ಗಾಂಧಿ ಮಾರ್ಗದಲ್ಲಿ ಮುಂದುವರೆದು ತೀವ್ರಗೊಂಡ ರೈತ ಚಳುವಳಿ
ದೆಹಲಿ ಹೊರವಲಯದಲ್ಲಿ ಪಂಜಾಬ್ ಹಾಗೂ ಹರಿಯಾಣ ರಾಜ್ಯಗಳ ರೈತ ಸಂಘಟನೆಗಳ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಗಾಂಧಿ ಮಾರ್ಗದಲ್ಲೇ ರೈತರು ತಮ್ಮ ಚಳುವಳಿಯನ್ನು ಅತ್ಯಂತ ಬಿಗುವಾಗಿ ಮುನ್ನಡೆಸುತ್ತಿದ್ದಾರೆ. ಸರ್ಕಾರಗಳು ಮತ್ತು ಪ್ರಭುತ್ವದ ನಿರ್ದೇಶನದಂತೆ ಚಳವಳಿಯನ್ನು ಹತ್ತಿಕ್ಕುವ 'ಸುಪಾರಿ ಚಿಂತಕರ" ಆಟ ನಡೆಯುತ್ತಿಲ್ಲ.
ರೈತರಿಗೆ ತಮ್ಮ ಬೇಡಿಕೆಯ ಬಗ್ಗೆ ಸ್ಪಷ್ಟ ನಿಲುವಿದೆ. ತಿಪ್ಪೆ ಸಾರಿಸುವ ಪ್ರಭುತ್ವದ ಲೆಕ್ಕಾಚಾರಕ್ಕೆ ರೈತರು ಮಣಿಯುವುದಿಲ್ಲವೆಂಬ ಸ್ಪಷ್ಟ ಸಂದೇಶ ಇಷ್ಟೊತ್ತಿಗಾಗಲೇ ಸರ್ಕಾರಗಳಿಗೆ ತಲುಪಬೇಕಿತ್ತು. ಆದರೂ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ನೋಡಿದರೆ ಇನ್ನಾವುದೋ ಕಂಡು ಕೇಳರಿಯದ ಪಟ್ಟು ಹಾಕಿ ರೈತರನ್ನು ಮಣಿಸುವ ಲೆಕ್ಕಾಚಾರ ಇದೆಯೇ ಎಂಬ ಅನುಮಾನ ಮೂಡದೆ ಇರುವುದಿಲ್ಲ.
ರೈತರ ಪ್ರತಿಭಟನೆ ಬೆಂಬಲಿಸಿ ಪಂಜಾಬ್ ಡಿಐಜಿ ರಾಜೀನಾಮೆ
ಇಂತಿಪ್ಪ ಸಂದಿಗ್ಧದಲ್ಲಿಯೇ 19ನೇ ದಿನಕ್ಕೆ ಕಾಲಿರಿಸಿರುವ ರೈತರ "ದೆಹಲಿ ಚಲೋ' ಚಳುವಳಿಯ ಈ ದಿನದಂದು ರೈತ ಸಂಘಟನೆಗಳ ಮುಖಂಡರು ಬೆಳಿಗ್ಗೆ 8 ಗಂಟೆಯಿಂದ ಉಪವಾಸ ಕುಳಿತಿದ್ದಾರೆ.
ರೈತರ ಉಪವಾಸ ಸತ್ಯಾಗ್ರಹಕ್ಕೆ ಪ್ರತಿಕ್ರಿಯೆ ಎಂಬಂತೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈತರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆಗೆ ಮುಂದಾಗುವುದಾಗಿ ತಿಳಿಸಿದ್ದಾರೆ. "ರೈತರೊಂದಿಗೆ ನಮ್ಮ ಮಾತುಕತೆ ಖಂಡಿತಾ ಸಂಭವಿಸುತ್ತದೆ. ಅವರೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ" ಎಂಬುದಾಗಿಯೂ ತೋಮರ್ ವಿಶ್ವಾಸ ವ್ಯಕ್ತಪಡಿಸಿರುವುದಲ್ಲದೆ ಸರ್ಕಾರ ಮಾತುಕತೆಗೆ ಸದಾ ಸಿದ್ಧವಾಗಿದೆ "ರೈತರು ತೀರ್ಮಾನಿಸಿ ಸಭೆ ಆಯೋಜಿಸಬೇಕಿದೆ" ಎಂದೂ ಹೇಳಿದ್ದಾರೆ.
ಏತನ್ಮಧ್ಯೆ ರೈತ ಸಂಘನೆಗಳು ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರ ಹೊಸದಾಗಿ ತಂದಿರುವ ಮೂರು ಕೃಷಿ ಕಾಯಿದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.
ಪಂಜಾಬ್ ರಾಜ್ಯದ ಲೂಧಿಯಾನ, ಪಟಿಯಾಲ, ಸಂಗ್ರೂರ್, ಬರ್ನಾಳ, ಬಟಿಂಡಾ, ಮೋಗಾ, ಫರೀದ್ ಕೋಟ್, ಫೆರೋಜ್ ಪುರ್ ಮುಂತಾದ ಕಡೆ ಪ್ರತಿಭಟನೆ ನಡೆದಿದೆ ಎಂದು ಸುದ್ಧಿ ಸಂಸ್ಥೆ ಪಿ.ಟಿ.ಐ ವರದಿ ಮಾಡಿದೆ.