ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಎಚ್ಚರಿಕೆ ಕೊಟ್ಟ ಯಡಿಯೂರಪ್ಪ
ಗದಗ, ಅಕ್ಟೋಬರ್ 12 : ಕರ್ನಾಟಕ ಬಿಜೆಪಿಯ ಎರಡನೇ ಹಂತದ ರೈತ ಚೈತನ್ಯ ಯಾತ್ರೆ ನರಗುಂದದಲ್ಲಿ ಭಾನುವಾರ ಅಂತ್ಯಗೊಂಡಿದೆ. 'ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮುಂದುವರಿಸಲು ಶೀಘ್ರದಲ್ಲಿಯೇ ಮೂರನೇ ಹಂತದ ರೈತ ಚೈತನ್ಯ ಯಾತ್ರೆ ಆರಂಭಿಸಲಾಗುವುದು' ಎಂದು ಯಡಿಯೂರಪ್ಪ ಅವರು ಘೋಷಿಸಿದ್ದಾರೆ.
ಅಕ್ಟೋಬರ್ 1ರಂದು ಬಿಜೆಪಿ ಬಳ್ಳಾರಿಯಲ್ಲಿ ಆರಂಭಿಸಿದ್ದ 2ನೇ ಹಂತದ ರೈತ ಚೈತನ್ಯ ಯಾತ್ರೆಗೆ ಅಕ್ಟೋಬರ್ 11ರ ಭಾನುವಾರದಂದು ನರಗುಂದದಲ್ಲಿ ಮುಕ್ತಾಯಗೊಂಡಿತು. ಯಡಿಯೂರಪ್ಪ, ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ನಾಯಕರ ಮೂರು ತಂಡ ಬಳ್ಳಾರಿಯಿಂದ-ನರಗುಂದದ ತನಕ ಯಾತ್ರೆ ನಡೆಸಿ, ರೈತರಲ್ಲಿ ಆತ್ಮಸ್ಥೈರ್ಯ ತುಂಬಿದೆ. ['ಬಿಜೆಪಿಯ ರೈತ ಚೈತನ್ಯ ಯಾತ್ರೆ ಎನ್ನುವ ಬೂಟಾಟಿಕೆ']
ರೈತ ಚೈತನ್ಯ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, 'ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರಿಗೆ ನೀಡಲಾಗುವ ವಿಧವಾ ವೇತನವನ್ನು 2000 ರೂ.ಗೆ ಹೆಚ್ಚಿಸಿರುವುದು ಸ್ವಾಗತಾರ್ಹ, ಇದನ್ನು ರಾಜ್ಯದ ಎಲ್ಲಾ ವಿಧವೆಯರಿಗೂ ವಿಸ್ತರಣೆ ಮಾಡಬೇಕು ಇಲ್ಲವಾದಲ್ಲಿ ಹೋರಾಟ ನಡೆಸಲಾಗುತ್ತದೆ' ಎಂದು ಎಚ್ಚರಿಕೆ ನೀಡಿದರು. [ರೈತರ ಬಗ್ಗೆ ಚರ್ಚೆಗೆ ಅಧಿವೇಶನ ಕರೆಯಿರಿ: ಬಿಎಸ್ ವೈ]
ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮುಂತಾದವರು ರೈತ ಚೈತನ್ಯ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಸಮಾರೋಪ ಸಮಾರಂಭದ ಚಿತ್ರಗಳು ಇಲ್ಲಿವೆ......[ರಾಹುಲ್ ಸಮ್ಮುಖದಲ್ಲಿ ರೈತರಿಗೆ ಪ್ಯಾಕೇಜ್ ಘೋಷಣೆ]

ಸಿದ್ದರಾಮಯ್ಯಗೆ ಎಚ್ಚರಿಕೆ ಕೊಟ್ಟ ಬಿಎಸ್ವೈ
'ಆತ್ಮಹತ್ಯೆ ಮಾಡಿಕೊಂಡ ರೈತನ ಪತ್ನಿಗೆ ನೀಡುವ 2 ಸಾವಿರ ವಿಧವಾ ವೇತನವನ್ನು ರಾಜ್ಯದ ಎಲ್ಲ ವಿಧವೆಯರಿಗೂ ನೀಡಬೇಕು ಎಂದು ಯಡಿಯೂರಪ್ಪ ಒತ್ತಾಯಿಸಿದ್ದಾರೆ. ರಾಜ್ಯದ 14,81,299 ವಿಧವೆಯರಿಗೂ ಈ ಸೌಲಭ್ಯ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ರಾಜ್ಯ ಸರ್ಕಾರದ ವಿರುದ್ಧ ರೈತ ಚೈತನ್ಯ ಯಾತ್ರೆಗಿಂತ ದೊಡ್ಡ ಮಟ್ಟದಲ್ಲಿ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುತ್ತದೆ' ಎಂದು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

'ಸಿದ್ದರಾಮಯ್ಯಗೆ ನಿದ್ದೆ ಮಾಡಲು ಬಿಡುವುದಿಲ್ಲ'
'ಇನ್ನು ಎರಡು ವರ್ಷಗಳ ಕಾಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿದ್ದೆ ಮಾಡಲು ಬಿಡುವುದಿಲ್ಲ. ಜನವಿರೋಧಿಯಾದ ಈ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಸಂಕಲ್ಪ ತೊಟ್ಟಿದ್ದೇವೆ. ಹಳ್ಳಿ, ಹಳ್ಳಿಗಳಲ್ಲಿ ಸರ್ಕಾರದ ವಿರುದ್ಧದ ನಮ್ಮ ಹೋರಾಟ ಮುಂದುವರಿಯುತ್ತದೆ' ಎಂದು ಯಡಿಯೂರಪ್ಪ ಘೋಷಿಸಿದರು.

'ರಾಜ್ಯ ಸರ್ಕಾರದದ್ದು ತುಘಕಲ್ ದರ್ಬಾರ್'
'ರಾಜ್ಯ ಸರ್ಕಾರ ತುಘಲಕ್ ದರ್ಬಾರ್ ನಡೆಸುತ್ತಿದೆ. ನಮ್ಮ ಅಧಿಕಾರಾವಧಿಯಲ್ಲಿ ಸುವರ್ಣ ಗ್ರಾಮ ಯೋಜನೆ ಅನುಷ್ಠಾನಕ್ಕೆ ತಂದು ಹಳ್ಳಿಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿತ್ತು. ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ಸ್ಥಗಿತಗೊಳಿಸಿದೆ. ಹಳ್ಳಿಗಳ ಅಭಿವೃದ್ಧಿ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ನಡೆದ ಕೋಟ್ಯಾಂತರ ರೂ. ಅವ್ಯವಹಾರ ಬೆಳಕಿಗೆ ಬರಲು ಎರಡೂ ವರೆ ವರ್ಷ ಬೇಕಾಯಿತು. ಹೀಗಾದರೆ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾಗಲಿವೆಯೇ?' ಎಂದು ಯಡಿಯೂರಪ್ಪ ಪ್ರಶ್ನಿಸಿದರು.

'ನೀವು ಒಪ್ಪಿಸಿ, ನಾವು ಒಪ್ಪಿಸುತ್ತೇವೆ'
'ಕಳಸಾ-ಬಂಡೂರು ನಾಲಾ ಯೋಜನೆ ವಿಚಾರದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಗೋವಾ ಹಾಗೂ ಮಹಾರಾಷ್ಟ್ರದ ವಿಪಕ್ಷಗಳ ಮನವೊಲಿಸಲಿ. ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಮನವೊಲಿಸುವಂತೆ ನಾವು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಮಾತುಕತೆ ನಡೆಸುತ್ತೇವೆ. ಕಾಂಗ್ರೆಸ್ ಸರ್ಕಾರ ಇದಕ್ಕೆ ಒಪ್ಪಿದರೆ ನ್ಯಾಯಾಧೀಕರಣದ ಹೊರಗೆ ವಿವಾದ ಬಗೆಹರಿಸಲು ಬಿಜೆಪಿ ಸಿದ್ಧವಿದೆ' ಎಂದು ಯಡಿಯೂರಪ್ಪ ಘೋಷಿಸಿದರು.

'3ನೇ ಹಂತದ ಯಾತ್ರೆ ಮಾಡುತ್ತೇವೆ'
'ಎರಡನೇ ಹಂತದ ರೈತ ಚೈತನ್ಯ ಯಾತ್ರೆ ಮುಕ್ತಾಯಗೊಂಡಿದೆ. ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮುಂದುವರಿಸಲು ಶೀಘ್ರದಲ್ಲಿಯೇ ಮೂರನೇ ಹಂತದ ಯಾತ್ರೆ ಆರಂಭಿಸಲಾಗುವುದು' ಎಂದು ಯಡಿಯೂರಪ್ಪ ಅವರು ಘೋಷಿಸಿದರು.

'ಪ್ರಧಾನಿಗೆ ಮಸಿ ಬಳಿಯುವ ಕೆಲಸ ಸಿಲ್ಲಿಸಿ'
ಸಮಾರಂಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರು 'ಕಳಸಾ-ಬಂಡೂರಿ ವಿಚಾರದಲ್ಲಿ ಪ್ರಧಾನಿಗೆ ಮಸಿ ಬಳಿಯುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುತಂತ್ರ ಫಲಿಸುವುದಿಲ್ಲ. ಯೋಜನೆ ಬಗ್ಗೆ ಚರ್ಚಿಸಲು ಗೋವಾ ಮುಖ್ಯಮಂತ್ರಿಗಳ ಭೇಟಿಗೆ ಸಿದ್ದರಾಮಯ್ಯ ಅವರು ಪತ್ರ ಬರೆಯಲಿ' ಎಂದು ಜೋಶಿ ಒತ್ತಾಯಿಸಿದರು.

'ನ್ಯಾಯಾಲಯಕ್ಕೆ ಹೋಗಿದ್ದು ಕಾಂಗ್ರೆಸ್'
'ಕಳಸಾ-ಬಂಡೂರಿ ಕುಡಿಯುವ ನೀರಿನ ಯೋಜನೆ ವಿಚಾರದಲ್ಲಿ ಅಂದು ಗೋವಾ ಮತ್ತು ಮಹಾರಾಷ್ಟ್ರದ ಕಾಂಗ್ರೆಸ್ ಸರ್ಕಾರಗಳು ನ್ಯಾಯಾಲಯಕ್ಕೆ ಹೋಗಿದ್ದವು. ಯೋಜನೆ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಎರಡೂ ರಾಜ್ಯಗಳ ವಿಪಕ್ಷಗಳನ್ನು ಒಪ್ಪಿಸುವಂತೆ ಪ್ರಧಾನಿ ಸಲಹೆ ನೀಡಿದ್ದಾರೆ. ಈ ಯೋಜನೆಗೆ ಪರಿಸರ, ಅರಣ್ಯ ಇಲಾಖೆಯ ಅನುಮೋದನೆ ಮಾತ್ರ ಬಾಕಿಯಿದೆ' ಎಂದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.











Click it and Unblock the Notifications