ಕರಾವಳಿಯಲ್ಲಿ ಅಡಿಕೆ ಬೆಳೆಗೆ ಕೊಳೆ ರೋಗ ಸಂಕಷ್ಟ; ಕೃಷಿಕರು ಕಂಗಾಲು
ಮಂಗಳೂರು, ಸೆಪ್ಟೆಂಬರ್, 12: ರಾಜ್ಯದಲ್ಲೆಡೆ ವರುಣ ಅಬ್ಬರಿಸುತ್ತಲೇ ಇದ್ದಾನೆ. ಮಳೆರಾಯನ ಆರ್ಭಟಕ್ಕೆ ಮಂಗಳೂರು ಜಿಲ್ಲೆಯಲ್ಲಿ ಮನೆಗಳು, ಬೆಳೆಗಳು ಜಲಾವೃತವಾಗಿದ್ದು, ಅನ್ನದಾತ ಕಂಗಾಲಾಗಿದ್ದಾನೆ. ಇನ್ನು ಕರಾವಳಿ ಮತ್ತು ಮಲೆನಾಡಿಗರಿಗೆ ಬಂಗಾರದ ಬೆಳೆ ಆಗಿರುವ ಅಡಿಕೆಗೆ ಕೊಳೆರೋಗ ಬಿದ್ದಿದ್ದು, ರೈತರು ತತ್ತರಿಸಿ ಹೋಗಿದ್ದಾರೆ. ಮಳೆಗೆ ಬೋರ್ಡೋ ದ್ರಾವಣ ಸರಿಯಾಗಿ ಸಿಂಪಡಣೆ ಆಗದೆ ಅಡಿಕೆ ಬೆಳೆಗೆ ಕೊಳೆರೋಗ ದಾಳಿ ಇಟ್ಟಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕತೆಯ ಜೀವನಾಡಿ ಮೀನುಗಾರಿಕೆ ಆಗಿದೆ. ಇಲ್ಲಿ ಅಡಿಕೆ ಬೆಳೆಯನ್ನು ಕೂಡ ಹೆಚ್ಚಾಗಿ ಬೆಳೆಯುತ್ತಾರೆ. ಕರಾವಳಿಯ ಆರ್ಥಿಕ ಚೇತರಿಕೆಗೆ ಅರ್ಧಪಾಲು ಕೊಡುಗೆ ಅಡಿಕೆ ಬೆಳೆಗಾರರದ್ದು ಕೂಡ ಇದೆ. ಅಡಿಕೆಗೆ ಇದೀಗ ಧಾರಣೆ ಉತ್ತಮವಾಗಿದ್ದು, ಅಡಿಕೆ ಬೆಳೆಗಾರರೂ ಸುಖವಾಗಿದ್ದಾರೆ ಎನ್ನುವುದು ಎಲ್ಲರ ಮನೋಭಾವನೆ ಆಗಿದೆ. ಆದರೆ ಭಾರಿ ಮಳೆ ಸುರಿದ ಕಾರಣ ಅಡಿಕೆ ಬೆಳೆಗೆ ಕೊಳೆರೋಗ ತಗುಲಿ ರೈತರು ಹೈರಾಣಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ಭಾರಿ ಮಳೆಯಿಂದಾಗಿ ಅಡಿಕೆ ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಅಡಿಕೆಗೆ ಕೊಳೆ ರೋಗದ ಜೊತೆಗೆ, ಹಳದಿ ಎಲೆ ರೋಗ ತಗುಲಿದ್ದು, ಸುಳ್ಯದ ಅಡಿಕೆ ಬೆಳೆಗಾರರಂತೂ ಭಾರಿ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ
ಹಳದಿ ರೋಗ ಇಡೀ ತೋಟವನ್ನೇ ನಾಶಮಾಡುತ್ತಿದ್ದರೂ ಕೂಡ ಸರ್ಕಾರ ಮಾತ್ರ ಈ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಂಡಿಲ್ಲ. ಈ ಬಗ್ಗೆ ಅಧ್ಯಯನ, ಹಳದಿ ರೋಗ ತಡೆಯುವಲ್ಲಿ ಯಾವುದೇ ಮುತುವರ್ಜಿ ವಹಿಸಿಲ್ಲ ಎಂದು ಅಲ್ಲಿನ ಕೃಷಿಕರ ಆರೋಪ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಅಡಿಕೆ ಸಂಶೋಧನಾ ಸಂಸ್ಥೆ ಸಿಪಿಸಿಆರ್ಐನಲ್ಲಿ ಮಣ್ಣು ಪರೀಕ್ಷಾ ಕೇಂದ್ರ ಇಲ್ಲ. ಸರ್ಕಾರಿ ಸಂಸ್ಥೆಯಲ್ಲೂ ಕೃಷಿಕರ ಅನುಕೂಲಕ್ಕೆ ಅಗತ್ಯವಾಗಿ ಮಣ್ಣು ಪರೀಕ್ಷಾ ಕೇಂದ್ರ ಬೇಕಿದೆ.

ಕಟೀಲ್ ವಿರುದ್ದ ಹರಿಹಾಯ್ದ ಕೃಷಿಕರು
ಜಿಲ್ಲೆಯ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ಅವರು ಅಡಿಕೆ ಬೆಳೆಗಾರರ ಮತದಿಂದಲೇ ಗೆದ್ದಿದ್ದಾರೆ.ಇದುವರೆಗಿನ ಕೇಂದ್ರದ ಅಡಿಕೆ ಬೆಳೆಗಾರರ ನಿಯೋಗದಲ್ಲಿ ನಮ್ಮ ಸಂಸದರು ಕಾಣಿಸಿಕೊಂಡಿದ್ದು ಕಡಿಮೆಯೇ ಎಂದು ಜನರು ಅಸಮಾಧಾನ ಹೊರಹಾಕಿದರು. ಈಗ ಅಡಿಕೆ ಹಳದಿ ಎಲೆರೋಗ, ಮಣ್ಣುಪರೀಕ್ಷಾ ಕೇಂದ್ರ ಇವೆರಡಕ್ಕೂ ಉತ್ಸಾಹಿ ವಿಜ್ಞಾನಿಗಳು ಅಗತ್ಯ ಇದೆ. ಅಡಿಕೆ ಬೆಳೆಗಾರರ ಮನವಿಗೆ ಸರ್ಕಾರ ಸ್ಪಂದನೆ ನೀಡಬೇಕು ಎಂದು ಸುಳ್ಯದ ಪ್ರಗತಿಪರ ಕೃಷಿಕ ಮಹೇಶ್ ಪುಚ್ಚಪ್ಪಾಡಿಯವರ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಫಸಲಿಗೆ ಬಂದಿದ್ದ ಅಡಿಕೆ ಬೆಳೆ ಮಣ್ಣುಪಾಲು
ಹಳದಿ ರೋಗದ ವೇದನೆ ಒಂದು ಕಡೆ ಆದರೆ, ಮತ್ತೊಂದೆಡೆ ಜಿಲ್ಲೆಯ ಅಡಿಕೆ ತೋಟಗಳಿಗೆ ಕೊಳೆ ರೋಗ ಆವರಿಸಿದೆ. ಕಾಯಿ ಫಸಲಿಗೆ ಬರುವ ಮೊದಲು ಕೊಳೆರೋಗಕ್ಕೆ ತುತ್ತಾಗಿ ಧರೆಗೆ ಬೀಳುತ್ತಿದೆ. ಎಡಬಿಡದೇ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೊಳೆ ರೋಗ ಇಡೀ ತೋಟವನ್ನು ವ್ಯಾಪಿಸಿದ್ದು ಕೃಷಿಕರಿಗೆ ಸಂಕಟವನ್ನು ತಂದಿದೆ.

ಅಡಿಕೆ ಬೆಳೆ ಕಳೆದುಕೊಂಡ ಕೃಷಿಕನ ಅಳಲು
ಅಡಿಕೆಗೆ ಕೊಳೆ ರೋಗ ಬಿದ್ದಿದ್ದು, ಕೃಷಿಕರನ್ನು ನಿದ್ದೆಗೆಡಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಸಲು ಚೆನ್ನಾಗಿಯೇ ಬಂದಿತ್ತು. ಇದನ್ನೇ ನಂಬಿಕೊಂಡು 500 ಅಡಿಕೆ ಸಸಿಗಳನ್ನು ನೆಟ್ಟಿದ್ದೆ. ಆದರೆ ಮಳೆರಾಯ ಅಬ್ಬರಿಸಿದ್ದರಿಂದ ಅಡಿಕೆ ಬೆಳೆ ಕೊಳೆ ರೋಗಕ್ಕೆ ತುತ್ತಾಗಿದೆ. ದ್ರಾವಣ ಸಿಂಪಡಣೆಗೂ ಮಳೆ ಅವಕಾಶ ನೀಡುತ್ತಿಲ್ಲ. ಅಡಿಕೆ ಬೆಳೆಗೆ ದರ ಉತ್ತಮವಾಗಿದೆ. ಕಳೆದ ಬಾರಿ ಶೇಖರಣೆ ಮಾಡಿಟ್ಟ ಅಡಿಕೆಯಿಂದ ಈ ಮಳೆಗಾಲದ ಖರ್ಚನ್ನು ಭರಿಸಲು ನೆರವಾಗುತ್ತಿತ್ತು ಎಂದು ಅಡಿಕೆ ಬೆಳೆಗಾರ ಪ್ರದೀಪ್ ಶೆಟ್ಟಿ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಹೀಗೆ ಕರಾವಳಿಯಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ, ಬೆಳೆಗಳು ನೆಲಚ್ಚಿವೆ. ಮತ್ತೊಂದೆಡೆ ಫಸಲಿಗೆ ಬಂದಿದ್ದ ಅಡಿಕೆ ಬೆಳೆಗಳ ಎಲೆಗೆ ಹಳದಿ, ಕೊಳೆರೋಗ ಬಿದ್ದಿದೆ. ಇದರಿಂದ ಕೈಗ ಬಂದ ತುತ್ತು ಬಾಯಿಗೆ ಬರದಂತಾಗಿ ಕೃಷಿಕರು ತತ್ತರಿಸಿ ಹೋಗಿದ್ದಾರೆ.












Click it and Unblock the Notifications