ಇದೇ ಕೊನೆ ಸಭೆ, ಮತ್ತೆ ಮಾತುಕತೆ ಇಲ್ಲ: ರೈತರ ಎಚ್ಚರಿಕೆ
ನವದೆಹಲಿ, ಡಿಸೆಂಬರ್ 5: ರಾಜಧಾನಿ ದೆಹಲಿಯಲ್ಲಿ ರೈತರ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಲುವ ಸೂಚನೆ ದೊರಕಿದ್ದು, ಕೃಷಿ ಕಾಯ್ದೆಗಳ ಕುರಿತು ರೈತರ ಮನವೊಲಿಕೆ ಮಾಡಿ ಪ್ರತಿಭಟನೆ ಹಿಂದಕ್ಕೆ ಪಡೆಯುವಂತೆ ಮನವಿ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಶನಿವಾರ ಐದನೇ ಸುತ್ತಿನ ಮಾತುಕತೆ ನಡೆಸಲಿದೆ. ಈ ಸಭೆಗೂ ಮುನ್ನ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ್ದಾರೆ.
ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಪ್ರತಿಭಟನೆ ಹಿಂದಕ್ಕೆ ಪಡೆಯುವಂತೆ ಯಾವ ರೀತಿ ಮನವೊಲಿಸುವುದು ಮತ್ತು ಅವರು ಪ್ರತಿಭಟನೆ ಹಿಂದಕ್ಕೆ ಪಡೆದುಕೊಳ್ಳದೆ ಹೋದರೆ ಯಾವ ಕ್ರಮ ಅನುಸರಿಸಬೇಕು ಎಂಬ ಬಗ್ಗೆ ಪ್ರಧಾನಿ ಮೋದಿ ಅವರೊಂದಿಗೆ ಕೇಂದ್ರ ಸಚಿವರ ತಂಡ ಸಮಾಲೋಚನೆ ನಡೆಸಿದೆ.
ಶನಿವಾರದ ಸಭೆ ಫಲಪ್ರದವಾಗದೆ ಹೋದರೆ ಬಳಿಕ ಮತ್ತೆ ಸರ್ಕಾರದೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ. ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂದಿರುವ ರೈತರು, ಸಂಸತ್ಗೆ ಮುತ್ತಿಗೆ ಹಾಕುವ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ.

ರೈತರ ಪ್ರತಿಭಟನೆ ಹತ್ತನೇ ದಿನಕ್ಕೆ ಕಾಲಿರಿಸಿದೆ. 'ಇಂದು ಕೇಂದ್ರದ ನಾಯಕರೊಂದಿಗೆ ನಡೆಯುವ ಸಭೆ ಸಕಾರಾತ್ಮಕ ಅಂತ್ಯ ಕಾಣಲಿದೆ ಎಂಬ ಆಶಾಭಾವವಿದೆ. ನಮ್ಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಒಪ್ಪುವವರೆಗೂ ನಾವು ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ. ನಾವು ಚಳವಳಿಯನ್ನು ಮತ್ತಷ್ಟು ದೊಡ್ಡದಾಗಿಸುತ್ತೇವೆ' ಎಂದು ರೈತರು ಹೇಳಿದ್ದಾರೆ.
'ಶನಿವಾರ ನಡೆಯುವ ಸಭೆಯು ರೈತರ ಎಲ್ಲ ಸಂದೇಹಗಳನ್ನು ಬಗೆಹರಿಸಲಿದೆ ಮತ್ತು ಫಲಪ್ರದವಾಗಲಿದೆ. ಇತ್ತೀಚಿನ ಸಭೆಗಳಲ್ಲಿ ಕೆಲವು ವಿಚಾರಗಳನ್ನು ಮನದಟ್ಟು ಮಾಡಲಾಗಿತ್ತು. ಇದು ವಿರೋಧಪಕ್ಷದ ರಾಜಕೀಯ. ಅವರೇ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಈ ಬಾರಿ ಸಭೆ ಫಲಪ್ರದವಾಗಲಿದ್ದು, ರೈತರು ಪ್ರತಿಭಟನೆಯನ್ನು ವಾಪಸ್ ಪಡೆಯಲಿದ್ದಾರೆ' ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಕೈಲಾಶ್ ಚೌಧರಿ ಭರವಸೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications