ಬೆಂಗಳೂರಿನಲ್ಲಿ 3 ದಿನಗಳ ಕೃಷಿಮೇಳಕ್ಕೆ ಚಾಲನೆ
ಬೆಂಗಳೂರು, ನ. 19 : 'ಎಲ್ಲರ ಕೈಗೆ ಕೆಲಸ, ಎಲ್ಲರ ಹೊಲಕ್ಕೆ ನೀರು' ಮಂತ್ರವನ್ನು ರಾಜ್ಯ ಸರ್ಕಾರ ಅಳವಡಿಸಿಕೊಳ್ಳಬೇಕು ಎಂದು ರಾಜ್ಯಪಾಲ ವಜುಭಾಯಿ ವಾಲಾ ಕರ್ನಾಟಕ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆರಂಭವಾದ ಮೂರು ದಿನದ 'ಕೃಷಿಮೇಳ-2014'ನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಮಳೆ ನೀರು ವ್ಯರ್ಥವಾಗಿ ಹರಿದು ಹೋಗಲು ಬಿಡಬಾರದು. ಇಂಗು ಗುಂಡಿ, ಚೆಕ್ ಡ್ಯಾಂ ಗಳ ಮೂಲಕ ಅದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.[ರೈತರ ಮನೆ ಬಾಗಿಲಿಗೆ ಸೇವೆ ನೀಡುವ ವೆಬ್ ಸೈಟ್]

ಸ್ವಾತಂತ್ರ್ಯ ಸಿಗುವ ವೇಳೆ ದೇಶದಲ್ಲಿ ಶೇ. 80 ರಷ್ಟಿದ್ದ ರೈತರ ಸಂಖ್ಯೆ ಈಗ ಶೇ. 60 ಕ್ಕೆ ಇಳಿದಿದೆ. ಆದರೆ ಮಳೆ ನಂಬಿಕೊಂಡು ಬೆಳೆ ಬೆಳೆಯುತ್ತಿರುವುದರಿಂದ ರೈತರ ಸ್ಥಿತಿ ಗತಿಯಲ್ಲಿ ಯಾವ ಬದಲಾವಣೆಯಾಗಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡೆ ಸರ್ಕಾರಗಳು ಯೋಜನೆ ರೂಪಿಸಬೇಕು. ಹನಿ ನೀರಾವರಿಗೆ ವಿಶೇಷ ಒತ್ತು ನೀಡಬೇಕು ಎಂದು ತಿಳಿಸಿದರು.
ಕೃಷಿಯಲ್ಲಿ ಮತ್ತೊಂದು ಕ್ರಾಂತಿಯಾಗಬೇಕಿದೆ. ಯಂತ್ರೋಪಕರಣಗಳು ರೈತನ ಕೈಗೆ ಸುಲಭವಾಗಿ ಸಿಗಬೇಕು ಜತೆಗೆ ಒಂದೆ ಯಂತ್ರ ಒಂದಕ್ಕಿಂತ ಹೆಚ್ಚು ಕೆಲಸ ಮಾಡುವಂತಿರಬೇಕು. ಅವುಗಳಿಗೆ ಮಾರ್ಗದರ್ಶನ ನೀಡಲು ಇಂಥ ಮೇಳಗಳು ಪೂರಕವಾಗುತ್ತವೆ ಎಂದು ಹೇಳಿದರು.[ಫುಡ್ಪಾರ್ಕ್ ಮಾಡಿದ ಮಾತ್ರಕ್ಕೆ ರೈತರ ಹೊಟ್ಟೆ ತುಂಬಲ್ಲ]

ನೀರು ಎಲ್ಲರ ಸ್ವತ್ತು
ರಾಜ್ಯ ರಾಜ್ಯಗಳ ನಡುವೆ ನೀರಿಗಾಗಿ ಗೊಂದಲ ಏರ್ಪಡುತ್ತಿದೆ. ಆದರೆ ನಿಜವಾದ ಸಮಸ್ಯೆ ಇರುವುದು ಎಲ್ಲಿ ಎಂದು ಯಾರೂ ಚಿಂತಿಸುತ್ತಿಲ್ಲ. ಇಲ್ಲಿ ನೀರು ತಮಿಳುನಾಡಿಗೆ ಸೇರಬೇಕೋ, ಕರ್ನಾಟಕಕ್ಕೆ ಸೇರಬೇಕು, ಕೇರಳಕ್ಕೆ ಸೇರಬೇಕೋ ಎನ್ನುವುದು ಮುಖ್ಯವಲ್ಲ. ನೀರು ರೈತರಿಗೆ ಸೇರಬೇಕಾದ್ದು. ನೀರಿನ ಬಳಕೆಯಲ್ಲಿ ಗುಜರಾತ್ ಅನುಸರಿಸಬಹುದು ಎಂದು ತವರಿನ ಉದಾಹರಣೆ ನೀಡಿದರು.
ರಾಜ್ಯ ಕೃಷಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಕೃಷಿ ಮೇಳಗಳು ಕೇವಲ ಒಂದು ಹಬ್ಬವಲ್ಲ, ಇದು ರೈತರಿಗೆ ತಮ್ಮ ಅಭಿಪ್ರಯಾಯ ವ್ಯಕ್ತಪಡಿಸಲು ಒಂದು ವೇದಿಕೆ ಎಂದು ಹೇಳಿದರು.
ಬೆಂಬಲ ಬೆಲೆಯಿಂದ ಹಿಂದೆ ಸರಿಯಲ್ಲ
ಅತಿವೃಷ್ಟಿ, ಅನಾವೃಷ್ಟಿಗೆ ತುತ್ತಾದ ರೈತರು ಬೆಳೆ ಕಳೆದುಕೊಂಡಿದ್ದಾರೆ. ಬಂದ ಬೆಳೆಗಳಿಗೂ ಸೂಕ್ತ ಬೆಲೆ ಇಲ್ಲ. ಇದೆಲ್ಲವನ್ನು ಮನಗಂಡಿರುವ ಸಿಎಂ ಈ ಬಾರಿಯೂ ಬೆಂಬಲ ಬೆಲೆಯಲ್ಲಿ ಜೋಳ, ಮೆಕ್ಕೆಜೋಳ, ಈರುಳ್ಳಿ, ಸೇರಿದಂತೆ ಉಳಿದ ಎಲ್ಲ ಫಸಲುಗಳ ಖರೀದಿಗೆ ಮುಂದಾಗಲು ತಿಳಿಸಿದ್ದಾರೆ. ಯಾವ ಕಾರಣಕ್ಕೂ ಈ ನಿರ್ಧಾರದಿಂದ ಸರಿಯಲ್ಲ. ಇದಕ್ಕಾಗಿ 70 ಕೋಟಿ ಮೀಸಲಿಡಲಾಗಿದೆ ಎಂದು ತಿಳಿಸಿದರು.
ರೈತರಿಗೆ ಮಣ್ಣು ಹೆಲ್ತ್ ಕಾರ್ಡ್
ಯಾವ ಮಣ್ಣಿನಲ್ಲಿ ಯಾವ ಬೆಳೆ ಬೆಳೆಯಬೇಕು ಎಂಬ ಅರಿವನ್ನು ರೈತರಿಗೆ ಮೂಡಿಸಬೇಕು. ಇದಕ್ಕಾಗಿ ಕೆಲ ಹೋಬಳಿಗಳನ್ನು ಗುರುತಿಸಿ ಅಲ್ಲಿಯ ಎಲ್ಲ ಹೊಲಗಳ ಮಣ್ಣು ಪರೀಕ್ಷೆ ಮಾಡಿಸಿ ಮಣ್ಣು ಹೆಲ್ತ್ ಕಾರ್ಡ್ ನೀಡಲಾಗುವುದು. ಮುಂದೆ ಈ ಯೋಜನೆಯನ್ನು ರಾಜ್ಯದ ವಿವಿಧೆಡೆ ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಇದೆ ವೇಳೆ ಸಕಲೇಶಪುರದ ರೈತ ಎಚ್.ಎಲ್.ನರೇಶ್ ಅವರಿಗೆ ಬೈರೇಗೌಡ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ, ಶಿವಮೊಗ್ಗ ಸೋಗಾನೆಯ ಜಿ.ಎಂ. ರಘು ಮತ್ತು ಶೃಂಗೇರಿಯ ಮಲ್ಲಪ್ಪ ಹೆಗಡೆ ಅವರಿಗೆ ಡಾ. ಎಂ.ಎಚ್.ಮರಿಗೌಡ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೃಷಿ ವಿವಿ ಕುಲಪತಿ ಡಾ. ಡಿ.ಪಿ.ಕುಮಾರ್, ವಿಸ್ತರಣಾ ನಿರ್ದೇಶಕ ಎನ್. ನಾಗರಾಜ ಹಾಜರಿದ್ದರು.











Click it and Unblock the Notifications