ವಿಶೇಷ ವರದಿ: ರೈತರ ಬೆಂಬಲಕ್ಕೆ ನಿಲ್ಲದ ಸರ್ಕಾರ, ಸಿಡಿದೆದ್ದ ಚಿತ್ರದುರ್ಗದ ರೈತ ದಯಾನಂದ

ಚಿತ್ರದುರ್ಗ, ಜೂನ್ 15: ರೈತರು ಬೆಳೆದ ಬೆಳೆಗಳ ಬೆಂಬಲಕ್ಕೆ ನಿಲ್ಲದ ಸರ್ಕಾರದ ವಿರುದ್ಧ ಚಿತ್ರದುರ್ಗ ಜಿಲ್ಲೆಯ ರೈತನೋರ್ವ ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಪುರ್ಲೆಹಳ್ಳಿ ಗ್ರಾಮದಲ್ಲಿ ನಡೆದಿದೆ.

ರೈತ ದಯಾನಂದ ತನ್ನ ಎಂಟು ಎಕರೆ ಜಮೀನಿನಲ್ಲಿ ನಾಲ್ಕು ಎಕರೆಯಲ್ಲಿ ಸುಮಾರು ಎರಡು ಲಕ್ಷ ಖರ್ಚು ಮಾಡಿ ಕಲ್ಲಂಗಡಿ ಬೆಳೆದಿದ್ದರು. ಆದರೆ ಲಾಕ್‌ಡೌನ್ ಪರಿಣಾಮವಾಗಿ ಕೊಳ್ಳುವವರಿದ್ದಿಲ್ಲ. ಇದೀಗ ಮುಂಗಾರು ಆರಂಭವಾಗಿದ್ದು, ತಂಪು ವಾತಾವರಣಕ್ಕೆ ಯಾರೂ ಹಣ್ಣು ಕೇಳುವವರಿಲ್ಲದೆ ಹಣ್ಣು ಕೊಳೆತು ಹೋಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಷ್ಟದ ಸುಳಿಯಲ್ಲಿ ಸಿಲುಕಿರುವ ರೈತನ ಸಹಾಯಕ್ಕೆ ಬಾರದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಹರಿಬಿಡಲಾಗಿದೆ.

ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ

ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ

"ಯಾಕಪ್ಪಾ ನಮಗೆ ಇಂಥಾ ಕಷ್ಟ ಕೊಟ್ಟಿಯಾ? ನಮಗೆ ಲಾಕ್‌ಡೌನ್ ಅಂತೀಯಾ, ಆದರೆ ನಿಂದು ಬ್ಯುಸಿನೆಸ್ ನಡಿಯುತ್ತಿದೆ. ನಮ್ಮ ರೈತರದು ನೋಡು ಹೇಗೆ ಹಾಳಾಗಿದೆ. ವಿಷ ಕುಡಿಯುವುದು ಒಂದು ತಪ್ಪಿದೆ ಯಡಿಯೂರಪ್ಪ. ಇದಕ್ಕೆ ಏನಾದರೂ ಪರಿಹಾರ ಕೊಡ್ತಿಯಾ, ಅಥವಾ ವಿಷ ಕುಡಿದು ಸಾಯಬೇಕಾ?,'' ಎಂದು ರೈತ ಸಿಎಂ ಯಡಿಯೂರಪ್ಪರಿಗೆ ಪ್ರಶ್ನೆ ಮಾಡಿದ್ದು, "ಯಡಿಯೂರಪ್ಪ ನಿಮಗೆ ವಯಸ್ಸು ಆಗಿದೆ. ನೀವು ಕುರ್ಚಿ ಮೇಲೆ ಕುಳಿತುಕೊಳ್ಳಬಾರದು, ಮನೆಯಲ್ಲಿ ಇರಬೇಕು,'' ಎಂದು ಸಿಎಂ ಬಿಎಸ್‌ವೈಗೆ ರೈತ ಕಿವಿಮಾತು ಹೇಳಿದ್ದಾನೆ. ಅನ್ನದಾತನ ಸಹನೆಯ ಕಟ್ಟೆ ಹೊಡೆದಿದ್ದು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲಾಗಿದೆ. ಉತ್ತಮ ಆಡಳಿತ ನೀಡುತ್ತಾರೆ ಎಂಬ ನಂಬಿಕೆ ನಮಗಿತ್ತು. ಇದು ರೈತಪರ ಸರ್ಕಾರ ಎಂದುಕೊಂಡಿದ್ವಿ, ಆದರೆ ರೈತರ ಸಹಾಯಕ್ಕೆ ಬಾರದ ಸರ್ಕಾರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ರೈತ ಕಿಡಿಕಾರಿದ್ದಾನೆ.

ಮೋದಿ ಬಗ್ಗೆ ನಮಗೆ ಬಹಳ ಗೌರವ ಇತ್ತು

ಮೋದಿ ಬಗ್ಗೆ ನಮಗೆ ಬಹಳ ಗೌರವ ಇತ್ತು

"ನಾವು ಮೋದಿ ಮೋದಿ ಎಂದು ಇಡೀ ದೇಶವೇ ಮತ ನೀಡಿ ಗೆಲ್ಲಿಸಿ ಆಡಳಿತ ಕೊಟ್ವಿ. ಲಾಕ್‌ಡೌನ್ ಮಾಡಿ ರೈತರಿಗೆ ಏನಪ್ಪಾ ಪರಿಹಾರ ಕೊಟ್ಟೆ.? ಮುಂಚೆಯೇ ಲಾಕ್‌ಡೌನ್ ಮಾಡಲಾಗುತ್ತದೆ ಎಂದು ಹೇಳಿದ್ದರೆ ನಾವು ಕಲ್ಲಂಗಡಿ ಬೆಳೆಯುತ್ತಿರಲಿಲ್ಲ. ಈಗ ಬೆಳೆ ಬೆಳೆದಿದ್ದೇವೆ, ಇದನ್ನು ಕೇಳುವವರು ದಿಕ್ಕಿಲ್ಲ. ಹೆಂಡ್ರು, ಮಕ್ಕಳಿಗೆ ಏನು ಕೊಡಬೇಕು, ವಿಷ ಸೇವಿಸುವ ಪರಿಸ್ಥಿತಿ ಬಂದೊದಗಿದೆ ರೈತರ ಕಷ್ಟವನ್ನು ಅರ್ಥ ಮಾಡಿಕೊಳ್ಳಿ ಮೋದಿಯವರೇ,'' ಎಂದರು.

"ದೇಶವನ್ನು ಉದ್ಧಾರ ಮಾಡುತ್ತಾರೆ ಅಂತ ಮೋದಿ ಬಗ್ಗೆ ನಮಗೆ ಬಹಳ ಗೌರವ ಇತ್ತು. ಆದರೆ ಗೌರವ ಕಳೆದುಕೊಂಡಿದ್ದಾರೆ. ಚುನಾವಣೆಯಲ್ಲಿ ಗೆದ್ದ ಬಳಿಕ ವಿದೇಶದಿಂದ ಹಣ ತರುತ್ತೇನೆ ಅಂದೆ ತರಲಿಲ್ಲ. ದುಡ್ಡು ಏನ್ ಮಾಡಿದೆಪ್ಪಾ, ಪ್ರತಿಯೊಬ್ಬರ ಖಾತೆಗೆ ಹದಿನೈದು ಲಕ್ಷ ಹಾಕುವೆ ಅಂತ ಹೇಳಿದೆ ಎಲ್ಲಿ ಹಾಕಿದಿಯಪ್ಪಾ?. ರೈತರನ್ನು ಹಾಳು ಮಾಡುವುದೆನಪ್ಪ ನಿನ್ನ ಬದುಕು. ಇಂಥ ಸರ್ಕಾರ ಯಾಕೆ ಬೇಕು,'' ಎಂದಿದ್ದಾನೆ.

ಸಾಲ ಮನ್ನಾ ಮಾಡ್ತಾರೆ ಅಂದುಕೊಂಡಿದ್ವಿ

ಸಾಲ ಮನ್ನಾ ಮಾಡ್ತಾರೆ ಅಂದುಕೊಂಡಿದ್ವಿ

"ನಾವು ಯಡಿಯೂರಪ್ಪ, ಮೋದಿ ಸಾಲ ಮನ್ನಾ ಮಾಡ್ತಾರೆ ಅಂದುಕೊಂಡಿದ್ವಿ ಮಾಡಲಿಲ್ಲ. ಅದೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರ ಬಡವರು ಬದುಕಲಿ ಎಂದು ರೈತರ ಖಾತೆಗೆ ಇಪ್ಪತ್ತೈದು ಸಾವಿರ ಹಣ ಹಾಕಿ ಸಾಲ ಮನ್ನಾ ಮಾಡಿದರು. ರೈತರ ಖಾತೆಗೆ ಹಣ ಹಾಕ್ತಿವಿ ಅಂದ್ರು, ಲಾಕ್‌ಡೌನ್ ಮಾಡಿದರು. ಪೆಟ್ರೋಲ್, ಡೀಸೆಲ್ ಯಾವುದು ತೆಗೆದುಕೊಂಡರೂ ಬೆಲೆ ಎಲ್ಲವೂ ಡಬಲ್ ಆಗಿದೆ. ನಮ್ಮ ಕಲ್ಲಂಗಡಿಯನ್ನು ಎರಡು ರೂಪಾಯಿಗೆ ಕೇಳುವವರಿಲ್ಲ, ರೈತರ ಬಗ್ಗೆ ಕಾಳಜಿ ಇದ್ದರೆ ಮುಂದೆ ಸಹ ಅಧಿಕಾರ ನಡೆಸುತ್ತಿರಾ, ಇಲ್ಲವಾದರೆ ರಾಜ್ಯದಲ್ಲಿ ಹೇಳೋಕೆ ಹೆಸರು ಇಲ್ಲದಂತೆ ಆಗುತ್ತದೆ ನಿಮ್ಮ ಪಕ್ಷ,'' ಎಂದು ರೈತ ದಯಾನಂದ ಆಕ್ರೋಶ ವ್ಯಕ್ತಪಡಿಸಿದರು.

"ಹೆಂಡ್ರು ಮಕ್ಕಳ ಕಿವಿಯ ಒಡೆವೆಗಳನ್ನು ಬ್ಯಾಂಕಿನಲ್ಲಿ ಅಡವಿಟ್ಟು, ಎರಡು ಲಕ್ಷ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆಯಾಲಾಗಿದೆ. ನನ್ನ ಜಮೀನಿನಲ್ಲಿ ಯಾವತ್ತೂ ಕೂಡ ಈ ರೀತಿಯಾಗಿ ಬೆಳೆ ಕೈ ಕೊಟ್ಟಿರಲಿಲ್ಲ. ಈಗ ಎರಡು ಲಕ್ಷ ಸಾಲಗಾರನಾಗಿದ್ದೇನೆ. ಇವತ್ತು ಕಲ್ಲಂಗಡಿಗೆ ಬೆಲೆ ಇದ್ದಿದ್ದರೆ ನಾನೇ ಸರ್ಕಾರದ ಖಾತೆಗೆ ಎರಡು ಸಾವಿರ ಪ್ರತಿವರ್ಷ ಹಾಕುತ್ತಿದ್ದೆ. ನೀವೇನು ನಮಗೆ ಕೊಡಬೇಡಿ,'' ಎಂದು ರೈತ ದಯಾನಂದ ಹೇಳಿದ್ದಾನೆ.

ಲೀಟರ್ ಪೆಟ್ರೋಲ್‌ಗೆ ನೂರು ರೂ.

ಲೀಟರ್ ಪೆಟ್ರೋಲ್‌ಗೆ ನೂರು ರೂ.

"ರೈತರ ಬೆಳೆಗಳಿಗೆ ತಕ್ಕಂತೆ ಸೂಕ್ತ ಬೆಲೆ ಕೊಡಿ, ಇವತ್ತು ಒಂದು ಎಕರೆಯಲ್ಲಿ ಕಲ್ಲಂಗಡಿ ಬೆಳೆಯಲು 50- 60 ಸಾವಿರ ಖರ್ಚಾಗುತ್ತದೆ. ನಾಲ್ಕು ಎಕರೆಯಲ್ಲಿ 2 ಲಕ್ಷ ರೂ. ಖರ್ಚು ಮಾಡಿ ಕಲ್ಲಂಗಡಿ ಬೆಳೆಯಲಾಗಿದೆ. ಇದರಲ್ಲಿ 50 ಸಾವಿರ ರೂ. ಕೂಡ ಬಂದಿಲ್ಲ. ನಾನು ಹಾಕಿರುವ ಬಂಡವಾಳ ಕೂಡ ಬಂದಿಲ್ಲ. ನನ್ನ ಕಷ್ಟ ಯಾರಿಗೆ ಹೇಳಬೇಕು. ಹೊಲಕ್ಕೆ ಬರಬೇಕು ಎಂದರೆ ಒಂದು ಲೀಟರ್ ಪೆಟ್ರೋಲ್ ಬೇಕು. ಲೀಟರ್ ಪೆಟ್ರೋಲ್‌ಗೆ ನೂರು ರುಪಾಯಿ ದರ ಆಗಿದೆ. ಕಲ್ಲಂಗಡಿ ಹಣ್ಣನ್ನು ಎರಡು ರೂಪಾಯಿಗೆ ಕೇಳುವವರಿಲ್ಲ. ಯಾಕ್ರಪ್ಪ ರೈತರನ್ನು ಅಯ್ಯೋ ಎನಿಸುತ್ತೀರಾ. ಲಾಕ್‌ಡೌನ್ ಮಾಡ್ತೀವಿ ಅಂತ ಹೇಳಿದ್ರೆ ನಾವು ಬೆಳೆಯುತ್ತಿರಲಿಲ್ಲ, ಎಂದು ರೈತ ದಯಾನಂದ್ ಸರ್ಕಾರಕ್ಕೆ ಪ್ರಶ್ನಿಸಿದರು.

ಕಲ್ಲಂಗಡಿ ಬೆಳೆದು ನಷ್ಟ ಅನುಭವಿಸಿದ ರೈತನ ಅಳಲು

ಕಲ್ಲಂಗಡಿ ಬೆಳೆದು ನಷ್ಟ ಅನುಭವಿಸಿದ ರೈತನ ಅಳಲು

"ಇಂತಹ ಸಂದರ್ಭದಲ್ಲಿ ನಾನು ಬದುಕುವುದಕ್ಕೆ ತುಂಬಾ ಕಷ್ಟ ಆಗಿದೆ, ಜೀವನದಲ್ಲಿ ಬಾರಿ ಜಿಗುಪ್ಸೆ ಬಂದಿದೆ. ಸಾಲಗಾರರ ಕಾಟ ಜಾಸ್ತಿ ಆಗಿದ್ದು, ಕೊಟ್ಟವರಿಗೆ ವಾಪಸ್ ಕೊಡಬೇಕು. ವಿಷ ಕುಡಿಯುವುದು ಇಲ್ಲ, ನೇಣು ಹಾಕಿಕೊಳ್ಳುವುದು ಒಂದೇ ಬಾಕಿ ಇರೋದು. ನಮ್ಮ ಮನೆಯಲ್ಲಿ ನಾಲ್ಕು ಜನ ಇದ್ದೇವೆ. ಜೀವನ ನಡೆಸುವುದು ತುಂಬಾ ಕಷ್ಟ ಆಗಿದೆ. ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಬೇಕಾಗುತ್ತದೆ. ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರೇ, ಏನಾದರೂ ಮಾಡಿ ನಮಗೆ ಸಹಾಯ ಮಾಡಿಸಿ. ಹೆಂಡ್ತಿ, ಮಕ್ಕಳು ಬದುಕುತ್ತೇವೆ,'' ಎಂದು ಕಲ್ಲಂಗಡಿ ಬೆಳೆದು ನಷ್ಟ ಅನುಭವಿಸಿದ ರೈತ ದಯಾನಂದ್ ತಮ್ಮ ಅಳಲನ್ನು ತೋಡಿಕೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+