Nandini Milk Price Hike : ನಂದಿನಿ ಹಾಲಿನ ದರ ಹೆಚ್ಚಳಕ್ಕೆ ಕಾಯುತ್ತಿರುವ ಕೆಎಂಎಫ್: ಒಪ್ಪಿಗೆ ಕೊಡುವುದೇ ಸರ್ಕಾರ?
ಬೆಂಗಳೂರು, ಆಗಸ್ಟ್ 18: ದೇಶದ ಪ್ರಮುಖ ಹಾಲು ಒಕ್ಕೂಟವಾದ ಅಮುಲ್ ಮಂಗಳವಾರ ಹಾಲಿನ ದರವನ್ನು 2 ರುಪಾಯಿ ಹೆಚ್ಚಿಸಿದ ನಂತರ, ನಂದಿನಿ ಉತ್ಪನ್ನಗಳನ್ನು ಹೊರತರುವ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಕೂಡ ಹಾಲಿನ ದರ ಹೆಚ್ಚಳ ಮಾಡುತ್ತದೆಯೇ ಎನ್ನುವ ಪ್ರಶ್ನೆ ಎದುರಾಗಿದೆ. ಹಾಲಿನ ದರ ಹೆಚ್ಚಿಸುವ ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಇಡಲಾಗಿದ್ದು, ಅದು ಬಾಕಿ ಉಳಿದಿದೆ ಎಂದು ಮೂಲಗಳು ತಿಳಿಸಿವೆ.
ಹಾಲಿನ ಬೆಲೆ ಏರಿಕೆಯಾಗಲಿ ಅಥವಾ ಸಂಗ್ರಹಣೆ ಹೆಚ್ಚಾಗಲಿ, ಅತ್ಯಂತ ಸ್ಪರ್ಧಾತ್ಮಕ ಹಾಲು ಉತ್ಪಾದನಾ ಮಾರುಕಟ್ಟೆಯಲ್ಲಿ ಹಾಲು ಉತ್ಪಾದಕ ರೈತನೇ ಅಂತಿಮ ಫಲಾನುಭವಿ ಆಗಿರುತ್ತಾನೆ. ನಂದಿನಿ ಹಾಲಿನ ಬೆಲೆಯಲ್ಲಿ 2 ರುಪಾಯಿ ಹೆಚ್ಚಳವಾದರೆ ಶೇಕಡ 80 ರಷ್ಟು ರೈತರಿಗೆ ಹೋಗುತ್ತದೆ, ಎಂದು ಎಂದು ಡೈರಿ ತಜ್ಞರು ಹೇಳಿದರು.
ಈ ಕುರಿತು ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹಾಗೂ ಮಂಡಳಿಯೊಂದಿಗೆ ಚರ್ಚಿಸುತ್ತೇವೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್ ತಿಳಿಸಿದ್ದಾರೆ.
ರೈತ ಸಂಘದ ಮುಖಂಡ ಕುರುಬೂರು ಶಾಂತಕುಮಾರ್ ಮಾತನಾಡಿ, "ಹೈನುಗಾರಿಕೆ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಹಲವು ಯೋಜನೆಗಳು ಕೇವಲ ಕಾಗದದಲ್ಲಿಯೇ ಉಳಿದಿರುವುದರಿಂದ ನಿಜವಾದ ರೈತರಿಗೆ ಪ್ರಯೋಜನವಾಗಿಲ್ಲ" ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕೆಎಂಎಫ್ನಿಂದ 5ನೇ ಬಾರಿ ಪ್ರಸ್ತಾವನೆ ಸಲ್ಲಿಕೆ
ಪ್ರತಿ ಲೀಟರ್ ಹಾಲಿಗೆ 5 ರುಪಾಯಿ ಹೆಚ್ಚಳ ಮಾಡಬೇಕೆಂದು ಕೆಎಂಎಫ್ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಏಪ್ರಿಲ್ನಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಬೆಲೆ ಏರಿಕೆ ಕುರಿತು ಮನವರಿಕೆ ಮಾಡಿಕೊಟ್ಟರೂ ಪ್ರಯೋಜನವಾಗಿಲ್ಲ.
ಕರ್ನಾಟಕದಲ್ಲಿ ಕಳೆದ ಬಾರಿ 2020 ರಲ್ಲಿ ಹಾಲಿನ ದರವನ್ನು ಹೆಚ್ಚಿಸಿಲಾಗಿತ್ತು. ಈಗ ಹೊಸ ಪ್ರಸ್ತಾಪವು ಮತ್ತೆ ಬಂದಿದೆ. ಅಂದಿನಿಂದ ಕನಿಷ್ಠ ನಾಲ್ಕು ಬಾರಿ ಬೆಲೆ ಹೆಚ್ಚಿಸುವಂತೆ ರೈತ ಒಕ್ಕೂಟವು ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಆದರೂ ಸರ್ಕಾರ ಹಾಲಿನ ದರ ಹೆಚ್ಚಳಕ್ಕೆ ಅನುಮತಿ ನೀಡಿಲ್ಲ.

3 ರುಪಾಯಿ ರೈತರಿಗೆ ವರ್ಗಾವಣೆ ಮಾಡಲು ನಿರ್ಧಾರ
ಕೆಎಂಎಫ್ನ ಹಿರಿಯ ಅಧಿಕಾರಿಯೊಬ್ಬರು, 5 ರುಪಾಯಿ ಬೆಲೆ ಹೆಚ್ಚಿಸುವ ಪ್ರಸ್ತಾವನೆ ಮುಂದಿಟ್ಟಿದ್ದು, ಸರ್ಕಾರವು ಪ್ರಸ್ತಾವನೆಯನ್ನು ಒಪ್ಪಿಕೊಂಡರೆ 3 ರುಪಾಯಿಗಳನ್ನು ರೈತರಿಗೆ ವರ್ಗಾಯಿಸಲು ಪ್ರಸ್ತಾಪಿಸಲಾಗಿದೆ ಎಂದು ಹೇಳಿದರು.
"ಕಳೆದ ಮೂರು ವರ್ಷಗಳಲ್ಲಿ, ಡೈರಿ ಉದ್ಯಮದಲ್ಲಿ ಉತ್ಪಾದನಾ ವೆಚ್ಚವು ಏರಿಕೆ ಕಂಡಿದೆ ಮತ್ತು ಪ್ರತಿ ಲೀಟರ್ಗೆ 3 ರುಪಾಯಿ ಸಾಮಾನ್ಯ ಬೆಲೆ ಏರಿಕೆಯಿಂದ ನಷ್ಟ ಅನುಭವಿಸುತ್ತಿರುವ ರೈತರಿಗೆ ಹೆಚ್ಚು ಪರಿಹಾರ ಸಿಗುತ್ತದೆ. ಕೆಎಂಎಫ್ ಮತ್ತು ಹಾಲು ಒಕ್ಕೂಟಗಳ ನಿರ್ವಹಣಾ ವೆಚ್ಚವೂ ಹೆಚ್ಚಾಗಿದೆ,'' ಎಂದು ಹೇಳಿದರು.

ವೈಜ್ಞಾನಿಕ ಬೆಲೆ ನಿಗದಿ ಮಾಡಲು ಒತ್ತಾಯ
ಬೆಂಗಳೂರು ಮಿಲ್ಕ್ ಯೂನಿಯನ್ ಲಿಮಿಟೆಡ್ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, "ಸಂಘಗಳು ಬೆಲೆ ಏರಿಕೆಗೆ ಬೇಡಿಕೆ ಇಡುತ್ತಿದ್ದರೂ ರಾಜ್ಯ ಸರ್ಕಾರ ಈ ಬಗ್ಗೆ ಕಣ್ಣುಮುಚ್ಚಿ ಕುಳಿತಿದೆ." ಎಲ್ಲಾ ರಾಜ್ಯಗಳಲ್ಲಿ ಹಾಲಿನ ದರ ಲೀಟರ್ಗೆ 40 ರುಪಾಯಿಗಿಂದ ಹೆಚ್ಚಿದೆ ಎಂದರು.
ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕಾದರೆ ರೈತರಿಗೆ ಲೀಟರ್ ಗೆ ಕನಿಷ್ಠ 35 ರುಪಾಯಿ ಸಿಗಬೇಕು. ಸರ್ಕಾರವು ಪ್ರತಿ ಲೀಟರ್ಗೆ ಪ್ರೋತ್ಸಾಹಧನವಾಗಿ ನೀಡುವ 5 ರುಪಾಯಿ ಜೊತೆಗೆ, ರೈತರು ಜಿಲ್ಲಾ ಹಾಲು ಒಕ್ಕೂಟವನ್ನು ಅವಲಂಬಿಸಿ ಲೀಟರ್ಗೆ 23 ರುಪಾಯಿಗಳಿಂದ 29 ರುಪಾಯಿವರೆಗೆ ಹಣವನ್ನು ಪಡೆಯುತ್ತಿದ್ದಾರೆ" ಎಂದು ಅವರು ಹೇಳಿದರು.

ಹಾಲಿನ ದರ ಹೆಚ್ಚಳಕ್ಕೆ ಒಪ್ಪುವುದೇ ಸರ್ಕಾರ?
ಡೇರಿ ಸೈನ್ಸ್ ಕಾಲೇಜಿನ ಮಾಜಿ ಅಧ್ಯಾಪಕ ಡಾ.ಶಂಕರ್ ಪಿ.ಎ. ಮಾತನಾಡಿ, ''ಹಾಲಿನ ದರ ಹೆಚ್ಚಳ ಮಾಡಬೇಕು, ಆದರೆ ಸರ್ಕಾರ ಅದಕ್ಕೆ ಅವಕಾಶ ನೀಡುತ್ತದೆಯೇ ಎನ್ನುವುದು ಪ್ರಶ್ನೆಯಾಗಿದೆ. ಇತರ ಕೃಷಿ ಉತ್ಪನ್ನಗಳು ವ್ಯರ್ಥವಾಗುತ್ತಿರುವಾಗ ಅಥವಾ ಕಡಿಮೆ ಬೆಲೆಯಿಂದ ರೈತರಿಗೆ ನಷ್ಟವಾಗುತ್ತಿರುವಾಗ, ಹಾಲು ಕೂಡ ಈ ಅನಾನುಕೂಲತೆಯನ್ನು ಎದುರಿಸುತ್ತದೆ. ಹಾಲು ಉತ್ಪಾದಿಸುವ ರೈತರಿಗೆ ಉತ್ತಮ ವ್ಯವಹಾರದ ಅಗತ್ಯವಿದೆ ಎಂಬುದು ನಿಜವಾದರೂ, ಹಾಲಿನ ಬೆಲೆ ಹೆಚ್ಚಳದಿಂದ ಸರ್ಕಾರ ಹಲವು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಹೊಂದಿವೆ. ಆದ್ದರಿಂದಲೇ ಸರ್ಕಾರ ಬೆಲೆ ಏರಿಕೆಗೆ ಅಷ್ಟು ಸುಲಭವಾಗಿ ಅವಕಾಶ ನೀಡುವುದು ಅನುಮಾನ" ಎಂದು ಹೇಳಿದ್ದಾರೆ.
ಕೆಎಂಎಫ್ನ ಮಾಜಿ ಉದ್ಯೋಗಿಯೊಬ್ಬರು, "ರೈತರನ್ನು ಉತ್ತೇಜಿಸಲು ಪ್ರತಿ ಲೀಟರ್ಗೆ 5 ರುಪಾಯಿ ಸಬ್ಸಿಡಿ ನೀಡುವ ಏಕೈಕ ರಾಜ್ಯ ಕರ್ನಾಟಕ" ಎಂದು ಹೇಳಿದರು.












Click it and Unblock the Notifications