ವಿಶೇಷ ಸುದ್ದಿ: ನೇರಳೆ ಬೆಳೆದು ನೆಮ್ಮದಿ ಜೀವನ ಕಂಡ ಚಿತ್ರದುರ್ಗದ ರೈತ ರವಿಶಂಕರ್
ಚಿತ್ರದುರ್ಗ, ಜುಲೈ 7: 'ಕಪ್ಪು ಹೆಂಡತಿಯೆಂದು ಜರಿದು ನುಡಿಯಲು ಬೇಡ, ನೇರಳೆ ಹಣ್ಣು ಬಲು ಕಪ್ಪು, ಆದರೂ ತಿಂದೂ ನೋಡಿದರೆ ರುಚಿ ಬಾಳ,' 'ನೇರಳೆ ನನ್ನಲ್ಲಿ ಬಾರಲೇ, ಅನಾರೋಗ್ಯ ನಿಗಲೇ' ಈಗೆ ಜನಪದ ಶೈಲಿಯಲ್ಲಿ ಕರೆಸಿಕೊಳ್ಳುವ ಮೂಲಕ ಮನುಷ್ಯನ ಆರೋಗ್ಯಕ್ಕೆ ನೇರಳೆ ಹಣ್ಣು ರಾಮಬಾಣವಾಗಿದೆ.
ಬರದ ನಾಡಿನಲ್ಲಿ ಸಾಮಾನ್ಯ ರೈತರು ಮಾವು, ಬಾಳೆ, ಸೀಬೆ, ದಾಳಿಂಬೆ ಬೆಳೆ ಬೆಳೆದು ಗೆಲುವು ಸಾಧಿಸುವುದನ್ನು ನೋಡಿದ್ದೆವೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಅಪರೂಪದ ರೈತನೊಬ್ಬ ತಮ್ಮ ಒಂದೂವರೆ ಎಕರೆಯಲ್ಲಿ ನೇರಳೆ ಹಣ್ಣು ಬೆಳೆದು, ನೆಮ್ಮದಿ ಜೀವನ ಕಂಡುಕೊಂಡಿದ್ದಾರೆ. ಹಾಗಾದರೆ ಆ ರೈತ ಯಾರು ಎಂಬುದನ್ನು ತಿಳಿಯಲು ಮುಂದೆ ಓದಿ...
ರವಿಶಂಕರ್ ಕುಟುಂಬ ನೆಮ್ಮದಿ ಜೀವನ ಕಂಡುಕೊಂಡಿದೆ
ಚಿತ್ರುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಆದಿವಾಲ ಗ್ರಾಮದ ರವಿಶಂಕರ್ ಎಂಬ ರೈತ ತನ್ನ ಒಂದೂವರೆ ಎಕರೆಯಲ್ಲಿ ಸುಮಾರು 30 ಅಡಿಯೊಂದರಂತೆ 50 ನೇರಳೆ ಗಿಡಗಳನ್ನು ಬೆಳೆಸಿಕೊಂಡು ಜೀವನದಲ್ಲಿ ನೆಮ್ಮದಿ ಕಾಣುತ್ತಿದ್ದಾರೆ. ಈ ಹಣ್ಣು ವರ್ಷಕ್ಕೊಮ್ಮೆ ಮಾತ್ರ ಇಳುವರಿ ಬರುತ್ತದೆ. ಒಂದಿಷ್ಟು ಸಣ್ಣ ಆದಾಯದ ಮೂಲಕ ರವಿಶಂಕರ್ ಕುಟುಂಬ ನೆಮ್ಮದಿ ಜೀವನ ಕಂಡುಕೊಂಡಿದೆ.
ಬೆಂಗಳೂರಿನ ನರ್ಸರಿ ಫಾರಂ ಒಂದರಲ್ಲಿ ಬಂಜು ತಳಿಯ ನೇರಳೆ ಸಸಿಗಳನ್ನು ಖರೀದಿಸಿ ತಂದು ತನ್ನ ಜಮೀನಿನಲ್ಲಿ ನಾಟಿ ಮಾಡಿದ್ದರು. ನಾಲ್ಕು ವರ್ಷಗಳ ನಂತರ ನೇರಳೆ ಹಣ್ಣು ಇಳುವರಿ ಪ್ರಾರಂಭವಾಗುತ್ತದೆ. ಹಂತ ಹಂತವಾಗಿ ಗಿಡದಲ್ಲಿ ಇಳುವರಿ ಜಾಸ್ತಿಯಾಗುತ್ತಿರುತ್ತದೆ.
ಒಂದು ತಿಂಗಳು ಕಾಲ ಮಾತ್ರ ಇಳುವರಿ
ವರ್ಷದ ಜನವರಿ ತಿಂಗಳಲ್ಲಿ ಚಿಗುರೊಡೆದು, ಮೊಗ್ಗು ಪ್ರಾರಂಭವಾಗುತ್ತದೆ. ಎಳೆಕಾಯಿಯಾಗಿ, ಆಮೇಲೆ ಕೆಂಪು ಬಣ್ಣಕ್ಕೆ ಬಂದ ನಂತರ ಕಪ್ಪು ಬಣ್ಣಕ್ಕೆ ತಿರುಗಿ ಹಣ್ಣಾಗುತ್ತದೆ. ಮುಂಗಾರು ಹಂಗಾಮಿನ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಕೇವಲ ಒಂದು ತಿಂಗಳು ಕಾಲ ಮಾತ್ರ ಈ ನೇರಳೆ ಹಣ್ಣು ಇಳುವರಿ ಬರುವುದನ್ನು ಕಾಣಬಹುದಾಗಿದೆ.
ವರ್ಷಕ್ಕೊಮ್ಮೆ ಬರುವ ಒಂದು ಗಿಡದಲ್ಲಿ ಪ್ರಾರಂಭದಲ್ಲಿ 3, 30, 50, 80 ಕೆಜಿಯಿಂದ ದಿನ ಕಳೆದಂತೆ ಇಳುವರಿ ಹೆಚ್ಚುತ್ತದೆ. ಒಂದು ವರ್ಷಕ್ಕೆ ಸರಾಸರಿ 30- 40 ಕೆಜಿ ಹಣ್ಣು ಬರುವ ಮೂಲಕ 60 ಗಿಡದಲ್ಲಿ ಸುಮಾರು ದಿನಕ್ಕೆ 250- 300 ಕೆಜಿ ಹಣ್ಣು ಬರುತ್ತದೆ. ಒಂದು ಗಿಡ ಬೆಳಸಲಿಕ್ಕೆ 1,000 ರೂಪಾಯಿ ಖರ್ಚು ಬರುತ್ತದೆ ಎನ್ನಲಾಗಿದೆ.
25 ರಿಂದ 30 ಕೆಜಿ ತೂಕ ಪ್ಯಾಕ್
ಬೇಡಿಕೆ ಅನುಗುಣವಾಗಿ ಹಣ್ಣುಗಳನ್ನು ಕೀಳಬೇಕಾಗುತ್ತದೆ. ಇದಕ್ಕೆ ಸರಿಯಾದ ಮಾರುಕಟ್ಟೆ ಇಲ್ಲ. ಮಾರಾಟಗಾರರಿಂದ ಬೇಡಿಕೆ ಬಂದಂತೆ ಹಣ್ಣುಗಳನ್ನು ಕಿತ್ತು ಒಂದು ಕ್ರೇಟ್ನಲ್ಲಿ 25 ರಿಂದ 30 ಕೆಜಿ ತೂಕ ಪ್ಯಾಕ್ ಮಾಡಿ ಕೊಡಲಾಗುತ್ತದೆ. ಒಂದು ಕೆಜಿಗೆ ಹೋಲ್ಸೇಲ್ ದರದಲ್ಲಿ 130 ರೂ.ನಂತೆ ಕೊಡಲಾಗುತ್ತದೆ. ಚಿಲ್ಲರೆ ವ್ಯಾಪಾರಿಗಳು ಕೆಜಿಗೆ 200 ರೂಪಾಯಿ ಮಾರಾಟ ಮಾಡುತ್ತಾರೆ.
ಇನ್ನು ಸುದ್ದಿಗಾರರೊಂದಿಗೆ ಮಾತನಾಡಿದ ರೈತ ರವಿಶಂಕರ್, ""ನಮ್ಮ ತೋಟದಲ್ಲಿ ಸಪೋಟ, ಮೊಸಂಬಿ, ಪಪ್ಪಾಯಿ, ಸೀಬೆ, ಮಾವು ಈಗೆ ಅನೇಕ ಬೆಳೆಗಳನ್ನು ಬೆಳೆಯುತ್ತಿದ್ದೇವೆ. ಇದರ ಜೊತೆಗೆ 50 ನೇರಳೆ ಗಿಡಗಳನ್ನು ಬೆಳೆಸಲಾಗಿದೆ. ಎಲ್ಲರೂ ತಿನ್ನುವ ಹಣ್ಣು ಇದಾಗಿದ್ದು, ಆರೋಗ್ಯದ ದೃಷ್ಟಿಯಿಂದ ಶುಗರ್ ಖಾಯಿಲೆಗೆ ಬಹಳ ಉತ್ತಮ ಹಣ್ಣಾಗಿದೆ,'' ಎಂದರು.
ಹಣ್ಣು ಕೀಳುವುದು ದೊಡ್ಡ ಸಮಸ್ಯೆ
"ನಾನು 50 ಗಿಡ ಬೆಳೆಸಿದ್ದು, ನನಗೆ ಪ್ರತಿನಿತ್ಯ 10 ಜನ ಕೂಲಿ ಕಾರ್ಮಿಕರು ಹಣ್ಣು ಕೀಳಲು ಬೇಕಾಗುತ್ತದೆ. ಮಾರುಕಟ್ಟೆಯಲ್ಲಿ 10 ಗಂಟೆಯೊಳಗೆ ಕೊಡಿ ಎನ್ನುತ್ತಾರೆ. ಇದನ್ನು ತಲುಪಿಸುವುದು ತುಂಬಾ ಕಷ್ಟವಾಗುತ್ತದೆ. ಹಣ್ಣು ಕೀಳುವುದು ದೊಡ್ಡ ಸಮಸ್ಯೆಯಾಗಿದೆ. ಸ್ವಲ್ಪ ಕೆಂಪು ಬಣ್ಣದ ಹಣ್ಣು ಕಿತ್ತರೆ ಮಾರುಕಟ್ಟೆಯಲ್ಲಿ ಬೇಡ ಅಂತಾರೆ. ಗಿಡದ ಕೊಂಬೆಗಳು ಸೂಕ್ಷ್ಮವಾಗಿರುತ್ತವೆ. ಹಣ್ಣು ಮೂರರಿಂದ ನಾಲ್ಕು ದಿನ ಮಾತ್ರ ಸೀಮಿತವಾಗಿರುತ್ತದೆ. ಹಣ್ಣುಗಳು ಜಾಸ್ತಿ ನೆಲಕ್ಕೆ ಬೀಳುತ್ತದೆ. ಬಿದ್ದ ಹಣ್ಣು ಡ್ಯಾಮೇಜ್ ಆಗುವುದರಿಂದ ಅದು ಬಳಕೆಗೆ ಬರುವುದಿಲ್ಲ. ಯಾರೂ ಸಹ ಕೊಳ್ಳುವುದಿಲ್ಲ. ರೈತರು ಇದು ಒಂದೇ ನಂಬಿಕೊಳ್ಳಬಾರದು. ಇದರ ಜೊತೆಗೆ ಬೇರೆ ಬೇರೆ ರೀತಿಯ ಹಣ್ಣುಗಳನ್ನು ಬೆಳೆಯಬೇಕು. ನೇರಳೆ ಹಣ್ಣು ಒಂದೇ ನಂಬಿಕೊಂಡು ಜೀವನ ಸಾಗಿಸುವುದು ಕಷ್ಟವಾಗುತ್ತದೆ. ಈ ಬೆಳೆಯಲ್ಲಿ ಕಷ್ಟ-ಸುಖ ಎರಡು ಇದೆ,'' ಎನ್ನುತ್ತಾರೆ ರೈತ ರವಿಶಂಕರ್.