ಅಡಿಕೆ ತೋಟ ಉಳಿಸಲು ಟ್ಯಾಂಕರ್ ನೀರಿನ ಮೊರೆ ಹೋದ ರೈತರು!
ಚಿಕ್ಕಮಗಳೂರು, ಫೆಬ್ರವರಿ 26; ಕರ್ನಾಟಕದಲ್ಲಿ ಬರ ಪರಿಸ್ಥಿತಿಯ ಚಿತ್ರಣ ಈಗ ಜನರ ಅರಿವಿಗೆ ಬರುತ್ತಿದೆ. ಒಂದು ಕಡೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಮತ್ತೊಂದು ಕಡೆ ತೋಟಗಳನ್ನು ಉಳಿಸಿಕೊಳ್ಳುವುದು ಸವಾಲಿನ ಕೆಲಸವಾಗಿದೆ.
ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ 2020 ಬರ ಘೋಷಣೆ ಮಾರ್ಗಸೂಚಿ ಮಾನದಂಡಗಳನ್ವಯ 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ 31 ಜಿಲ್ಲೆಗಳ 236 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳನ್ನು ಬರ ಪಿಡೀತ ತಾಲ್ಲೂಕುಗಳೆಂದು ಸರ್ಕಾರವು ಘೋಷಿಸಿದೆ.

ಬರ ಪರಿಸ್ಥಿತಿ ಕಾರಣ ಅಂತರ್ಜಲಮಟ್ಟ ಕುಸಿದು ಹೋಗಿದ್ದು, ಬೋರ್ವೆಲ್ಗಳು ಬತ್ತಿ ಹೋಗಿವೆ. ಆದ್ದರಿಂದ ಅಡಿಕೆ ತೋಟ, ವಿವಿಧ ಬೆಳೆಗಳನ್ನು ಕಾಪಾಡಿಕೊಳ್ಳುವುದು ರೈತರಿಗೆ ಸವಾಲಾಗಿದೆ.
ಟ್ಯಾಂಕರ್ ಮೊರೆ ಹೋದ ರೈತರು: ಚಿಕ್ಕಮಗಳೂರು ಜಿಲ್ಲೆಯ ಬಯಲುಸೀಮೆ ಭಾಗದಲ್ಲಿ ನೀರಿಗಾಗಿ ಹಾಹಕಾರ ಉಂಟಾಗಿದ್ದು ರೈತರು ತೋಟಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ.
ಅಜ್ಜಂಪುರ ತಾಲೂಕಿನ ಶಿವನಿ, ಚೀರನಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಕೃಷಿ ಹೊಂಡಗಳಿಗೆ ನೀರು ತುಂಬಿಕೊಂಡು ಅದನ್ನು ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ರೈತರು ಬಳಕೆ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಆದರೆ ಅಧಿಕ ಹಣ ಕೊಟ್ಟರು ಸಹ ಸಕಾಲಕ್ಕೆ ನೀರು ಸಿಗದೆ ರೈತರು ಕಂಗಲಾಗಿ ಹೋಗಿದ್ದಾರೆ. ಫೆಬ್ರವರಿ ಅಂತ್ಯದಲ್ಲಿ ಇಂತಹ ಪರಿಸ್ಥಿತಿ ಇದ್ದು, ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ತೋಟ ಉಳಿಯುತ್ತದೆ ಎಂಬ ನಂಬಿಕೆಯೇ ರೈತರಿಗೆ ಇಲ್ಲವಾಗಿದೆ.
ಕೃಷಿ ಹೊಂಡದ ಮೂಲಕ ಅಡಿಕೆ ತೋಟಗಳಿಗೆ ನೀರು ಹಾಯಿಸುತ್ತಿರುವ ರೈತರು ಬೇರೆ ರೈತರ ಬೋರ್ವೆಲ್ನಿಂದ ಹಣ ಕೊಟ್ಟು ನೀರು ಖರೀದಿಸಿ ತೋಟ ಉಳಿಸಿಕೊಳ್ಳಲು ಮುಂದಾಗಿದ್ದಾರೆ. 600-800 ಅಡಿ ಬೋರ್ ವೆಲ್ ಕೊರೆಸಿದರೂ ನೀರು ಸಿಗುತ್ತಿಲ್ಲ. ಈ ನಡುವೆ ಜಿಲ್ಲಾಡಳಿತದಿಂದ ಬೋರ್ವೆಲ್ ಕೊರೆಸದಂತೆ ಆದೇಶ ಹೊರಡಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಡೂರು ಮತ್ತು ಅಜ್ಜಂಪುರ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಅಡಿಕೆ ಮರಗಳು ಸ್ವಲ್ಪ ಮಟ್ಟಿಗೆ ಬರ ತಡೆದುಕೊಳ್ಳುವ ಶಕ್ತಿ ಹೊಂದಿವೆ. ಆದರೆ ಭೂಮಿಯೇ ಕಾದು ಅಂತರ್ಜಲ ಮಟ್ಟ ಕುಸಿದಿರುವಾಗ ನೀರು ಅತ್ಯಗತ್ಯವಾಗಿ ಬೇಕಾಗಿದೆ.
ಈಗ ರೈತರು ಹಣ ಕೊಟ್ಟರೂ ಸರಿಯಾದ ಸಮಯಕ್ಕೆ ಟ್ಯಾಂಕರ್ ನೀರು ಬರುತ್ತಿಲ್ಲ. ಮಧ್ಯರಾತ್ರಿ ಟ್ಯಾಂಕರ್ ಬಂದರೆ ಆಗ ನಿದ್ದೆ ಬಿಟ್ಟು ಬಂದು ಕೃಷಿ ಹೊಂಡಕ್ಕೆ ನೀರು ತುಂಬಿಸುವ ಅನಿವಾರ್ಯತೆ ಎದುರಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಲಿದ್ದು, ಟ್ಯಾಂಕರ್ಗಳಿಗೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಲಿದೆ.












Click it and Unblock the Notifications