ಮಂಡ್ಯದಲ್ಲಿ ಗಿಡದಲ್ಲೇ ಒಣಗಿ ಹೋಗುತ್ತಿದೆ ಲಕ್ಷಾಂತರ ಕ್ಯಾಪ್ಸಿಕಂ ಬೆಳೆ
ಮಂಡ್ಯ, ಏಪ್ರಿಲ್ 10: ಬೇಸಿಗೆ ಸಮಯದಲ್ಲಿ ತಾವು ಬೆಳೆದ ಬೆಳೆಗೆ ಒಂದಷ್ಟು ಬೇಡಿಕೆ ಬಂದರೆ ಆದಾಯ ಪಡೆದು ಬದುಕು ಹಸನು ಮಾಡಿಕೊಳ್ಳಬಹುದೆಂದು ನಂಬಿದ್ದ ಬಹುತೇಕ ರೈತರ ಬದುಕು ಅಯೋಮಯವಾಗಿದೆ.
Recommended Video
ಹಲವು ವರ್ಷಗಳ ಕಾಲ ಬರದಿಂದ ತತ್ತರಿಸಿದ್ದ ರೈತರು ಕಳೆದ ಎರಡು ವರ್ಷಗಳಿಂದ ಮುಂಗಾರು ಉತ್ತಮವಾಗಿರುವ ಕಾರಣ, ಕೆರೆಕಟ್ಟೆಗಳು ತುಂಬಿದ್ದರಿಂದ ಅಂತರ್ಜಲ ಮಟ್ಟ ಹೆಚ್ಚಿದ್ದರಿಂದ ಧೈರ್ಯ ಮಾಡಿ ಒಂದಷ್ಟು ಆದಾಯ ಬರುವ ಬೆಳೆಯನ್ನು ಬೆಳೆದಿದ್ದರು.
ಅವುಗಳೆಲ್ಲವೂ ಇದೀಗ ಕೊಯ್ಲಿಗೆ ಬಂದಿವೆ. ಕೊರೊನಾ ವೈರಸ್ ಭೀತಿಯಿಂದ ಲಾಕ್ ಡೌನ್ ಆಗಿರುವ ಕಾರಣದಿಂದಾಗಿ ಮೊದಲೇ ಕೆಲವು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಬೆಳೆ ಬೆಳೆದವರೆಲ್ಲ ಸಂಕಷ್ಟಕ್ಕೆ ಸಿಲುಕಿಕೊಳ್ಳುವಂತಾಗಿದೆ.

ಕ್ಯಾಪ್ಸಿಕಂ ಬೆಳೆದ ಜಯಲಕ್ಷ್ಮಮ್ಮ
ಇವರ ಪೈಕಿ ಕ್ಯಾಪ್ಸಿಕಂ ಬೆಳೆದ ಜಿಲ್ಲೆಯ ಭಾರತೀನಗರ ಸಮೀಪದ ಬನ್ನಹಳ್ಳಿ ಗ್ರಾಮದ ರೈತ ಮಹಿಳೆ ಜಯಲಕ್ಷ್ಮಮ್ಮ ಅವರ ಗೋಳು ಹೇಳತೀರದಂತಾಗಿದೆ. ಎಲ್ಲವೂ ಸರಿಯಾಗಿ ಇದ್ದಿದ್ದರೆ ಅವರಿಗೆ ಸುಮಾರು ಮೂವತ್ತು ಲಕ್ಷಕ್ಕೂ ಹೆಚ್ಚು ಆದಾಯ ಬರಬೇಕಿತ್ತು. ಆದರೆ ಈಗ ಒಪ್ಪಂದ ಮಾಡಿಕೊಂಡ ಕಂಪನಿಯೂ ಕೊಂಡುಕೊಳ್ಳದೆ, ಮಾರುಕಟ್ಟೆಗೆ ಸಾಗಿಸಲಾಗದೆ ಬೆಳೆದ ಬೆಳೆ ನಾಶವಾಗುವುದನ್ನು ನೋಡಿಕೊಂಡು ಕಣ್ಣೀರಿಡುತ್ತಿದ್ದಾರೆ.

ಹೊರ ರಾಜ್ಯಕ್ಕೆ ಸರಬರಾಜು ಮಾಡಬೇಕಿತ್ತು
ಜಯಲಕ್ಷ್ಮಮ್ಮ ಅವರು ಬನ್ನಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದು, ಕೊಕ್ಕರೆಬೆಳ್ಳೂರು ಗ್ರಾಮದಲ್ಲಿ ತಮ್ಮ ಜಮೀನಿನಲ್ಲಿ ಪಾಲಿಮರ್ ಹೌಸ್ ನಿರ್ಮಾಣ ಮಾಡಿದ್ದಾರೆ. ಒಂದು ಎಕರೆ ಪ್ರದೇಶದಲ್ಲಿ ಅವರು ಕಲರ್ ಕ್ಯಾಪ್ಸಿಕಂ (ದಪ್ಪ ಮೆಣಸಿನಕಾಯಿ) ಬೆಳೆದಿದ್ದರು. ಇದನ್ನು ಬೆಳೆಯುವುದು ಅಷ್ಟು ಸುಲಭದ ಕೆಲಸವಲ್ಲ. ಅದಕ್ಕೆ ಗೊಬ್ಬರ ನೀರು ಹಾಕಿ ಜತನದಿಂದಲೇ ಪೋಷಿಸಿದ್ದರು. ಇವರು ಬೆಳೆದ ಕ್ಯಾಪ್ಸಿಕಂಗೆ ರಾಜ್ಯದಲ್ಲಿ ಮಾತ್ರವಲ್ಲದೆ, ದೆಹಲಿ, ಪೂನಾ, ಕೊಲ್ಕತ್ತಾ ಸೇರಿದಂತೆ ಹಲವು ರಾಜ್ಯಗಳಿಂದ ಬೇಡಿಕೆ ಬರುತ್ತಿದ್ದರಿಂದ ಅಲ್ಲಿಗೆ ಸರಬರಾಜು ಮಾಡಲಾಗುತ್ತಿತ್ತು.

ಗಿಡದಲ್ಲಿಯೇ ಒಣಗುತ್ತಿರುವ ಬೆಳೆ
ಈ ಬಾರಿ ಅವರು ಬೆಳೆದಿದ್ದ ಕಲರ್ ಕ್ಯಾಪ್ಸಿಕಂ ಖರೀದಿ ಮಾಡಲು ತ್ರಿಜಿ ಅಂಡ್ ಕಂಪನಿ ಮುಂದೆ ಬಂದಿತ್ತು. ಹೀಗಾಗಿ ಅವರೊಂದಿಗೆ ಒಪ್ಪಂದ ಮಾಡಿಕೊಂಡು ಬೆಳೆ ಬೆಳೆದಿದ್ದರು. ಬೆಳೆ ಕೊಯ್ಲಿಗೂ ಬಂದಿತ್ತು. ಇಷ್ಟರಲ್ಲೇ ಕೊಯ್ಲು ಮಾಡಿ ಕಳುಹಿಸಬೇಕಾಗಿತ್ತು. ಆದರೆ ಕಳೆದ ಎರಡು ವಾರಗಳಿಂದ ಲೌಕ್ ಡೌನ್ ಆಗಿದ್ದರಿಂದ ಖದೀರಿದಾರರಿಲ್ಲದೆ, ಗಿಡದಲ್ಲಿಯೇ ಒಣಗುತ್ತಿದ್ದು, ಸುಮಾರು ಮೂವತ್ತು ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆಯಂತೆ.

ಕೈಗೆ ಬಂದಿದ್ದು ಬಾಯಿಗೆ ಬಂದಿಲ್ಲ
ಕ್ಯಾಪ್ಸಿಕಂ ಅನ್ನು ಜಯಲಕ್ಷ್ಮಮ್ಮ ಅವರು ವೈಜ್ಞಾನಿಕವಾಗಿ ಬೆಳೆದಿದ್ದರು. ಜತೆಗೆ ಬೆಳೆ ಬೆಳೆಯಲು ಬ್ಯಾಂಕ್ನಿಂದ ಲಕ್ಷಾಂತರ ರೂಪಾಯಿ ಸಾಲ ಪಡೆದಿದ್ದರು. ಪ್ರತಿನಿತ್ಯ ಔಷಧ ಸಿಂಪಡಣೆ, ಕಾರ್ಮಿಕರಿಗೆ ಕೂಲಿ ಹೀಗೆ ಹಣ ಖರ್ಚು ಮಾಡಿದ್ದರು. ಕಷ್ಟಪಟ್ಟು ದುಡಿದುದಕ್ಕೆ ತಕ್ಕ ಪ್ರತಿಫಲ ಎಂಬಂತೆ ಫಸಲು ಉತ್ತಮವಾಗಿಯೇ ಬಂದಿದ್ದು, ಸುಮಾರು 20 ಟನ್ ಕ್ಯಾಪ್ಸಿಕಂ ಬೆಳೆದು ನಿಂತಿತ್ತು. ಆದರೆ ಈಗಿನ ಪರಿಸ್ಥಿತಿಯಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಸಂಪೂರ್ಣ ನಷ್ಟ ಅನುಭವಿಸಿರುವ ಜಯಲಕ್ಷ್ಮಮ್ಮ ಮುಂದೇನು ಮಾಡುವುದು ಎಂಬ ಚಿಂತೆಯಲ್ಲಿದ್ದಾರೆ. ಸಂಬಂಧಿಸಿದವರು ನೆರವಿಗೆ ಧಾವಿಸಿ ಸಕಾಲದಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಬೇಡಿಕೊಳ್ಳುತ್ತಿದ್ದಾರೆ.












Click it and Unblock the Notifications