ಸಾಲಮನ್ನಾ ಕುರಿತು ರೈತರಿಗೆ ಪತ್ರ ಬರೆದ ಸಿಎಂ:ಪೋಸ್ಟ್ ತಲುಪಿಸುವಲ್ಲಿ ಅಂಚೆಯಣ್ಣ ಹೈರಾಣ
ಮೈಸೂರು, ಮೇ 17: ರೈತರ ಬೆಳೆ ಸಾಲ ಮನ್ನಾ ಯೋಜನೆ ಮತ್ತು ರೈತರ ಆರ್ಥಿಕ ಸಬಲೀಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತೆಗೆದುಕೊಂಡಿರುವ ನೀತಿ ನಿರ್ಧಾರಗಳ ಬಗ್ಗೆ ಪ್ರತಿಯೊಬ್ಬ ಸಾಲಗಾರ ರೈತನಿಗೆ ವೈಯಕ್ತಿಕವಾಗಿ ಪತ್ರ ಕಳುಹಿಸುವ ಮೂಲಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತರ ಸಹಕಾರ ಕೋರಿರುವುದು ಬೆಳಕಿಗೆ ಬಂದಿದೆ.
ಮುಖ್ಯಮಂತ್ರಿ ಭಾವಚಿತ್ರ ಇರುವ ಮತ್ತು ಗದ್ದೆಯಲ್ಲಿ ರೈತ ಮಹಿಳೆಯರೊಂದಿಗೆ ಭತ್ತದ ಸಸಿ ನಾಟಿ ಮಾಡುವ ಚಿತ್ರಗಳನ್ನು ಒಳಗೊಂಡಂತೆ ಆಕರ್ಷಕ ರೀತಿಯಲ್ಲಿರುವ ಲಕೋಟೆ ಮತ್ತು ಅದರ ಒಳಗೆ ಮುಖ್ಯಮಂತ್ರಿ ಸಹಿ ಇರುವ ಮುದ್ರಿತ ಪತ್ರ ತಾಲೂಕಿನ ಸಹಸ್ರ ಸಂಖ್ಯೆಯಲ್ಲಿರುವ ಸಾಲಗಾರ ರೈತರಿಗೆ ಅಂಚೆ ಮೂಲಕ ತಲುಪುತ್ತಿವೆ.
ರೈತರ ಪರವಾಗಿ ಸಿಎಂ ಕುಮಾರಸ್ವಾಮಿಗೆ ಮತ್ತೆ ಟಾಂಗ್ ಕೊಟ್ಟ ದರ್ಶನ್
ಕಳೆದ ಫೆ.19ರಂದು ಬರೆಯಲಾಗಿರುವ ಈ ಪತ್ರಗಳು ಅಂಚೆ ಮೂಲಕ ಈಗಷ್ಟೇ ಬರುತ್ತಿದ್ದು, ರಾಶಿಗಟ್ಟಲೆ ಪತ್ರಗಳನ್ನು ವಿತರಿಸುವಲ್ಲಿ ಅಂಚೆ ಇಲಾಖೆ ಸಿಬ್ಬಂದಿ ಹೆಣಗಾಡುತ್ತಿದ್ದಾರೆ. ಲೋಕಸಭೆ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ವೈಯಕ್ತಿಕವಾಗಿ ರೈತರನ್ನು ಪತ್ರದ ಮೂಲಕ ಸಂಪರ್ಕಿಸುವ ಮುಖ್ಯಮಂತ್ರಿ ಪ್ರಯತ್ನಕ್ಕೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿರುವ ಸಾಧ್ಯತೆ ಇದ್ದು, ಈ ಕಾರಣಕ್ಕೆ ಮೂರು ತಿಂಗಳ ನಂತರ ಪತ್ರಗಳು ರೈತರ ಕೈ ಸೇರುತ್ತಿವೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ವಿವರಿಸಿರುವಂತೆ ಮಹಾತ್ಮಗಾಂಧಿ ಅವರ ಆಶಯದಂತೆ ಮೈತ್ರಿ ಸರ್ಕಾರ ರೈತರ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ಒದಗಿಸಲು ಹಲವು ಯೋಜನೆಗಳನ್ನು ರೂಪಿಸುವ ಮೂಲಕ ರೈತರ ಬೆನ್ನಿಗೆ ನಿಂತು, ಬಲ ತುಂಬಿ ಅನ್ನದಾತನ ಮೊಗದಲ್ಲಿ ತೃಪ್ತಿಯ ನಗೆ, ನಡೆಯಲ್ಲಿ ಆತ್ಮವಿಶ್ವಾಸ ಉಕ್ಕಿಸುವ ಸಂಕಲ್ಪವನ್ನು ಸಾಕಾರಗೊಳಿಸುವತ್ತ ಮುನ್ನಡೆದಿದೆ.
ಮೊದಲ ಹೆಜ್ಜೆ ಎಂಬಂತೆ ರೈತರ ಬೆಳೆ ಸಾಲ ಮನ್ನಾ ಯೋಜನೆ ವ್ಯಾಪ್ತಿಗೆ ಒಳಪಡುವ ಸುಮಾರು 40 ಲಕ್ಷ ರೈತರಲ್ಲಿ ನಿರಾಳಭಾವ ಮೂಡಿಸುವ ಆಶಯವನ್ನು ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ.
ಜೂನ್ ವೇಳೆಗೆ ಸಾಲಮನ್ನಾ ಪ್ರಕ್ರಿಯೆ ಪೂರ್ಣ: ಬಂಡೆಪ್ಪ ಕಾಶೆಂಪುರ
ಈ ಯೋಜನೆಯ ಫಲವಾಗಿ ಈಗಾಗಲೇ ಸುಮಾರು 6 ಲಕ್ಷ ರೈತರು ಸಾಲದಿಂದ ಮುಕ್ತರಾಗಿದ್ದಾರೆ, ಸದ್ಯದಲ್ಲಿ ಇತರೆ ಎಲ್ಲ ಅರ್ಹ ರೈತರ ಸಾಲ ಮನ್ನಾ ಆಗಲಿದ್ದು, ಇದನ್ನು ಅತ್ಯಂತ ವ್ಯವಸ್ಥಿತ, ಪಾರದರ್ಶಕವಾಗಿ ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಹಿರಿಯ ಐಎಎಸ್ ಅಧಿಕಾರಿಗಳ ನೇತೃತ್ವದ ತಂಡವು ಹಗಲಿರುಳು ಶ್ರಮಿಸುತ್ತಿದೆ. ರಾಜ್ಯ ಸರ್ಕಾರದ ಈ ಮಹಾತ್ವಾಕಾಂಕ್ಷಿ ಕಾರ್ಯಕ್ರಮವನ್ನು ಮೆಚ್ಚಿರುವ ಇತರೆ ರಾಜ್ಯಗಳು ಯೋಜನೆಯ ಮಾಹಿತಿ ಪಡೆಯುತ್ತಿರುವುದು ಯಶಸ್ವಿಗೆ ಸಾಕ್ಷಿಯಾಗಿದೆ ಎಂದು ಮುಖ್ಯಮಂತ್ರಿ ಪತ್ರದಲ್ಲಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಪತ್ರದಲ್ಲಿ ಸ್ವತಃ ಕುಮಾರಸ್ವಾಮಿಯವರೇ ಉಲ್ಲೇಖಿಸಿರುವಂತೆ ಸುಮಾರು 40 ಲಕ್ಷ ರೈತರಿಗೂ ಈ ಪತ್ರಗಳು ತಲುಪಿರುವ ಸಾಧ್ಯತೆ ಇದೆ. ಒಂದು ಅಂದಾಜಿನ ಪ್ರಕಾರ ಪ್ರತಿ ಲಕೋಟೆಗೆ 5 ರೂ. ಅಂಚೆ ವೆಚ್ಚ ಭರಿಸಲಾಗಿದೆ. ಒಟ್ಟಾರೆ ರೈತರಿಗೆ 10 ರೂ.ಖರ್ಚಾಗುತ್ತಿದ್ದು, ಸುಮಾರು 4 ಕೋಟಿಗೂ ಅಧಿಕ ಹಣ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಿ ಪರಿಣಮಿಸಿದೆ ಎಂಬ ಆಕ್ಷೇಪಗಳೂ ಕೇಳಿಬಂದಿವೆ.