Cardamom: ಏಲಕ್ಕಿ ಬೆಳೆಗಾರರಿಗೆ ಶುಕ್ರದೆಸೆ ಶುರು: ಹೇಗೆ ಗೊತ್ತಾ?
ಮಡಿಕೇರಿ, ನವೆಂಬರ್ 19: ಒಂದು ಕಾಲದಲ್ಲಿ ಕೊಡಗಿನ ಬಹುಮುಖ್ಯ ವಾಣಿಜ್ಯ ವಹಿವಾಟಿಗೆ ಕಾರಣವಾಗಿದ್ದ ಏಲಕ್ಕಿ ಕಳೆದ ಎರಡು ಮೂರು ದಶಕಗಳಿಂದೀಚೆ ಸಂಪೂರ್ಣ ಮಾಯವಾಗಿದ್ದು, ಭಾಗಶಃ ಉಳಿದುಕೊಂಡಿದೆ. ಇದರ ನಿರ್ವಹಣೆ ಮತ್ತು ಬೆಲೆ ಕುಸಿತದ ಕಾರಣದಿಂದಾಗಿ ಹೆಚ್ಚಿನ ಬೆಳೆಗಾರರು ದೂರ ಸರಿದು ಕಾಫಿ ತೋಟದ ಕಡೆಗೆ ಮುಖ ಮಾಡಿದ್ದರು. ಇದೀಗ ಏಲಕ್ಕಿಗೆ ಉತ್ತಮ ದರ ದೊರೆಯಲಾರಂಭಿಸಿದ್ದು, ಏಲಕ್ಕಿ ಬೆಳೆಗಾರನಿಗೆ ಶುಕ್ರದೆಸೆ ಆರಂಭವಾಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದೆ.
ಸದ್ಯ ಕೊಡಗಿನಲ್ಲಿ ವಾಣಿಜ್ಯ ಬೆಳೆಗಳದ್ದೇ ಭರಾಟೆಯಾಗಿದ್ದು, ಈಗಾಗಲೇ ಕಾಫಿ, ಕರಿಮೆಣಸಿಗೆ ಉತ್ತಮ ಬೆಲೆ ದೊರೆಯುತ್ತಿದೆ. ಇದರ ಜೊತೆಗೆ ಏಲಕ್ಕಿಗೂ ಉತ್ತಮ ದರ ದೊರೆಯುತ್ತಿರುವುದು ಬೆಳೆಗಾರರಲ್ಲಿ ಆಶಾಭಾವನೆ ಮೂಡಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ದರ ಹೆಚ್ಚುವ ಸಾಧ್ಯತೆಯಿದ್ದು ಕೆಜಿ 3,500ರಷ್ಟು ಬೆಲೆ ಬರಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಈ ಹಿಂದೆ ಇದ್ದ ಏಲಕ್ಕಿ ತೋಟವನ್ನು ಕಾಫಿ ತೋಟವನ್ನಾಗಿ ಪರಿವರ್ತಿಸಿದ ಬೆಳೆಗಾರ ಅಚ್ಚರಿ ಪಡುತ್ತಿದ್ದಾನೆ.

ಕಳೆದ ಕೆಲವು ದಶಕಗಳ ಹಿಂದೆ ಸೂಕ್ತ ಮಾರುಕಟ್ಟೆಯಿಲ್ಲದೆ ಏಲಕ್ಕಿ ಬೆಳೆಯ ಸಹವಾಸವೇ ಬೇಡವೆಂದು ದೂರವಿದ್ದ ಬೆಳೆಗಾರ ಈಗ ಬೆಲೆ ಏರಿಕೆ ನೋಡಿ ಅಚ್ಚರಿಗೊಂಡಿದ್ದಾನೆ. ಏಕೆಂದರೆ, ಸಂಬಾರ ರಾಣಿ ಏಲಕ್ಕಿಗೆ ಈಗ ಎಲ್ಲಿಲ್ಲದ ಬೇಡಿಕೆ. ಮಾರುಕಟ್ಟೆಯಲ್ಲಿ ಕೆಜಿಯೊಂದಕ್ಕೆ ಸುಮಾರು 2500 ರಿಂದ 2800ಕ್ಕೂ ಹೆಚ್ಚಿನ ಬೆಲೆ ದೊರೆಯುತ್ತಿದೆ ಇದು ಏಲಕ್ಕಿ ಬೆಳೆಗಾರರಲ್ಲಿ ಆಶಾಭಾವನೆ ಮೂಡಿಸಿದೆ.
ಏಲಕ್ಕಿ ಕೃಷಿ ನುಂಗಿದ ಕಾಫಿ ತೋಟ
ಕೊಡಗಿನ ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆಗಾರರ ಜೀವನಾಡಿಯಾಗಿದ್ದ ಏಲಕ್ಕಿ ಇತ್ತೀಚಿನ ವರ್ಷಗಳಲ್ಲಿ ನಿರ್ಲಕ್ಷ್ಯಕ್ಕೊಳಗಾಗಿತ್ತು. ಮೇಲಿಂದ ಮೇಲೆ ಬಾಧಿಸುತ್ತಿದ್ದ ಕಟ್ಟೆರೋಗ, ಬೆಲೆಕುಸಿತ, ಹವಾಮಾನದ ವೈಪರೀತ್ಯದಿಂದಾಗಿ ಏಲಕ್ಕಿ ಬೆಳೆಯ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದ ಬೆಳೆಗಾರ ಅನ್ಯ ಮಾರ್ಗವಿಲ್ಲದೆ ಕಾಫಿ ಬೆಳೆಯತ್ತ ಮುಖ ಮಾಡಿದ್ದನು. ಹೀಗಾಗಿ ಏಲಕ್ಕಿ ಬೆಳೆಯುತ್ತಿದ್ದ ನೂರಾರು ಏಕರೆ ಪ್ರದೇಶ ಕಾಫಿ ತೋಟವಾಗಿ ಮಾರ್ಪಾಡಾಗಿತ್ತು.

ಜಿಲ್ಲೆಯ ಅಧಿಕ ಮಳೆ ಬೀಳುವ ಕೆಲವು ಪ್ರದೇಶಗಳಲ್ಲಿ ಕಾಫಿ ಬೆಳೆ ಬೆಳೆಯಲು ಸಾಧ್ಯವಾಗದೆ ಇರುವುದರಿಂದ ಇಲ್ಲಿನ ಬೆಳೆಗಾರ ಈಗಲೂ ಏಲಕ್ಕಿ ಬೆಳೆಯುತ್ತಿದ್ದಾರೆ. ಕಳೆದೊಂದು ದಶಕದಿಂದಲೂ ಏಲಕ್ಕಿ ಬೆಳೆಗಾರನದ್ದು ಹೋರಾಟದ ಬದುಕಾಗಿತ್ತು. ಬೆಲೆಕುಸಿತ ಇನ್ನಿಲ್ಲದಂತೆ ಕಾಡಿತ್ತು. ಆದರೆ ಕಳೆದೊಂದು ವರ್ಷದಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾದುದರಿಂದ ಇಲ್ಲಿನ ಏಲಕ್ಕಿಗೆ ಹೆಚ್ಚಿನ ದರ ಲಭ್ಯವಾಗತೊಡಗಿದೆ.
ಏಲಕ್ಕಿಗೆ ಇನ್ನಷ್ಟು ಬೆಲೆ ಹೆಚ್ಚಳ
ಇದೀಗ ಉತ್ತಮ ಬೆಲೆ ದೊರೆಯುತ್ತಿದ್ದು, ಬೆಳೆಗಾರರಲ್ಲಿ ಆಶಾಭಾವನೆ ಮೂಡಿದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಲೆ ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಏಕೆಂದರೆ ಅಂತರಾಷ್ಟ್ರೀಯ ಮಾರುಕಟ್ಟೆಗೆ ಗ್ವಾಟೆಮಾಲದಿಂದ ಹೆಚ್ಚಿನ ಪ್ರಮಾಣದಲ್ಲಿ ಏಲಕ್ಕಿ ಹರಿದು ಬರುತ್ತಿರುವುದರಿಂದಾಗಿ ಭಾರತದ ಏಲಕ್ಕಿಗೆ ಬೇಡಿಕೆ ಕಡಿಮೆಯಾಗಿತ್ತು ಆದರೆ ಈ ಬಾರಿ ಅಲ್ಲಿ ಏಲಕ್ಕಿ ಬೆಳೆ ನಾಶವಾಗಿರುವುದರಿಂದ ಆಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ಏಲಕ್ಕಿಗೆ ಹೆಚ್ಚಿನ ಬೇಡಿಕೆಯಿದ್ದು, ಮುಂದಿನ ವರ್ಷಕ್ಕೆ ಈಗಲೇ ಅಲ್ಲಿಂದ ಬೇಡಿಕೆ ಬರುತ್ತಿದೆ.
ಗ್ವಾಟೆಮಾಲದಿಂದ ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗುತ್ತಿತ್ತು. ಆದರೆ ಪ್ರತಿಕೂಲದ ವಾತಾವರಣದಿಂದಾಗಿ ಏಲಕ್ಕಿ ಅಲ್ಲಿ ನಾಶವಾಗಿದೆ. ವಿಶ್ವದಲ್ಲಿ ಏಲಕ್ಕಿ ಬೆಳೆಯುವುದರಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದ್ದರೂ ಇಲ್ಲಿಂದ ರಫ್ತಾಗುವ ಪ್ರಮಾಣ ಕಡಿಮೆಯಿದೆ. ಹೆಚ್ಚಿನ ಬಳಕೆ ದೇಶದೊಳಗೆ ಆಗುತ್ತಿದೆ ಎನ್ನಲಾಗಿದೆ. ಇನ್ನು ಭಾರತದಲ್ಲಿ ಏಲಕ್ಕಿಯನ್ನು ಕೇರಳವು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದೆ. ಹೀಗಾಗಿ ದೇಶದಲ್ಲಿ ಯಾವುದೇ ರಾಜ್ಯದಲ್ಲಿ ಏಲಕ್ಕಿ ಬೆಳೆಯುತ್ತಿದ್ದರೂ ಆ ಬೆಳೆಗಾರನಿಗೆ ಮುಂದಿನ ದಿನಗಳಲ್ಲಿ ಉತ್ತಮ ದರ ದೊರೆಯುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications