ನಿಲ್ಲದ ಮಳೆಯ ಅವಾಂತರ: ಸಂಕಷ್ಟದಲ್ಲಿ ಈರುಳ್ಳಿ ಬೆಳೆಗಾರರು
ಚಿಕ್ಕಮಗಳೂರು, ಅಕ್ಟೋಬರ್ 24: ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಸುತ್ತಮತ್ತ ಹತ್ತಾರು ಹಳ್ಳಿಗಳಲ್ಲಿ ಈರುಳ್ಳಿ ಬೆಳೆದ ರೈತರು ಇದೀಗ ಅಕ್ಷರಶಃ ಕಣ್ಣೀರು ಹಾಕುತ್ತಿದ್ದಾರೆ.
ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಸುರಿದ ಧಾರಾಕಾರ ಮಳೆ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಅನಿರೀಕ್ಷಿತವಾಗಿ ಸುರಿದ ಭಾರಿ ಮಳೆಗೆ ಜಿಲ್ಲೆಯ ಶಿವನಿ, ಗೌರಪುರ, ಹೆಬ್ಬೂರು, ಮಾಳೇನಹಳ್ಳಿ, ಬಂಕನಕಟ್ಟೆ ಮುಗುಳಿ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಬೆಳೆದ ಈರುಳ್ಳಿ ಸಂಪೂರ್ಣ ಕೊಳೆತು ಹೋಗಿದೆ.
ಚಿಕ್ಕಮಗಳೂರು; ದೇವಿರಮ್ಮನ ಬೆಟ್ಟದ ವಿಶೇಷತೆ ಏನು? ಇಲ್ಲಿದೆ ಸಂಪೂರ್ಣ ವಿವರ
ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ನೆಲದಲ್ಲೇ ಕೊಳೆಯುತ್ತಿದೆ. ಸಾಲ-ಸೋಲ ಮಾಡಿ ಬೆಳೆ ಬೆಳೆದಿದ್ದ ರೈತರು, ಕೊಳೆತು ಹೋದ ಈರುಳ್ಳಿ ಕಂಡು ಕಣ್ಣೀರು ಹಾಕುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದಲೂ ಕಾಫಿನಾಡಿನ ಬಯಲುಸೀಮೆ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ರೈತರು ಬೆಳೆ ಬೆಳೆಯಲು ಹಿಂದೇಟು ಹಾಕುವಂತಹ ಸ್ಥಿತಿ ನಿರ್ಮಾಣವಾಗಿದೆ.
ಮಣ್ಣಲ್ಲಿ ಹೂತು ಹೋದ ಈರುಳ್ಳಿ
ಇನ್ನು ಇತ್ತೀಚಿಗೆ ಸುರಿದ ಭಾರಿ ಮಳೆ ಬಳಿಕ ರೈತರು ತಮ್ಮ ಜಮೀನಿಗೆ ತೆರಳಿ ನೋಡಿದರೆ ಸಾವಿರಾರು ಎಕರೆಯಲ್ಲಿ ಬೆಳೆದ ಈರುಳ್ಳಿ ಕೊಳೆತು ಮಣ್ಣುಪಾಲಾಗಿದೆ. ಈ ರೀತಿಯ ದೃಶ್ಯವನ್ನು ಕಂಡ ರೈತರು ರೈರು ಕಣ್ಣೀರು ಹಾಕಿದ್ದಾರೆ. ಇನ್ನು ಕಿತ್ತು ಹೊಲದಲ್ಲೇ ಜೋಡಿಸಿದ್ದ ಈರುಳ್ಳಿ ಬೆಳೆ ಮತ್ತೆ ಮಣ್ಣಲ್ಲಿ ಹೂತು ಹೋಗಿದೆ. ಇನ್ನುಳಿದ ಸ್ವಲ್ಪ ಮಟ್ಟದ ಬೆಳೆಯನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಮಡುತ್ತಿದ್ದಾರೆ. ಹೀಗಾಗಿ ಈರುಳ್ಳಿ ಬೆಳೆಗಾರರು ಸರ್ಕಾರದ ಮೊರೆ ಹೋಗಿದ್ದಾರೆ.
ಮೂಡಿಗೆರೆ: ದೇವವೃಂದ ಗ್ರಾಮದ ಕಾಫಿ ತೋಟದಲ್ಲಿ ಚಿರತೆ ಸೆರೆ
ಸೂಕ್ತ ಪರಿಹಾರ ನೀಡುವಂತೆ ರೈತರ ಒತ್ತಾಯ
ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಕೈ ಮುಗಿದು ಮನವಿ ಮಾಡಿರುವ ರೈತರು, ಸರ್ಕಾರವೇ ನಮಗೆ ಸೂಕ್ತ ಪರಿಹಾರ ನೀಡಬೇಕು. ಸರ್ಕಾರ ಈಗ ನೀಡಿರುವ ಪರಿಹಾರ ಯಾವುದಕ್ಕೂ ಸಾಲುತ್ತಿಲ್ಲ. ಕೂಡಲೇ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ನಮಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಅಜ್ಜಂಪುರ ಮಾತ್ರವಲ್ಲದೆ ಕಡೂರಿನ ಕೆಲ ಭಾಗದ ಸ್ಥಿತಿ ಕೂಡ ಹೀಗೆ ಆಗಿದೆ. ಅಜ್ಜಂಪುರದಲ್ಲಿ ರೈತರು ಈರುಳ್ಳಿ ಕಳೆದುಕೊಂಡವರು ಕಂಗಾಲಾಗಿದ್ದರೆ, ಎರಡ್ಮೂರು ದಶಕಗಳಿಂದ ಶಾಶ್ವತ ಬರ ಎದುರಿಸ್ತಿದ್ದ ಕಡೂರಿನ ತಾಲೂಕಿನ ರೈತರು ಕಳೆದ ಎರಡ್ಮೂರು ವರ್ಷದ ಮಳೆಗೆ ತತ್ತರಿಸಿದ್ದಾರೆ. ಈವರೆಗೆ ಮಳೆ ಇಲ್ಲದೆ ಕಂಗಾಲಾಗಿದ್ದ ರೈತರು ಈಗ ಮಳೆಯಿಂದ ಆತಂಕಕ್ಕೀಡಾಗಿದ್ದಾರೆ.
ಸಂಕಷ್ಟದಲ್ಲಿ ಕೋಟೆ ನಾಡು ನಾಡು ರೈತರು
ಇನ್ನು ಕೋಟೆನಾಡು ಚಿತ್ರದುರ್ಗದಲ್ಲೂ ಈ ರೀತಿಯ ಪರಿಸ್ಥಿತಿ ಇದೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಚಿತ್ರದುರ್ಗ ಕೋವೆರಹಟ್ಟಿಯ ಈರುಳ್ಳಿ ಬೆಳೆಗಾರರು ತಮ್ಮ ಭೂಮಿಯಲ್ಲಿ ಸುಮಾರು 20ಕ್ಕೂ ಹೆಚ್ಚು ರೈತರು ನೂರಾರು ಎಕರೆಯಲ್ಲಿ ಈರುಳ್ಳಿ ಬೆಳೆ ಬಿತ್ತನೆ ಮಾಡಿದ್ದರು. ಪ್ರತಿ ವರ್ಷದಂತೆ ಈ ಸಲವು ಈರುಳ್ಳಿ ತಮ್ಮ ಕೈಹಿಡಿಯುತ್ತದೆ ಎಂದು ಉತ್ಸುಕರಾಗಿದ್ದರು. ಆದರೆ ಈ ಬಾರಿ ಅಧಿಕ ಮಳೆಯಿಂದಾಗಿ ಸಾವಿರಾರು ಕೆಜಿ ಈರುಳ್ಳಿ ಚೀಲಗಳಲ್ಲಿ ಕೊಳೆತು ಹೋಗಿವೆ.
ಕೊಳೆತ ಈರುಳ್ಳಿ ಗುಂಡಿಯಲ್ಲಿ ಮುಚ್ಚಿದ ರೈತರು
ಚಿತ್ರದುರ್ಗದಲ್ಲಿ ಸುಮಾರು 150 ಹೆಕ್ಟೇರ್ ಪ್ರದೇಶದಲ್ಲಿ ಸಾವಿರ ಸಾವಿರ ಚೀಲಗಟ್ಟಲೆ ಈರುಳ್ಳಿ ಬೆಳೆದಿದ್ದರು. ಈ ಬಾರಿ ಅಧಿಕ ಮಳೆಯಿಂದಾಗಿ ಸಾವಿರಾರು ಕೆಜಿ ಈರುಳ್ಳಿ ಚೀಲಗಳಲ್ಲಿ ಕೊಳೆತು ಹೋಗಿವೆ. ಇನ್ನು ಕೊಳೆತ ಈರುಳ್ಳಿ ಚೀಲಗಳನ್ನು ಜೆಸಿಬಿ ಮೂಲಕ ಗುಂಡಿಗೆ ಹಾಕಿ ಮಣ್ಣು ಮುಚ್ಚಲಾಗಿದೆ. ಪ್ರತಿಯೊಬ್ಬ ರೈತರು 1 ಹೆಕ್ಟೇರ್ ಭೂಮಿಯಲ್ಲಿ ಉತ್ಕೃಷ್ಟವಾದ ಬೆಳೆ ಬೆಳೆದು 1.5ರಿಂದ 2 ಲಕ್ಷ ರೂವರೆಗೆ ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದರು. ಆದರೆ ಈ ಬಾರಿ ಮಳೆ ಹಾಗೂ ಬೆಲೆ ಕುಸಿತದಿಂದಾಗಿ ರೈರು ನಷ್ಟ ಅನುಭವಿಸುವಂತಾಗಿದೆ.