬಗ್ಗೆ ನಂಬಿಕೆಯಿಡಿ. ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಹಾಗೂ ರೈತ ಕುಟುಂಬದ ಕುರಿತು ನಮಗೆಲ್ಲಾ ತುಂಬು ಗೌರವವಿದೆ" ಎಂದು ಹೇಳಿದ್ದಾರೆ.

"ಎಲ್ಲಾ ಸಮಸ್ಯೆಗೂ ಮಾತುಕತೆ ಪರಿಹಾರ"
ಎಲ್ಲಾ ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದು ಎಂಬುದನ್ನು ಒತ್ತಿ ಹೇಳಿದ ರಾಜನಾಥ್ ಸಿಂಗ್, "ಮೋದಿಯವರು ರೈತರೊಂದಿಗೆ ಮಾತುಕತೆ ನಡೆಸಬೇಕು ಎಂದಿದ್ದಾರೆ. ಹೀಗಾಗಿ ರೈತರಿಗೆ ಮತ್ತೊಮ್ಮೆ ಆಹ್ವಾನ ನೀಡಲಾಗಿದೆ. ರೈತರ ಒಳಿತನ್ನು ಗಮನದಲ್ಲಿಟ್ಟುಕೊಂಡೇ ಪ್ರತಿ ಹೆಜ್ಜೆಯನ್ನು ಸರ್ಕಾರ ಇಡುತ್ತಿದೆ" ಎಂದು ಹೇಳಿದರು.

"ಕನಿಷ್ಠ ಬೆಂಬಲ ಬೆಲೆ ಕೊನೆಯಾಗುವುದಿಲ್ಲ"
ಇದೇ ಸಂದರ್ಭ ಕನಿಷ್ಠ ಬೆಂಬಲ ಬೆಲೆಯ ಕುರಿತು ಮಾತನಾಡಿದ ಅವರು, "ಎಂಎಸ್ ಪಿ ಕುರಿತು ರೈತರಲ್ಲಿ ತಪ್ಪು ತಿಳಿವಳಿಕೆಯಿದೆ. ಈ ಕಾಯ್ದೆಯಿಂದ ಕನಿಷ್ಠ ಬೆಂಬಲ ಬೆಲೆ ಕೊನೆಯಾಗುತ್ತದೆ ಎಂದು ಹಲವರು ತಿಳಿದುಕೊಂಡಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಎಂಎಸ್ ಪಿ ಕೊನೆಯಾಗುವುದಿಲ್ಲ" ಎಂದಿದ್ದಾರೆ.












Click it and Unblock the Notifications