ತಮಿಳುನಾಡಿನಿಂದ ಚಾಮರಾಜನಗರ ಜಿಲ್ಲೆಗೆ ಆಗಮಿಸಿದ 40ಕ್ಕೂ ಹೆಚ್ಚು ಕಾಡಾನೆಗಳು, ಬೆಳೆಗಳು ನಾಶ
ಚಾಮರಾಜನಗರ, ಜನವರಿ, 18: ಒಂದು ಆನೆ ಜಮೀನಿಗೆ ಲಗ್ಗೆ ಇಟ್ಟರೇ ರೈತರ ಸ್ಥಿತಿ ಅಯೋಮಯವಾಗುತ್ತದೆ. ಆದರೆ ಇದೀಗ 40-50 ಆನೆಗಳ ಹಿಂಡು ನಿತ್ಯ ಜಿಲ್ಲೆಯ ಹಲವೆಡೆ ಜಮೀನುಗಳಿಗೆ ನುಗ್ಗುತ್ತಿದ್ದು, ಇದರಿಂದ ರೈತರ ಸ್ಥಿತಿ ಚಿಂತಾಜನಕವಾಗಿದೆ.
ಚಾಮರಾಜನಗರ ತಾಲೂಕಿನ ಅರಕಲವಾಡಿ, ಹೊನ್ನಹಳ್ಳಿ, ಹೊನ್ನಹಳ್ಳಿ ಹುಂಡಿ, ವಡ್ಗಲ್ಪುರ ಸೇರಿದಂತೆ ಕಾಡಂಚಿನ ಗ್ರಾಮಗಳಿಗೆ ತಮಿಳುನಾಡು ಭಾಗದಿಂದ ಗಜಪಡೆ ನಿತ್ಯ ದಾಂಗುಡಿ ಇಡುತ್ತಿದೆ. ಅಲ್ಲದೇ ತೆಂಗು, ಬಾಳೆ ಸೇರಿದಂತೆ ಇನ್ನಿತರ ಬೆಳೆಗಳನ್ನು ಸಹ ಆನೆಗಳು ನಾಶ ಮಾಡುತ್ತಿವೆ. ಇದರಿಂದ ಜಿಲ್ಲೆಯ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಜಗಳೂರು; ಉಡಾಫೆ ಉತ್ತರ ನೀಡಿದ ಎಇಇಗೆ ರೈತರಿಂದ ಬಿತ್ತು ಗೂಸಾ
ಚಾಮರಾಜನಗರ ತಾಲೂಕಿನ ಅರಕಲವಾಡಿ ಸುತ್ತಮುತ್ತಲಿನ ಗ್ರಾಮಗಳು ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶಕ್ಕೆ ಒಳಪಡಲಿದ್ದು, ತಮಿಳುನಾಡಿನ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದ ಗಡಿಭಾಗದಲ್ಲಿ ಇದು ಇದೆ. ಆನೆ ಕಂದಕ, ರೈಲ್ವೆ ಕಂಬಿ ತಡೆಗೋಡೆ ಇಲ್ಲದಿರುವ ಪರಿಣಾಮ ತಮಿಳುನಾಡಿನ ಕಾಡಿನಿಂದ ರಾಜ್ಯದ ಜಮೀನುಗಳಿಗೆ 40-50 ಆನೆಗಳ ಗುಂಪು ದಾಂಗುಡಿ ಇಟ್ಟು ರೈತರ ಕಣ್ಣಲ್ಲಿ ನೀರು ತರಿಸುತ್ತಿದೆ.
ತಮಿಳುನಾಡು ಅರಣ್ಯ ಇಲಾಖೆಯೊಂದಿಗೆ ರಾಜ್ಯದ ಅಧಿಕಾರಿಗಳು ಹೊಂದಾಣಿಕೆ ಸಾಧಿಸದಿರುವುದು, ನಿರಂತರ ಪ್ಯಾಟ್ರೋಲಿಂಗ್ ಮಾಡದಿರುವುದು ಹಾಗೂ ಸಿಬ್ಬಂದಿ ಕೊರತೆ ಜನರನ್ನು ಹೈರಣಾಗಿಸಿದೆ. ಈ ನಡುವೆ ಸರ್ಕಾರ ಕೊಡುತ್ತಿರುವ ಪರಿಹಾರದ ಮೊತ್ತವೂ ಯಾವುದಕ್ಕೂ ಸಾಲುತ್ತಿಲ್ಲ ಎಂದು ಸ್ಥಳೀಯ ರೈತರು ಆಕ್ರೋಶ ಹೊರಹಾಕಿದ್ದಾರೆ.
ಕೆ.ಕೆ. ಹುಂಡಿಯಲ್ಲಿ ಈರುಳ್ಳಿ ನಾಟಿ: 80 ದಿನ ಕಳೆದರೂ ಬಾರದ ಫಸಲು, ಅನ್ನದಾತ ಕಂಗಾಲು
ಆನೆಗಳ ದಾಳಿಯಿಂದ ಬೇಸತ್ತ ಜನ
ಚಾಮರಾಜನಗರ ತಹಶೀಲ್ದಾರ್ ಬಸವರಾಜು ಹಾಗೂ ಬಿಆರ್ಟಿ ಅಧಿಕಾರಿಗಳ ವಿರುದ್ಧ ವಡ್ಗಲ್ ಪುರದ ಗ್ರಾಮಸ್ಥರು ತರಾಟೆ ತೆಗೆದುಕೊಂಡ ಘಟನೆ ಮಂಗಳವಾರ ನಡೆದಿದೆ. ಆನೆಗಳ ದಾಳಿಯನ್ನು ನಿಯಂತ್ರಿಸಲು ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ. ಗ್ರಾಮ ವಾಸ್ತವ್ಯದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ಗಮನ ಸೆಳೆದರೂ ಯಾವುದೇ ಪ್ರಯೋಜನ ಆಗದಿದ್ದರಿಂದ ರೈತರು ಆಕ್ರೋಶ ಹೊರಹಾಕಿದ್ದಾರೆ.
ತಮಿಳುನಾಡಿನಿಂದ ಆಗಮಿಸಿದ ಗಜಪಡೆ
ಚಾಮರಾಜನಗರ ಶಾಸಕ ಸಿ. ಪುಟ್ಟರಂಗಶೆಟ್ಟಿ ಕಾಡಾನೆ ದಾಳಿ ಪ್ರದೇಶಗಳಿಗೆ ಭೇಟಿ ನೀಡಿ ಮಾತನಾಡಿದ್ದು, ತಮಿಳುನಾಡು ಭಾಗದಿಂದ ಬರುವ ಕಾಡಾನೆಗಳು ಈ ಭಾಗದ ಬೆಳೆಗಳನ್ನು ನಾಶ ಮಾಡುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಹಾಗೆಯೇ ಗಸ್ತು ನಡೆಸಬೇಕು. ಆನೆಗಳ ದಾಳಿಯಿಂದ ನಾಶವಾಗಿರುವ ಬೆಳೆಗಳಿಗೆ ಸಮರ್ಪಕವಾಗಿ ಪರಿಹಾರ ನೀಡಬೇಕು. ಆನೆ ಸೇರಿದಂತೆ ಇತರೆ ಪ್ರಾಣಿಗಳ ಹಾವಳಿಯನ್ನು ತಡೆಯಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಪರಿಹಾರ ಹೆಚ್ಚಿಸುವಂತೆ ರೈತರ ಒತ್ತಾಯ
ಅರಣ್ಯ ಸಚಿವರಾಗಿದ್ದ ಉಮೇಶ್ ಕತ್ತಿ ನಿಧನರಾದ ಬಳಿಕ ಆ ಖಾತೆಯೂ ಸಿಎಂ ಅವರ ಬಳಿಯೇ ಇದೆ. ಇದರಿಂದ ತ್ವರಿತ ಕ್ರಮಗಳು ಕೈಗೊಳ್ಳಲಾಗುತ್ತಿಲ್ಲ. ಅತಿ ಹೆಚ್ಚು ಆನೆಗಳಿರುವ ಚಾಮರಾಜನಗರವನ್ನು ಆನೆ ಟಾಸ್ಕ್ ಫೋರ್ಸ್ ಯೋಜನೆಯಿಂದ ಕೈಬಿಟ್ಟಿದ್ದಾರೆ. ತೆಂಗು ನಾಶವಾದರೇ ಒಂದು ಸಸಿಗೆ 400-500 ರೂಪಾಯಿ ಪರಿಹಾರ ಕೊಡುತ್ತಿದ್ದು, ಇದು ಯಾವುದಕ್ಕೂ ಸಾಲುತ್ತಿಲ್ಲ. ಒಂದು ಸಸಿಗೆ ಕನಿಷ್ಠ 4,000-5,000 ಸಾವಿರ ರೂಪಾಯಿ ಪರಿಹಾರ ಕೊಡಬೇಕು. 3-4 ವರ್ಷ ಸಾಕಿದ ಸಸಿಗಳಿಗೆ 500 ರೂಪಾಯಿ ಕೊಟ್ಟರೇ ಪ್ರಯೋಜನವಿಲ್ಲ ಎಂದು ಕಿಡಿಕಾರಿದ್ದಾರೆ.
ಬಿಆರ್ಟಿ ನಿರ್ದೇಶಕಿ ಹೇಳಿದ್ದೇನು?
ಸತ್ಯಮಂಗಲಂ ಅರಣ್ಯ ಪ್ರದೇಶ ಕಾಡಿಗೆ ಹೊಂದಿಕೊಂಡಂತೆ ಕಂದಾಯ ಭೂಮಿ ಇದೆ. ಇದರಿಂದಾಗಿ, ಕಂದಕ ನಿರ್ಮಿಸಲು ಆಗುತ್ತಿಲ್ಲ, ರೈತರು ಒಪ್ಪಿಗೆ ಸೂಚಿಸಿ ಭೂಮಿ ಬಿಟ್ಟರೆ ಕಂದಕ ನಿರ್ಮಿಸಬಹುದು. ಈ ಬಗ್ಗೆ ಪಿಸಿಸಿಎಫ್ ಅವರಿಗೆ ತಿಳಿಸಿ ತಮಿಳುನಾಡು ಅರಣ್ಯ ಇಲಾಖೆ ಜೊತೆ ಪತ್ರ ವ್ಯವಹಾರ ನಡೆಸಲಾಗುವುದು ಎಂದು ಬಿಆರ್ಟಿ ನಿರ್ದೇಶಕಿ ದೀಪಾ ಕಂಟ್ರಾಕ್ಟರ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಇಷ್ಟು ದಿನ ತಮಿಳುನಾಡಿನಿಂದ ಕೇವಲ ನೀರಿನ ತಕರಾರನ್ನಷ್ಟೇ ಅನುಭವಿಸಬೇಕಾಗಿತ್ತು. ಆದರೆ, ಇದೀಗ ಗಜ ಕಂಟಕವೂ ಸೃಷ್ಟಿಯಾಗಿದ್ದು, ಕಾಡಂಚಿನ ರೈತರು ಆತಂಕಕ್ಕೆ ಒಳಗಾಗಿದ್ದಾರೆ.