ಧೂಳಿನಿಂದ ತರಕಾರಿ ಬೆಳೆ ನಾಶ: ಸಾರಥಿ ಗ್ರಾಮದ ರಸ್ತೆಯಲ್ಲಿ ಲಾರಿಗೆ ಅಡ್ಡ ಕುಳಿತು ಮಹಿಳೆ ಆಕ್ರೋಶ
ದಾವಣಗೆರೆ, ನವೆಂಬರ್, 30: ಜಿಲ್ಲೆಯ ಹಲವು ಹಳ್ಳಿಗಳಲ್ಲಿ ಮಣ್ಣಿನ ರಸ್ತೆಗಳ ಮೇಲೆ ಲಾರಿಗಳ ಓಡಾಟ ಹೆಚ್ಚಾಗಿದ್ದು, ಈ ಧೂಳಿನಿಂದ ಜನರು ಪ್ರತಿನಿತ್ಯ ಅನಾರೋಗ್ಯದಿಂದ ಬಳಲುವಂತಾಗಿದೆ. ಅಲ್ಲದೇ ಜಮೀನುಗಳಲ್ಲಿ ಧೂಳು ಆವರಿಸುತ್ತಿದ್ದು, ತರಕಾರಿ ಬೆಳೆಗಳೆಲ್ಲ ನೆಲಕಚ್ಚುತ್ತಿವೆ. ಚಿಕ್ಕ ಬಿದರಿ, ಸಾರಥಿ ಗ್ರಾಮಗಳನ್ನೊಳಹೊಂಡಂತೆ ಹತ್ತಕ್ಕೂ ಹೆಚ್ಚಿನ ಗ್ರಾಮಗಳ ಜನರು ಲಾರಿಗಳ ಓಡಾಟ, ಧೂಳಿನಿಂದ ಕಂಗಾಲಾಗಿ ಹೋಗಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹೇಳಿದರೂ ಕೂಡ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ. ಇದರಿಂದ ರೊಚ್ಚಿಗೆದ್ದ ಮಹಿಳೆಯೊಬ್ಬರು ಹರಿಹರ ತಾಲೂಕಿನ ಸಾರಥಿ ಗ್ರಾಮದ ಬಳಿ ರಸ್ತೆಯಲ್ಲಿ ಕುಳಿತು ಲಾರಿಗೆ ಅಡ್ಡ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಸಾರಥಿ ಗ್ರಾಮದ ಬಳಿ ಕೊಟ್ರಮ್ಮ ಎಂಬ ರೈತ ಮಹಿಳೆ ಈ ರೀತಿ ವಿಭಿನ್ನ ಹೋರಾಟ ನಡೆಸಿದ್ದಾರೆ. ತುಂಗಾಭದ್ರಾ ನದಿಯ ಮಣ್ಣು ಹಾಗೂ ಮರಳಿಗೆ ಬೇಡಿಕೆ ಹೆಚ್ಚಾಗಿದೆ. ಇಲ್ಲಿಂದ ಮೈಸೂರು, ಬೆಂಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಗೂ ಸಹ ಮರಳು, ಮಣ್ಣನ್ನು ಸಾಗಾಟ ಮಾಡಲಾಗುತ್ತದೆ. ಹೆಚ್ಚಾಗಿ ಇಟ್ಟಿಗೆ ಭಟ್ಟಿಗಳಿಗೂ ಇಲ್ಲಿನ ಮಣ್ಣು ಬಳಕೆ ಆಗುತ್ತದೆ. ಪ್ರತಿನಿತ್ಯ ನೂರಾರು ಲಾರಿಗಳು ಮಣ್ಣು ಹೊತ್ತು ಸಾಗುತ್ತವೆ. ಇದರಿಂದಾಗಿ ರಸ್ತೆಯ ಅಕ್ಕಪಕ್ಕದ ಬೆಳೆಗಳು ಧೂಳಿನಿಂದಾಗಿ ಹಾಳಾಗುತ್ತಿವೆ. ಲಾರಿಗಳು ಬರುವ ವೇಳೆ ಓಡಾಡಲು ಸಹ ಕಷ್ಟವಾಗುತ್ತದೆ ಎಂದು ಇಲ್ಲಿನ ಜನರು ಅಳಲು ತೋಡಿಕೊಂಡಿದ್ದಾರೆ.
ದಾವಣಗೆರೆಯಲ್ಲಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ "ಕಲ್ಕಿ'' ಟಗರು, ಇಲ್ಲಿದೆ ವಿಶೇಷತೆ
ಅಧಿಕಾರಿಗಳ ವಿರುದ್ಧ ಕೊಟ್ರಮ್ಮ ಆಕ್ರೋಶ
ಕೊಟ್ರಮ್ಮ ಬಡ ಕುಟುಂಬದ ಮಹಿಳೆ ಆಗಿದ್ದು, ಅವರು ಕೂಲಿ ಕೆಲಸ ಮಾಡಿಕೊಂಡು ಜೀವನವನ್ನು ಸಾಗಿಸುತ್ತಿದ್ದಾರೆ. ತನ್ನ ಅರ್ಧ ಹೆಕ್ಟೇರ್ ಜಮೀನಿನಲ್ಲಿ ತರಕಾರಿ ಬೆಳೆದು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಸಾಲ ಮಾಡಿ ತರಕಾರಿ ಬೆಳೆದಿದ್ದು, ಧೂಳಿನಿಂದ ತರಕಾರಿ ಬೆಳೆಗಳು ನೆಲಕಚ್ಚಿದ್ದು, ಕೈಗೆ ಬಂತು ಬಾಯಿಗೆ ಬರದಂತೆ ಆಗಿದೆ. ನಾಲ್ಕೈದು ಬಾರಿ 30 ಸಾವಿರ ರೂಪಾಯಿಗಿಂತ ಹೆಚ್ಚು ಹಣ ಖರ್ಚು ಮಾಡಿ ತರಕಾರಿ ಬೆಳೆದಿದ್ದರೂ ಕೂಡ ನಷ್ಟದಿಂದ ಕೈಸುಟ್ಟುಕೊಳ್ಳುವಂತಾಗಿದೆ.
ಟಾರ್ ರಸ್ತೆ ಮಾಡುವಂತೆ ಒತ್ತಾಯ
ಈ ಬಗ್ಗೆ ಎಷ್ಟು ಬಾರಿ ಮನವಿ ಮಾಡಿದರೂ ಕೂಡ ಅಧಿಕಾರಿಗಳು, ಲಾರಿ ಮಾಲೀಕರು, ಚಾಲಕರು ಮಾತ್ರ ತಲೆಕೆಡೆಸಿಕೊಂಡಿಲ್ಲ. ಮಣ್ಣು ಸಾಗಾಟಕ್ಕೆ ಅನುಮತಿ ಇದ್ದು, ಡಾಂಬಾರು ರಸ್ತೆ ಮಾಡಿದರೆ ಈ ಸಮಸ್ಯೆಯನ್ನು ತಪ್ಪಿಸಬಹುದಾಗಿದೆ. ಧೂಳು ನೇರವಾಗಿ ಬೆಳೆಗಳ ಮೇಲೆ ಕೂರುತ್ತಿದ್ದು, ಇದರಿಂದ ಭತ್ತ, ಮೆಕ್ಕೆಜೋಳ, ತರಕಾರಿ ಬೆಳೆ ನಶಿಸಿ ಸಾವಿರಾರು ರೈತರು ನಷ್ಟಕ್ಕೆ ಒಳಗಾಗಿದ್ದಾರೆ.
ಲಾರಿ ಮಾಲೀಕರಿಗೆ ಕೊಟ್ರಮ್ಮ ಅವರಿಂದ ತರಾಟೆ
ಅಧಿಕಾರಿಗಳ ಬೇಜವಾಬ್ದಾರಿ ವಿರುದ್ಧ ಆಕ್ರೋಶಗೊಂಡ ಕೊಟ್ರಮ್ಮ ಏಕಾಂಗಿ ಹೋರಾಟ ಶುರು ಮಾಡಿದ್ದಾರೆ. ಕಳೆದ ಒಂದು ವಾರದಿಂದ ಲಾರಿಗಳಿಗೆ ಅಡ್ಡ ಹಾಕಿ ರಸ್ತೆ ಮಧ್ಯೆ ಕುಳಿತು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಾನು ತನ್ನ ಮಕ್ಕಳಂತೆ ಪೋಷಿಸಿ ತರಕಾರಿ ಬೆಳೆದಿದ್ದೇನೆ. ಆದರೆ ಇದೀಗ ಬೆಳೆ ನಾಶದಿಂದ ಹೊಟ್ಟೆಯಲ್ಲಿ ಬೆಂಕಿ ಬಿದ್ದ ಹಾಗೆ ಆಗುತ್ತಿದೆ. ಶಾಸಕರು, ಜನಪ್ರತಿನಿಧಿಗಳು ಮಾತ್ರ ನಮ್ಮ ಸಮಸ್ಯೆಯನ್ನು ಆಲಿಸುತ್ತಿಲ್ಲ. ಆದ್ದರಿಂದ ಕೊಟ್ರಮ್ಮ ಹೋರಟಕ್ಕೆ ಇಳಿದಿದ್ದು, ಈ ಏಕಾಂಗಿ ಹೋರಾಟಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಅವ್ಯವಸ್ಥೆ ವಿರುದ್ಧ ಕೊಟ್ರಮ್ಮ ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದು, ಅವರಿಗೆ ಎಲ್ಲೆಡೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಸೂಕ್ತ ಕ್ರಮ ಕೈಗೊಳ್ಳದ ಅಧಿಕಾರಿಗಳು
ಈ ಭಾಗದಲ್ಲಿ ಮಣ್ಣು ಸಾಗಣೆ ಮಾಡುವುದು ದೊಡ್ಡ ಮಾಫಿಯ ಆಗಿಬಿಟ್ಟಿದೆ. ಅನುಮತಿ ಪಡೆದಿರುವುದಕ್ಕಿಂದ ಹೆಚ್ಚು ಮಣ್ಣು ಸಾಗಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈಗಲಾದರೂ ಜಿಲ್ಲಾಡಳಿತ, ಶಾಸಕರು, ಸಚಿವರು ಹಾಗೂ ಸಂಸದರು ಇತ್ತ ಗಮನಹರಿಸಿ ರೈತರ ನೆರವಿಗೆ ಧಾವಿಸಬೇಕಿದೆ. ಎನ್ನುವ ಕೂಗುಗಳು ಕೇಳಿಬರುತ್ತಿವೆ.