ಚಿತ್ರದುರ್ಗದಲ್ಲಿ ರೈತನ ಜಮೀನಿನಲ್ಲಿ ಪ್ರತ್ಯಕ್ಷನಾದ ದೇವರು!
ಇದು ಯಾವುದೋ ಪವಾಡದ ಕಥೆಯಲ್ಲ. ಬದಲಿಗೆ ರೈತನ ಜಮೀನಿನಲ್ಲಿ ಪತ್ತೆಯಾದ ಪುರಾತನ ಕಾಲದ್ದು ಎನ್ನಲಾದ ವಿಗ್ರಹದ ಕುರಿತ ಕಥೆ. ತನ್ನದೇ ಕರ್ಮಭೂಮಿಯಲ್ಲಿ ಹುದುಗಿ ಹೋಗಿದ್ದ ದೇವರ ವಿಗ್ರಹವನ್ನು ಕಂಡು ರೈತನೇ ನಿಬ್ಬೆರಗಾಗಿದ್ದಾನೆ.
ಹೌದು, ಇಂಥದೊಂದು ಘಟನೆ ನಡೆದಿದ್ದು ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಹೂವಿನಹೊಳೆ ಗ್ರಾಮದ ಜಮೀನಿನಲ್ಲಿ ಕೆಲಸ ಮಾಡುವಾಗ ದೇವರ ವಿಗ್ರಹವೊಂದು ಪತ್ತೆಯಾಗಿದೆ. ವಿಗ್ರಹ ಸುಮಾರು 800 ವರ್ಷಗಳ ಹಿಂದಿನದ್ದು ಎಂದು ಹೇಳಲಾಗಿದೆ. ಈ ವಿಗ್ರಹ ಗ್ರಾಮದ ಗಿರಿಸ್ವಾಮಿ ಮತ್ತು ವೆಂಕಟರಮಣಪ್ಪ ಇವರಿಬ್ಬರ ಜಮೀನಿನ ಮಧ್ಯದಲ್ಲಿ ಜೆಸಿಬಿ ಯಂತ್ರ ಕೆಲಸ ಮಾಡುವಾಗ ದೊರೆತಿದೆ.

ದೇವರ ವಿಗ್ರಹ ಜೊತೆಗೆ ಶಿವಲಿಂಗಗಳು ಪತ್ತೆಯಾಗಿದೆ. ವಿಗ್ರಹ ಪತ್ತೆಯಾದ ಹಿನ್ನೆಲೆಯಲ್ಲಿ ಗಿರಿ ಸ್ವಾಮಿಯವರು ದೇವರ ವಿಗ್ರಹಕ್ಕೆ ಪೂಜೆ ಸಲ್ಲಿಸಿದ್ದಾರೆ. ಈ ವಿಗ್ರಹ ಶ್ರೀರಂಗನಾಥ ಸ್ವಾಮಿ ದೇವರ ಶಿಲೆ ಇರಬಹುದು ಎಂದು ಹೇಳಲಾಗಿದೆ. ಈ ಶಿಲೆಯನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪ ತಂಡವಾಗಿ ಹರಿದು ಬರುತ್ತಿದ್ದಾರೆ.

ಈ ವಿಗ್ರಹದ ಶಿಲೆ ಅದ್ಭುತವಾಗಿದ್ದು ಸ್ಥಳಕ್ಕೆ ಇದುವರೆಗೂ ಯಾವುದೇ ಅಧಿಕಾರಿಗಳು ಭೇಟಿ ನೀಡಿಲ್ಲ. ಹೀಗಾಗಿ ಪುರಾತತ್ವ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಅಧ್ಯಯನ ನಡೆಸಿದರೆ ಈ ವಿಗ್ರಹಗಳ ಇತಿಹಾಸದ ಬಗ್ಗೆ ತಿಳಿಯುತ್ತದೆ. ಜೊತೆಗೆ ವಿಗ್ರಹದ ಬಗ್ಗೆ ಅಧ್ಯಯನ ನಡೆಸಿದರೆ ಹೂವಿನಹೊಳೆ ಗ್ರಾಮದ ಇತಿಹಾಸದ ಬಗ್ಗೆಯೂ ಕೆಲವು ರೋಚಕ ವಿಚಾರಗಳು ಹೊರ ಬರುವ ಸಾಧ್ಯತೆಗಳಿವೆ.












Click it and Unblock the Notifications