ಬಿಜೆಪಿ ಸರ್ಕಾರದ ಮುಂದೆ ರೈತ ಸಂಘ ಇಟ್ಟಿರುವ ಬೇಡಿಕೆಗಳೇನು?
ಬೆಂಗಳೂರು, ಫೆ. 15: ಲೂಟಿಕೋರ ಕಾರ್ಪೊರೇಟ್ ಕಂಪನಿಗಳ ಪರವಾದ ಕೃಷಿ ಕಾಯ್ದೆಗಳನ್ನು ವಾಪಾಸು ಪಡೆಯಲು ಹಾಗೂ ರೈತರ ಕೃಷಿಯನ್ನು ಸಂರಕ್ಷಿಸಲು ಕೆಳಕಂಡ ಹಕ್ಕೊತ್ತಾಯಗಳನ್ನು ಬಜೆಟ್ ಪೂರ್ವವೇ ಪರಿಗಣಿಸಲು ಕರ್ನಾಟಕ ರೈತ ಹೋರಾಟ ಸಮಿತಿ ಒತ್ತಾಯಿಸಿದೆ. ಬಿಜೆಪಿ ಸರ್ಕಾರದ ಮುಂದೆ ರೈತ ಸಂಘ ಇಟ್ಟಿರುವ ಬೇಡಿಕೆ, ಹಕ್ಕೊತ್ತಾಯಗಳಿವೆ.
ಲೂಟಿಕೋರ ಕಾರ್ಪೊರೇಟ್ ಕಂಪನಿಗಳ ಪರವಾದ ಕೃಷಿ ಕಾಯ್ದೆ ವಾಪಾಸು ಪಡೆಯಿರಿ:
ಪ್ರಧಾನ ಮಂತ್ರಿಗಳು ದೇಶದ ರೈತ- ಕಾರ್ಮಿಕರ ಸಮರ ಶೀಲ ಹೋರಾಟಕ್ಕೆ ಮಣಿದು, ದೇಶ ಹಾಗೂ ಜಗತ್ತಿನ ಮುಂದೆ ತಲೆಬಾಗಿ, ತನ್ನನ್ನು ಕ್ಷಮಿಸಬೇಕೆಂದು ಕೈ ಮುಗಿದು, ತಾವು ತಂದ ಲೂಟಿಕೋರ ಕಾರ್ಪೊರೇಟ್ ಕಂಪನಿಗಳ ಪರವಾದ ಕೃಷಿ ಕಾಯ್ದೆಗಳನ್ನು ಸಂಸತ್ನಲ್ಲಿಟ್ಟು ತೀರ್ಮಾನಿಸುವ ಮೂಲಕ ವಾಪಾಸು ಪಡೆದರು. ಅವುಗಳ ಜಾರಿಗಾಗಿ ಕರ್ನಾಟಕ ಸರಕಾರ ರೂಪಿಸಿ ಜಾರಿಗೊಳಿಸಿದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ- 2020, ಎಪಿಎಂಸಿ ತಿದ್ದುಪಡಿ ಕಾಯ್ದೆ- 2020 ಹಾಗು ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ- 2020 ಗಳನ್ನು ಈಗಲೂ ವಾಪಾಸು ಪಡೆಯದಿರುವುದನ್ನು ಕರ್ನಾಟಕ ಪ್ರಾಂತ ರೈತ ಸಂಘ ಬಲವಾಗಿ ಖಂಡಿಸುತ್ತದೆ. ಈ ತಕ್ಷಣವೇ ಈ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಿ ವಾಪಾಸು ಪಡೆಯುವಂತೆ ಒತ್ತಾಯಿಸುತ್ತದೆ. ಇನ್ನಷ್ಟು ಹಕ್ಕೊತ್ತಾಯ ವಿವರ ಮುಂದಿದೆ...

ಮನೆ ನಿವೇಶನ ಒದಗಿಸಿ
2) ಸರಕಾರಿ ಹಾಗೂ ಅರಣ್ಯ ಭೂಮಿಗೆ ಹಕ್ಕುಪತ್ರ ಹಾಗೂ ಮನೆ ನಿವೇಶನ ಒದಗಿಸಿ:
ಅ) ಕಾರ್ಪೊರೇಟ್ ಲೂಟಿಯನ್ನು ಕರ್ನಾಟಕದಲ್ಲಿ ಮುಂದುವರೆಸುವ ಭಾಗವಾಗಿ, ಈಗಾಗಲೇ ವಿವಿಧ ಹೆಸರಿನ ಸರಕಾರಿ ಭೂಮಿ ಹಕ್ಕಿಗಾಗಿ ಫಾರಂ - 50, 53 ಹಾಗೂ 57 ಸಲ್ಲಿಸಿದ ಹಾಗೂ ಇನ್ನು ಅರ್ಜಿ ಸಲ್ಲಿಸಲು ಕಾಯುತ್ತಿರುವ ಬಡ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲು ತಮ್ಮ ಸರಕಾರ ಉದಾಸೀನ ಮಾಡುತ್ತಿದೆ. ಮಾತ್ರವಲ್ಲ ಈಚೆಗೆ ಸಚಿವ ಸಂಪುಟದ ಉಪಸಮಿತಿ ರಚಿಸಿ ಖಾಸಗಿ ಸಂಸ್ಥೆಗಳಿಗೆ ಗೋಮಾಳ ಗೈರಾಣು ಮುಂತಾದ ಜಮೀನುಗಳನ್ನು ಒದಗಿಸಲು ನೀತಿ ನಿರೂಪಣೆಗೆ ಕ್ರಮವಹಿಸಿರುವುದನ್ನು ನೋಡಿದರೇ, ಹಕ್ಕು ಪತ್ರಕ್ಕಾಗಿ ಕಾಯುತ್ತಿರುವ ಸುಮಾರು 45 ಲಕ್ಷಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಸಾಗು ನಿರತ ಬಡವರನ್ನು ಒಕ್ಕಲೆಬ್ಬಿಸಿ ಕಾರ್ಪೊರೇಟ್ ಕಂಪನಿಗಳಿಗೆ ನೀಡುವ ಬಡವರ ವಿರೋಧಿ ಇಂಗಿತ ಕಂಡು ಬರುತ್ತಿದೆ.
ತಕ್ಷಣವೇ ಖಾಸಗಿ ಸಂಸ್ಥೆಗಳಿಗೆ ಭೂಮಿ ನೀಡುವ ಸಚಿವ ಸಂಪುಟದ ಉಪ ಸಮಿತಿ ರಚನೆಯನ್ನು ಬಿಟ್ಟು, ಭೂಮಿ ಹಕ್ಕಿಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡುವ ಮತ್ತು ಈಗಾಗಲೇ ಅರ್ಜಿ ಸಲ್ಲಿಸಲಾದ ಬಡ ಸಾಗುವಳಿದಾರರ ಜಮೀನುಗಳ ಸರ್ವೆ ನಡೆಸಬೇಕು ಮತ್ತು ವಿಳಂಬ ಮಾಡದೇ ಭೂ ವಿತರಣಾ ಸಮಿತಿಗಳನ್ನು ರಚಿಸಿ ಹಕ್ಕು ಪತ್ರ ವಿತರಣೆಗೆ ಕಾಲಮಿತಿಯಲ್ಲಿ ಕ್ರಮ ವಹಿಸಬೇಕು.

10 ಲಕ್ಷಕ್ಕೂ ಅಧಿಕ ಎಕರೆ ಜಮೀನು
ಆ) ಈ ಹಿಂದೆ ಸಾಮಾಜಿಕ ಅರಣ್ಯಕ್ಕಾಗಿ ಅರಣ್ಯ ಇಲಾಖೆಗೆ ವರ್ಗಾಯಿಸಲಾಗಿದ್ದ ಮತ್ತು ವಾಪಾಸು ಪಡೆಯಲು ಕ್ರಮವಹಿಸಿರುವ 10 ಲಕ್ಷಕ್ಕೂ ಅಧಿಕ ಎಕರೆ ಜಮೀನುಗಳನ್ನು ಆಗ ಅಲ್ಲಿಂದ ಬಲವಂತವಾಗಿ ಒಕ್ಕಲೆಬ್ಬಿಸಲ್ಪಟ್ಟ ಬಡ ಸಾಗುವಳಿದಾರರಿಗೆ ಮತ್ತು ದಲಿತರಿಗೆ ವಿತರಿಸಬೇಕು.
ಇ) ಕೆಐಎಡಿಬಿ ಮೂಲಕ ಕೈಗಾರಿಕೆ ಉದ್ದೇಶದ ಹೆಸರಿನಲ್ಲಿ ಬಲವಂತವಾಗಿ ಮತ್ತು ಕಳಪೆ ಬೆಲೆಗೆ ಸ್ವಾಧೀನ ಪಡಿಸಿಕೊಂಡ ಮತ್ತು ಕಳೆದ 10 ವರ್ಷಗಳಿಗೂ ಅಧಿಕ ಕಾಲ ಕೈಗಾರಿಕೆಗಳು ನಿರ್ಮಾಣ ಮಾಡಲಾಗದೇ ಹಾಗೇ ಉಳಿದಿರುವ ಜಮೀನುಗಳನ್ನು ಮೂಲ ರೈತರಿಗೆ ವಾಪಾಸು ನೀಡಬೇಕು.

ಗಣತಿ ನಡೆಸಿ ನಿವೇಶನ
ಈ) ಅರಣ್ಯ ಭೂಮಿ ಸಾಗುವಳಿಯಲ್ಲಿ ತೊಡಗಿರುವ ಬಡ ಸಾಗುವಳಿದಾರರ ಮತ್ತು ಅರಣ್ಯವಾಸಿಗಳಿಗೆ ಹಕ್ಕು ಪತ್ರ ದೊರೆಯಲು ಅಡ್ಡಿಯಾಗಿರುವ ಅರಣ್ಯ ಹಕ್ಕು ಮಾನ್ಯತ ಕಾಯ್ದೆ - 2006 ಕ್ಕೆ, 2005 ರ ಪೂರ್ವ ಸಾಗುವಳಿಯಲ್ಲಿ ತೊಡಗಿದ ಎಲ್ಲ ಬಡ ಸಾಗುವಳಿದಾರರಿಗೆ ಹಕ್ಕು ಪತ್ರ ದೊರೆಯುವಂತೆ ತಿದ್ದುಪಡಿಗೆ ಕ್ರಮವಹಿಸಬೇಕು. ಅಲ್ಲಿಯವರೆಗೆ ಬಡ ಸಾಗುವಳಿದಾರರನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸಲು ದೌರ್ಜನ್ಯ ನಡೆಸದಂತೆ ತಡೆ ನೀಡಬೇಕು.
ಉ) ರಾಜ್ಯದಾದ್ಯಂತ ಹಲವು ದಶ ಲಕ್ಷಾಂತರ ಸಂಖ್ಯೆಯಲ್ಲಿ ಇರುವ ನಿವೇಶನ ರಹಿತರ ಗಣತಿ ನಡೆಸಿ ನಿವೇಶನ ಹಾಗೂ ಹಿತ್ತಲು ಸಹಿತ ಉಚಿತ ಮನೆಯನ್ನು ವಿತರಿಸಲು ಅಗತ್ಯ ಕ್ರಮ ವಹಿಸಬೇಕು. ಗ್ರಾಮ ಪಂಚಾಯತ್ಗಳ ಮೂಲಕ ವಿತರಿಸಲು ಉದ್ದೇಶಿಸಿದ್ದ 1.20 ಲಕ್ಷ ಮನೆಗಳನ್ನು ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ರದ್ದು ಪಡಿಸಿರುವುದನ್ನು ವಾಪಾಸು ಪಡೆದು ನಿರ್ಮಿಸಲು ಕ್ರಮ ವಹಿಸಬೇಕು.

ಸುಗ್ಗಿ ಪೂರ್ವದಿಂದಲೇ ಖರೀದಿ
3) ರೈತ ಹಾಗೂ ಕೂಲಿಕಾರರ ಮತ್ತು ಮಹಿಳೆಯರ ಸಾಲ ಮನ್ನಾ ಮಾಡಿರಿ:
ಕಳೆದ ನಾಲ್ಕು ವರ್ಷಗಳಿಂದ ರಾಜ್ಯದ ಗ್ರಾಮೀಣ ಪ್ರದೇಶ ಸರಕಾರಗಳ ಪರಿಣಾಮಕಾರಿ ಮಧ್ಯ ಪ್ರವೇಶದ ಕೊರತೆಯಿಂದ, ಕೋವಿಡ್ ಹಾಗೂ ಅತೀವೃಷ್ಟಿ ಹಾಗೂ ಪ್ರವಾಹಗಳಿಂದ ತೀವ್ರ ರೀತಿಯ ಬಾಧೆಗೊಳಗಾಗಿದ್ದು ಗ್ರಾಮೀಣ ಸಾಲದ ಮಾರಕ ದಾಳಿಗೆ ತುತ್ತಾಗಿದೆ. ಆದ್ದರಿಂದ ತಕ್ಷಣ ರೈತರು, ಕೂಲಿಕಾರರು, ಕಾರ್ಮಿಕರು, ಕಸುಬುದಾರರು ಹಾಗೂ ಸ್ತ್ರೀ ಶಕ್ತಿ ಮತ್ತು ಸ್ವ ಶಕ್ತಿ ಸ್ವ ಸ ಹಾಯ ಗುಂಪುಗಳ ಸಾಂಸ್ಥಿಕ ಹಾಗೂ ಖಾಸಗಿ ಸಾಲಗಳನ್ನು ಮನ್ನಾ ಮಾಡಬೇಕು.
4) ಪ್ರೋತ್ಸಾಹ ಧನದೊಂದಿಗೆ ಬೆಂಬಲ ಬೆಲೆಗೆ ಖರೀದಿಸಲು, ಸುಗ್ಗಿ ಪೂರ್ವದಿಂದಲೇ ಖರೀದಿ ಕೇಂದ್ರ ತೆರೆಯಿರಿ
ರಾಜ್ಯದ ರೈತಾಪಿ ಜನತೆ ಈ ರೀತಿ ಸಾಲ ಬಾಧಿತರಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿಯೇ ಕೇಂದ್ರ ಸರಕಾರ ನಿಗದಿಸಿದ ಕೃಷಿ ಉತ್ಪನ್ನಗಳ ಬೆಂಬಲಿತ ಬೆಲೆಗೆ ಪ್ರೋತ್ಸಾಹ ಧನವನ್ನು ನೀಡಿ ಸುಗ್ಗಿ ಪೂರ್ವ ಖರೀದಿಸುವುದನ್ನು ಅಮಾನವೀಯವಾಗಿ ನಿಲ್ಲಿಸಲಾಗಿದೆ ಇಲ್ಲವೇ ಕಡಿತಗೊಳಿಸಲಾಗಿದೆ. ಇದರಿಂದ ಕೋಟ್ಯಾಂತರ ಎಕರೆ ಪ್ರದೇಶದ ಭತ್ತ, ತೊಗರಿ, ಮೆಕ್ಕೆಜೋಳ, ಹತ್ತಿ, ರಾಗಿ, ಜೋಳ, ಶೇಂಗಾ ಮುಂತಾದ ಬೆಳೆಗಾರರು ತೀವ್ರ ನಷ್ಟಕ್ಕೀಡಾಗಿದ್ದಾರೆ.
ಕೂಡಲೇ ಹಿಂದಿನಂತೆ ಕನಿಷ್ಠ ಬೆಂಬಲ ಬೆಲೆಗೆ ಪ್ರೋತ್ಸಾಹ ಧನವನ್ನು ಪ್ರಕಟಿಸಿ ಸುಗ್ಗಿ ಪರ್ವದಲ್ಲಿ ಖರೀದಿಸಲು ಅಗತ್ಯ ಕ್ರಮ ವಹಿಸಬೇಕು.

ಉದ್ಯೋಗಖಾತ್ರಿ ಕೂಲಿ
5) ಉದ್ಯೋಗಖಾತ್ರಿ ಕೂಲಿ ಹಾಗೂ ಕೆಲಸದ ದಿನ ಹೆಚ್ಚಿಸಿ ಹಾಗೂ 10 ರಿಂದ 4 ಗಂಟೆಯವರೆಗಿನ ಕೆಲಸದ ಆದೇಶ ವಾಪಾಸು ಪಡೆಯಿರಿ;
ರಾಜ್ಯದ ಬಡರೈತರು, ಕೂಲಿಕಾರರು, ಕಸುಬುದಾರರು ಸಂಕಷ್ಠ ನಿವಾರಣೆಗಾಗಿ ಉದ್ಯೋಗ ಖಾತ್ರಿ ಕೆಲಸವನ್ನು ನೆಚ್ಚಿಕೊಂಡಿದ್ದಾರೆ. ಆದರೇ ರಾಜ್ಯದಲ್ಲಿ ಸರಾಸರಿ 100 ದಿನಗಳ ಉದ್ಯೋಗ ನೀಡಲಾಗುತ್ತಿಲ್ಲ. ಈಗ ನೀಡುವ ಉದ್ಯೋಗ ದಿನಗಳ ಪ್ರಮಾಣ ಸರಾಸರಿ 50 ದಿನಗಳಿಗೂ ಕಡಿಮೆ ಇದೆ. ಬರಗಾಲದ ಸಂದರ್ಭದಲ್ಲಿ 150 ದಿನಗಳ ಉದ್ಯೋಗವೆಂದಿದ್ದಾಗಲೂ ಅದು ದೊರೆಯುತ್ತಿಲ್ಲ. ರಾಜ್ಯ ಸರಕಾರ ಕೃಷಿಯಲ್ಲಿ ಕನಿಷ್ಠ ಕೂಲಿ 425 ರೂ ಗಳೆಂದಿದ್ದರೂ ಈಗಲೂ 290 ರೂಗಳಷ್ಟೇ ನೀಡಲಾಗುತ್ತದೆ.
ಮೇಟಿಗಳಿಗೆ ಪ್ರತ್ಯೇಕ ವೇತನವಿಲ್ಲ.
ಹೀಗಿರುವಾಗಲೇ ಸರಕಾರ ಕೂಲಿಕಾರರು ಕೆಲಸದ ಮೇಲೆ ಬೆಳಿಗ್ಗೆ 10 ಗಂಟೆಯಿಂದ 4 ಗಂಟೆಯವರೆಗೆ ಇರಬೇಕೆಂದು ಆದೇಶ ಹೊರಡಿಸಿರುವುದು ಹಾಸ್ಯಾಸ್ಪದವಾಗಿದೆ. ಹಾಗಿದ್ದರೇ ಎಲ್ಲಾ ಕೂಲಿಕಾರರನ್ನು ಸರಕಾರಿ ನೌಕರರೆಂದು ಪರಿಗಣಿಸಬೇಕು. ತಕ್ಷಣವೇ, ಆ ಆದೇಶ ವಾಪಾಸು ಪಡೆಯಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶ ಹಾಗೂ 200 ದಿನಗಳಿಗೆ ವಿಸ್ಥರಿಸಬೇಕು ಮತ್ತು ಕೂಲಿಯನ್ನು 2021 ರಿಂದಲೇ ಜಾರಿಗೆ ಬರುವಂತೆ 425 ರೂಗಳಿಗೆ ಹೆಚ್ಚಿಸಿ ನೀಡಬೇಕು. ಹಾಗೂ ಮೇಟಿಗಳಿಗೆ ಪ್ರತ್ಯೇಕ ವೇತನ ನೀಡಬೇಕು.

ಕೇರಳ ಮಾದರಿಯಲ್ಲಿ ಒದಗಿಸಲು ಕ್ರಮ
6) ರೇಷನ್ ಕಡಿತ ವಾಪಾಸು ಪಡೆದು ತಲಾ 10 ಕೆಜಿ ಸಮಗ್ರ ಪಡಿತರ ಒದಗಿಸಿರಿ
ಮೇಲೆ ಹೇಳಲಾದ ಕಾರಣಗಳಿಂದಲೇ ಗ್ರಾಮೀಣ ಹಾಗು ನಗರ ಪ್ರದೇಶದ ಆದಾಯ ತೀವ್ರ ಪ್ರಮಾಣದಲ್ಲಿ ಕುಸಿದಿರುವಾಗ, ಬಿಪಿಎಲ್ ಪಡಿತರದಾರರಿಗೆ ವಿತರಿಸುವ ತಲಾವಾರು ಅಕ್ಕಿ ನೀಡಿಕೆಯ ಪ್ರಮಾಣವನ್ನು ಮಾಸಿಕ ಐದರಿಂದ ಎರಡು ಕೆಜಿಗೆ ಇಳಿಸಿರುವುದು ನಾಚಿಕೆಗೇಡಿನ ಕ್ರಮವಾಗಿದೆ. ತಕ್ಷಣವೇ ಪಡಿತರ ಚೀಟಿದಾರರಿಗೆ ತಲಾ 10 ಕೆಜಿ ಸಮಗ್ರ ಆಹಾರ ಧಾನ್ಯವನ್ನು ಕೇರಳ ಮಾದರಿಯಲ್ಲಿ ಒದಗಿಸಲು ಕ್ರಮ ವಹಿಸಬೇಕು.

ಹದ್ದು ಬಸ್ತು ಮತ್ತಿತರೆ ಶುಲ್ಕ ಏರಿಕೆ ಬೇಡ
7) ಪೋಡಿ ಹಾಗೂ ಹದ್ದು ಬಸ್ತು ಮತ್ತಿತರೆ ಶುಲ್ಕ ಏರಿಕೆ ಬೇಡ;
ಈಗಾಗಲೇ ಕೇಂದ್ರ ಸರಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ರಾಸಾಯನಿಕ ಗೊಬ್ಬರಗಳ ಬೆಲೆಯನ್ನು ಹೆಚ್ಚಿಸಿದೆ. ಈಗ ರಾಜ್ಯ ಸರಕಾರ ರೈತರ ಜಮೀನುಗಳ ಪೋಡಿ ಶುಲ್ಕ ಮತ್ತು ಹದ್ದು ಬಸ್ತು ಶುಲ್ಕಗಳನ್ನು ಹೆಚ್ಚಿಸಿದೆ. ಮಾತ್ರವಲ್ಲಾ ವಿವಿಧ ಸೌಲಭ್ಯ ಪಡೆಯಲು ನೀಡ ಬೇಕಾದ ಪಹಣಿ ಮತ್ತಿತರೇ ಸರ್ಟಿಫಿಕೇಟ್ಗಳ ಶುಲ್ಕವನ್ನು ಹೆಚ್ಚಿಸಿ ಅಟಲ್ ಜಿ ಕೇಂದ್ರಗಳ ಹಾಗೂ ಸಿಬ್ಬಂದಿಯ ವೆಚ್ಚವನ್ನು ಭರಿಸುವಂತೆ ಕ್ರಮವಹಿಸಿ, ಬಡವರು ಹಾಗೂ ರೈತರ ಮೇಲೆ ಒತ್ತಷ್ಟು ಹೊರೆ ಹೇರಿರುವುದು ತೀವ್ರ ಖಂಡನೀಯವಾಗಿದೆ. ತಕ್ಷಣವೇ ಈ ಎಲ್ಲ ಶುಲ್ಕ ಹೇರಿಕೆಯನ್ನು ವಾಪಾಸು ಪಡೆಯಬೇಕು.

ಜಾನುವಾರು ಹತ್ಯ ನಿಷೇಧ ಕಾಯ್ದೆ
8) ಹಾಲಿನ ಸಹಾಯ ಧನವನ್ನು 15 ರೂ ಗೆ ಹೆಚ್ಚಿಸಿರಿ
ರಾಜ್ಯದ ಕೋಟ್ಯಂತರ ಹಾಲು ಉತ್ಪಾದಕರು ಈಗಾಗಲೇ ಬೇರೆ ದಾರಿ ಕಾಣದೇ ಅನಿವಾರ್ಯವಾಗಿ, ನಷ್ಠದಲ್ಲಿ ಉತ್ಪಾದನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಮೇಲೆ ಸರಕಾರದ ಜಾನುವಾರು ಹತ್ಯ ನಿಷೇಧ ಕಾಯ್ದೆ ಮತ್ತಷ್ಟು ಹೊರೆಯನ್ನು ಹೇರಿದೆ. ಹಾಲು ಕರೆಯುವ ಜಾನುವಾರುಗಳಿಗೆ ನೀಡುವ ಫೀಡ್ಗಳ ಬೆಲೆಯು ಹೆಚ್ಚಳವಾಗಿದೆ. ಉತ್ಪಾದನಾ ವೆಚ್ಚವೇ ತಲಾ ಲೀಟರ್ಗೆ 35 ರೂ. ಗಳಿಗಿಂತಲೂ ಹೆಚ್ಚಾಗಿದೆ. ಅಂತಹದ್ದರಲ್ಲಿ ಸರಕಾರ ನೀಡುವ ತಲಾ ಲೀಟರ್ನ 5 ರೂ ಸಹಾಯಧನ ಸೇರಿ ಲೀಟರ್ಗೆ 30 ರೂ. ಗಿಂತಲೂ ಕಡಿಮೆ ಸಿಗುತ್ತಿದೆ.
ಆದ್ದರಿಂದ ಪ್ರತಿ ಲೀಟರ್ ಹಾಲಿಗೆ ಸಹಾಯಧನವನ್ನು 15 ರೂ ಗಳಿಗೆ ಹೆಚ್ಚಿಸಬೇಕು.
ಈ ಎಲ್ಲಾ ಅಂಶಗಳನ್ನು ರಾಜ್ಯ ಸರಕಾರ ಕೂಡಲೇ ಪರಿಗಣಿಸಿ ಮುಂಬರುವ ಬಜೆಟ್ ಅಧಿವೇಶನ ಪೂರ್ಣಗೊಳ್ಳುವ ಮುನ್ನವೇ ಜಾರಿಗೊಳಿಸಲು ಈ ಮೂಲಕ ಮರಳಿ ಒತ್ತಾಯಿಸುತ್ತೇವೆ.












Click it and Unblock the Notifications